ರವಿ ಬೆಳಗೆರೆ: ಟಿವಿ9, ಸುವರ್ಣದಿಂದ ಸಖತ್ ವೀಕೆಂಡ್
ಈ ವೀಕೆಂಡ್ ಎಪಿಸೋಡ್ ವೀಕ್ಷಕ ಮಹಾಶಯರಿಗೆ ಅಗತ್ಯವಿತ್ತಾ? ಎಂಬುದಕ್ಕಿಂತ ಅಂತಹುದಕ್ಕೆ TV9 ಮತ್ತು ಸುವರ್ಣ ಚಾನೆಲುಗಳು ವೇದಿಕೆಯನ್ನೊದಗಿಸಿದವು. ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಅದದರದೇ ಕಾರಣಗಳಿಗಾಗಿ ಚಾರಿತ್ರಿಕ ದಿನವಾಗಿ ಹೋಯಿತು.
ಅಥವಾ Public TVಯಲ್ಲಿ ರಂಗಣ್ಣ ಹೇಳಿದಂತೆ ಚಿತ್ರಕ್ಕೆ ಪುಗಸಟ್ಟೆ ಪ್ರಚಾರ ಗಿಟ್ಟಿಸುವ ಗಿಮಿಕ್ ಇದಾಗಿತ್ತಾ? ಎಂಬ ಪ್ರಶ್ನೆಯೂ ಕಾಡಬಹುದು. ಆದರೆ ಸುವರ್ಣ ನ್ಯೂಸ್ ಮಂದಿ ಬೆಟ್ಟ ಅಗೆಯುತ್ತಾ ಕಾರ್ಯಕ್ರಮದ ಕೊನೆಗೆ ಬಂದಾಗ ರಂಗನಾಥ್ ಭಾರದ್ವಾಜ್ 'ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ. ಆದರೂ ಭೀಮಾ ತೀರದಲ್ಲಿ ಚಿತ್ರಕ್ಕೆ ಮಾತ್ರ ಭರ್ಜರಿ ಪುಗಸಟ್ಟೆ ಪ್ರಚಾರ ಸಿಕ್ಕಿತು' ಎಂದು ಎಂದಿನಂತೆ ಆತುರದಿಂದ ಅಂದುಬಿಟ್ಟರು.
ಅದಕ್ಕೆ ಅನತಿ ದೂರದಲ್ಲೇ ಕುಳಿತಿದ್ದ ದುನಿಯಾ ವಿಜಿ ಮೈಕೊಡವಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದಂತೆ ಇದು ಪ್ರಚಾರ ಗಿಟ್ಟಿಸುವ ಗಿಮಿಕ್ ಅಂತೂ ಆಗಿರಲಿಲ್ಲ ಎನಿಸುತ್ತದೆ.
ಭಾರಿ ಮಳೆಯನಂತರ ಇನ್ನೂ ಹನಿ ನಿಂತಿಲ್ಲ... ವಿಷಯ ಇನ್ನೂ ಭಾರಿ ಚರ್ಚೆಗೆ ಎಡವು ಮಾಡಿಕೊಟ್ಟಿದೆ. ಮಾಧ್ಯಮದ ಮಿತ್ರರು, ಸಿನಿಮಾ ಮಂದಿ, ಕೊನೆಗೆ ಕದನ ಕುತೂಹಲಿಗಳು ವಿಷಯವನ್ನು ಇನ್ನೂ ಜೀವಂತವಿಟ್ಟಿದ್ದಾರೆ. ಮಂದಿ ತಮ್ಮ ಮೂಗಿನ ನೇರಕ್ಕೆ, ತಮ್ಮವರ ಪರ ವಹಿಸಿಕೊಂಡು ಸಮರೋಪಾದಿಯಲ್ಲಿ ಮಾತಿನ ಕದನಕ್ಕೆ ಇಳಿದಿದ್ದಾರೆ. ಕೊನೆಗೆ, ಯುದ್ಧ ಗೆದ್ದವರಂತೆ ಮೀಸೆ ತಿರುವಿಕೊಳ್ಳುತ್ತಿದ್ದಾರೆ.
ನಿಮ್ಮ ಮೆಚ್ಚಿನ 'ದಟ್ಸ್ ಕನ್ನಡ' ಯಾರದೇ ಪರ-ವಿರೋಧ ವಹಿಸಿಕೊಳ್ಳದೆ ಚಾನೆಲುಗಳಲ್ಲಿ ನಡೆದ ಕದನ ಕಥನವನ್ನು ಯಥಾವತ್ತಾಗಿ ವರದಿ ಮಾಡುತ್ತಿದೆ. ಇದರಿಂದ 'ದಟ್ಸ್ ಕನ್ನಡ'ದಲ್ಲೂ ಈ ವೀಕೆಂಡ್ ಎಪಿಸೋಡ್ ಕುರಿತು ಚರ್ಚೆಗಳು ನಡೆಯುತ್ತಿವೆ. ಓದುಗ ದೊರೆಗಳು ಒಂದೇ ಸಮನೆ ತಮ್ಮ ಖಡಕ್ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ವಿಷಯ ಕುರಿತು ಈ ವಾರವೆಲ್ಲ ಚರ್ಚೆ ನಡೆಯುವ ಲಕ್ಷಣಗಳು ಹೆಚ್ಚಾಗಿವೆ.
ಈ ಮಧ್ಯೆ, ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಅವರು ನಿನ್ನೆ ರಾತ್ರಿ ಮತ್ತೆ TV9ನ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮೇಲೆ ಬಂದಿರುವ ಆಪಾದನೆಗಳನ್ನು ತೊಡೆದು ಹಾಕಿ, ದೋಷ ಮುಕ್ತರಾಗಲು ಯತ್ನಿಸಿದರು. ಆ ಬಗ್ಗೆಯೂ 'ದಟ್ಸ್ ಕನ್ನಡ'ದಲ್ಲಿ ವರದಿಗಳಿವೆ.