ಸಿಂಧನೂರಿನಲ್ಲಿ ಭೀಕರ ಅಪಘಾತ : ಸ್ಥಳದಲ್ಲೇ 11 ಸಾವು
ಬೆಂಗಳೂರಿನಲ್ಲಿ ನಿಧನರಾಗಿದ್ದ ಲಿಂಗಪ್ಪ ಎಂಬುವವರನ್ನು ಅವರ ತವರೂರಾದ ಹತ್ತಿಕುಣಿ ಗ್ರಾಮಕ್ಕೆ ತರುತ್ತಿದ್ದಾಗ ಅವರಿದ್ದ ಆಂಬುಲೆನ್ಸ್ ಮತ್ತು ಲಾರಿ ನಡುವೆ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಡೇಸುಗೂರು ಬಳಿ ರಾಜ್ಯ ಹೆದ್ದಾರಿ 23ರಲ್ಲಿ ಬೆಳಗಿನ ಜಾವ 4 ಗಂಟೆಗೆ ನಡೆದ ಭೀಕರ ಅಪಘಾತದಲ್ಲಿ ಪುಟ್ಟ ಕಂದಮ್ಮಗಳೂ ಸೇರಿದಂತೆ 11 ಜನ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಗ್ರಾಮದ ಲಿಂಗಪ್ಪ ಎನ್ನುವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನಹೊಂದಿದ್ದರು. ಅವರ ಶವ ತರಲು ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಸಂಬಂಧಿಕರು ಹಾಗೂ ಗ್ರಾಮಸ್ಥರು ಟೆಂಪೋವೊಂದನ್ನು ಕಟ್ಟಿಕೊಂಡು ಬೆಂಗಳೂರಿಗೆ ತೆರಳಿದ್ದರು. ಬರುವಾಗ ಆಂಬುಲೆನ್ಸ್ನಲ್ಲಿ ಬರ್ತಾಯಿದ್ದರು. ಆದರೆ ಜವರಾಯ ಸಿಂಧನೂರು ತಾಲೂಕಿನ ಗಡೆಸುಗೂರು ಗ್ರಾಮದಲ್ಲಿ ಕಾದು ಕುಳಿತ್ತಿದ್ದ. ಲಾರಿ ಗುದ್ದಿದ ರಭಸಕ್ಕೆ ಆಂಬುಲೆನ್ಸ್ನಲ್ಲಿದ್ದ 11 ಜನ ಸ್ಥಳದಲ್ಲೆ ಸಾವನ್ನಪ್ಪಿ ಏಳು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರಾಗಿರುವವರು : ಲಿಂಗಪ್ಪನ ಮಗ ನಿಂಗಪ್ಪ, ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ತಳಬಿಡಿ ಗ್ರಾಮದ ಸಿದ್ದಪ್ಪ, ಸಾಬಮ್ಮ, ವಿಜಯ ಮತ್ತು ಕಾಮಣ್ಣ, ಜಿನಕೇರಿ ಗ್ರಾಮದ ಕಮಲಮ್ಮ, ಮಹಾದೇವಪ್ಪ, ಯಾದಗಿರಿ ನಗರದ ಮರೇಪ್ಪ ಮತ್ತು ವಿಜಯಕುಮಾರ ಎಂದು ತಿಳಿದು ಬಂದಿದೆ. ಹತ್ತಿಕುಣಿ ಗ್ರಾಮದಲ್ಲಿ ಈಗ ಸ್ಮಶಾನ ಮೌನ. ಎಲ್ಲೆಂದರಲ್ಲಿ ಸಂಬಂಧಿಕರ ಆಕ್ರಂದನ. ತಮ್ಮ ಊರಿನ ಜನರನ್ನು ಕಳೆದುಕೊಂಡ ಗ್ರಾಮದವರಲ್ಲಿ ನೀರವ ಮೌನ.