ರೆಡ್ಡಿಯಿಂದ 5 ಪೈಸೆನೂ ತಗೊಂಡಿಲ್ಲ: ರವಿ ಬೆಳಗೆರೆ
ಪತ್ರಕರ್ತ ರವಿ ಬೆಳಗೆರೆ ಅವರು ತಮಗೆ ಅಂಟಿಕೊಂಡಿರುವ ಕಳಂಕಗಳನ್ನು ತೊಡೆದುಹಾಕಲು ಇದನ್ನು ಸೂಕ್ತ ವೇದಿಕೆಯನ್ನಾಗಿಸಿಕೊಂಡರು. ಅನೇಕ ಸಂಬಂಧಗಳ ಬಗ್ಗೆ ಎದ್ದಿದ್ದ ಗಾಳಿಸುದ್ದಿಗಳನ್ನು ಬೆಳಗೆರೆ ತೊಡೆದುಹಾಕಲು ಯತ್ನಿಸಿದರು. ಮುಖ್ಯವಾಗಿ ತಮ್ಮ ಮತ್ತು ಸದ್ಯಕ್ಕೆ ಜೈಲುವಾಸಿಯಾಗಿರುವ ಜನಾರ್ದನ ರೆಡ್ಡಿ ನಡುವಣ ವ್ಯಾವಹಾರಿಕ ಸಂಬಂಧದ ಬಗ್ಗೆ ರವಿ ಬಿಡಿಸಿ ಹೇಳಿದರು.
ರೆಡ್ಡಿ ಜತೆ ಕೋಟ್ಯಂತರ ರೂ. ವ್ಯಾವಹಾರಿಕ ಸಂಬಂಧ ಇರುವುದನ್ನು ರವಿ ಒಂದೇ ಏಟಿಗೆ ಹೊಡೆದು ಹಾಕಿದರು. ಆತನಿಂದ ಐದು ಪೈಸೆನೂ ಇಸಕೊಂಡಿಲ್ಲ. ತಾನೆಂದೂ ಆತನ ಮನೆಗೆ ಹೋಗಿಲ್ಲ. ಅಷ್ಟೇ ಅಲ್ಲ ಆತನ ಜತೆ ತನಗೆ ಯಾವುದೇ ವೈಯಕ್ತಿಕ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ತನಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿವಾಕರ ಬಾಬು ಜತೆಗಿದ್ದಿದ್ದ ವಿರೋಧದಿಂದಾಗಿ ಜನಾ ರೆಡ್ಡಿ ಪರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ, ಆತನ ಪರ ಮತ ಯಾಚಿಸಿದನೇ ಹೊರತು. ದುಡ್ಡಿನ ಹಂದೆ ಬಿದ್ದು ರೆಡ್ಡಿಗೆ ಮಣೆ ಹಾಕಲಿಲ್ಲ ಎಂದು ಈ ಹಿಂದೆ ಹೇಳಿದ್ದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಆ ನಂತರ ಅದರಲ್ಲೂ ಜನಶ್ರೀ ಚಾನೆಲ್ ಬಂದ ನಂತರ ತಾವು ರೆಡ್ಡಿಗೆ ಮತ್ತಷ್ಟು ಹತ್ತಿರವಾಗಿದ್ದನ್ನು ಖಡಾಖಂಡಿತವಾಗಿ ರವಿ ನಿರಾಕರಿಸಿದರು. ಅಸಲಿಗೆ ಆತ (ರೆಡ್ಡಿ) ಚಂಚಲಗೂಡ ಜೈಲುಪಾಲಾದ ಬಳಿಕ ಆತನ ಬಗ್ಗೆಯಿದ್ದ ಒಳ್ಳೆ ಅಭಿಪ್ರಾಯ ಕಮರಿಹೋಯಿತು. ಆತ ಆ ಜೈಲು ಈ ಜೈಲು ಅಂತ ಓಡಾಡುತ್ತಿರುವುದರಿಂದ ಆತನಿಂದ ಸಂಪೂರ್ಣವಾಗಿ ದೂರವಾಗಿದ್ದೇನೆ. ಆತ ಪರಪ್ಪನ ಅಗ್ರಹಾರಕ್ಕೆ ಬಂದನೆಂದು ಆತನನ್ನು ನೋಡುವ, ಆತನಿಗೆ ಒಂದು ಫೋನ್ ಕಾಲ್ ಮಾಡುವ ಉಮೇದಿಯೂ ತನ್ನಲ್ಲಿಲ್ಲ ಎಂದು ಬೆಳಗೆರೆ ಸ್ಪಷ್ಟಪಡಿಸಿದರು.