ಜರ್ದಾರಿ ಜಬರ್ದಸ್ತ್ ಊಟದ ಮೆನು ಔಟ್
ಪ್ರಧಾನಿ ಮನಮೋಹನ್ ಸಿಂಗ್ ಅವರ 7ಆರ್ ಸಿಆರ್ ನಿವಾಸಲ್ಲಿ ಅಧ್ಯಕ್ಷ ಜರ್ದಾರಿ ಹಾಗೂ ಅವರ 40 ಜನರ ಪರಿವಾರಕ್ಕೆ ಭರ್ಜರಿ ಭೋಜನ ಕೂಟ ನೀಡಲಾಗುತ್ತಿದ್ದು, ಯಾರು ಯಾರು ಪಾಲ್ಗೊಳ್ಳಲಿದ್ದಾರೆ. ಊಟದ ಮೆನು ಏನು ಎಂಬುದು ಬಹಿರಂಗವಾಗಿದೆ.
ಭಾರತದ ವಿವಿಧ ಪ್ರದೇಶದ ರುಚಿಕರ ಖಾದ್ಯಗಳನ್ನು ಆಯ್ಕೆ ಮಾಡಿ ಜರ್ದಾರಿ ಅವರಿಗೆ ನೀಡಲಾಗುತ್ತಿದೆ. ಮೊಸರು ಮಿಶ್ರಿತ ಕಾಶ್ಮೀರ ಗೋಶ್ತಬ ಮಾಂಸದುಂಡೆಗಳ ಸಾರು ಪ್ರಮುಖ ಖಾದ್ಯವಾಗಲಿದೆ.
ಉಳಿದಂತೆ ದೋಸೆ, ಅವಿಯಲ್(ಮಿಶ್ರ ತರಕಾರಿ ಸಹಿತ), ಕರಾವಳಿಯ ಸೀಗಡಿ ಮೀನಿನ ಖಾದ್ಯ ದಕ್ಷಿಣ ಭಾರತದ ಕಡೆಯಿಂದ ಪಾಕ್ ಅಧ್ಯಕ್ಷರ ಹೊಟ್ಟೆಪೂಜೆಗೆ ಸಿದ್ಧವಾಗಿದೆ.
ಮಧ್ಯ ಭಾರತದಿಂದ ಬರ್ರಾ ಕಬಾಬ್, ಉತ್ತರ ಫಿರ್ನಿ ಹಾಗೂ ಬೆಂಗಾಳಿ ಖಾದ್ಯ ಸಂದೇಶ್ ಜರ್ದಾರಿ ಪರಿವಾರದ ಹೊಟ್ಟೆ ತುಂಬಿಸಲಿದೆ.
ಸೋನಿಯಾಜಿ ಮಿಸ್ : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭೋಜನ ಕೂಟಕ್ಕೆ ತೆರಳದೆ ತಮ್ಮ ಪ್ರತಿನಿಧಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಕಳುಹಿಸಿದ್ದಾರೆ. ಸೋನಿಯಾಜಿ ಅವರ ಗೈರು ಹಾಜರಾತಿ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಉಳಿದಂತೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಬಿಜೆಪಿಯ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಇನ್ನೂ ಅನೇಕ ನಾಯಕರು ಸೌಹಾರ್ದ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.