ಕುಂದಾಪುರ ಸಂಸ್ಕೃತಿಯ ಕನ್ನಡಿ ಕುಂದಾಪ್ರ ಡಾಟ್ ಕಾಂ
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ. ಎಚ್ ಶಾಂತಾರಾಮ್ ಅವರು ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ವೆಬ್ಸೈಟನ್ನು ಶುಕ್ರವಾರ ಬಿಡುಗಡೆಗೊಳಿಸಿದರು. ಕಾಲೇಜು ಹಾಗೂ ಸುತ್ತಲಿನ ಪರಿಸರಕ್ಕೆ ಪೂರಕವಾಗುವಂತಹ ಇಂತಹ ಉತ್ತಮ ಕೆಲಸಗಳು ಇಲ್ಲಿಗೆ ಕೊನೆಗೊಳ್ಳದೆ, ನಿರಂತರವಾದ ನಡೆದು ಪ್ರಗತಿಯನ್ನು ಸಾಧಿಸಿದಾಗ ಅದು ಉಳಿದವರಿಗೂ ಸ್ಪೂರ್ತಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ ದೋಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಪೂರ್ವಾಧ್ಯಕ್ಷರಾದ ಎ.ಎಸ್.ಎನ್ ಹೆಬ್ಬಾರ್ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಓಂ ಗಣೇಶ್ ಉಪ್ಪುಂದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವಿನಾಕುಮಾರಿ ನಿರೂಪಿಸಿದರು. ವೆಬ್ಸೈಟ್ ರೂಪಿಸಿದ ಸುನಿಲ್ ಎಚ್. ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮನುಷ್ಯ ತನ್ನ ಬದುಕಿನಲ್ಲಿ ವೃದ್ಧಿ, ಅಭಿವೃದ್ಧಿ, ಸಮೃದ್ಧಿ ಈ ಮೂರು ಪದಗಳ ಅರ್ಥವನ್ನು ಚೆನ್ನಾಗಿ ತಿಳಿದು ಮುಂದುವರಿಯಬೇಕು. ಪ್ರಸಿದ್ಧಿಯನ್ನು ಪಡೆಯುವ ಭರದಲ್ಲಿ ನೈತಿಕತೆಯನ್ನು ಮರೆತು ಗಳಿಸುವ, ಬೆಳೆಯುವ ಕೆಲಸಕ್ಕೆ ಮುಂದಾಗಬಾರದು. ಆಗ ಮಾತ್ರ ಆತ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು.