ಯಡ್ಡಿ ಸಭೆಗೆ ತ್ರಿಮೂರ್ತಿಗಳು ಬರಲಿಲ್ಲ; ಆಡ್ವಾಣಿ 'ಹಾಜರ್'
ಕುತೂಹಲದ ಸಂಗತಿಯೆಂದರೆ ಸಮಾರಂಭದಲ್ಲಿ ತಮ್ಮ ಭಾಷಣದುದ್ದಕ್ಕೂ ಸನ್ಮಾನ್ಯ ಯಡಿಯೂರಪ್ಪನವರು ಅಗತ್ಯಕ್ಕಿಂತ ತುಸು ಹೆಚ್ಚೇ ಎನಿಸುವಷ್ಟು ಮಂದಸ್ಮಿತರಾಗಿದ್ದರು. ತುಂಟ ನಗು ಅವರಲ್ಲಿ ತುಳುಕುತ್ತಿತ್ತು. ಆ ಲಹರಿಯಲ್ಲೇ... ನಾವೆಲ್ಲರೂ ಬಿಜೆಪಿಯವರೇ. ನಮ್ಮದು ಅಟಲ್ ಬಿಹಾರಿ ವಾಜಪೇಯಿಯವರ ಬಿಜೆಪಿ ಎಂದು ಹೇಳಿ ಸುಮ್ಮನಾದರು.
ಅಲ್ಲಿಗೆ ಉದ್ದೇಶಪೂರ್ವಕವಾಗಿ ಪಕ್ಷದ ಮತ್ತೊಬ್ಬ ಹಿರಿಯ ಸೇನಾನಿ ಆಡ್ವಾಣಿ ಅವರನ್ನು ಯಡಿಯೂರಪ್ಪ ಮರೆತರಾ? ಮತ್ತೆ ತಾವು ಸಿಎಂ ಪಟ್ಟವೇರುವುದಕ್ಕೆ ಅಡ್ಡಿಯಾಗಿರುವ ಆಡ್ವಾಣಿಗೆ ಆ ಮೂಲಕ ಯಡ್ಡಿ ಏನಾದರೂ ಸಂದೇಶ ಕಳಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ಸುಳಿಯುವುದಕ್ಕೂ ಮುನ್ನವೇ ಯಡಿಯೂರಪ್ಪ ಅವರು ಮತ್ತೆ ವಾಜಪೇಯಿಯವರ ಹೆಸರು ಹೇಳಿದರು. ಜತೆಗೆ ಅಪ್ರಯತ್ನವಾಗಿ ಆಡ್ವಾಣಿ ಅವರ ಹೆಸರನ್ನೂ ಹೇಳಿ ಡ್ಯಾಮೇಜ್ ಕಂಟ್ರೋಲ್ ಮಾಡಿದರು. ಅಲ್ಲಿಗೆ ಆಡ್ವಾಣಿಯವರನ್ನು ಬಲವಂತವಾಗಿ ಸಭೆಗೆ ಕರೆದಂತಾಯಿತು.
ಪಾಲ್ಗೊಂಡವರು?: ಸುಮಾರು 45-50ರಷ್ಟು ಶಾಸಕರು, 11 ಸಚಿವರು, 10 ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರು, ಆರು ಜನ ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿ 10ಕ್ಕೂ ಅಧಿಕ ಅಧ್ಯಕ್ಷರು ಸಮಾವೇಶದಲ್ಲಿ ಪಾಲ್ಗೊಂಡು ಯಡಿಯೂರಪ್ಪ ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡಿದರು.
ಇನ್ನು, ಯಡಿಯೂರಪ್ಪ ಅವರ 70ನೇ ವರ್ಷದ ಜನ್ಮದಿನದ ಅಭಿನಂದನಾ ಸಮಾರಂಭಕ್ಕೆ ಮುಂಬಯಿ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಕೆಲ ಭಾಗಗಳಿಂದ ಹರಿದುಬಂದ ಜನಸಾಗರ, ನಿರೀಕ್ಷೆಯಂತೆಯೇ ಶಾಸಕರು, ಸಂಸದರ ಪಾಲ್ಗೊಳ್ಳುವಿಕೆ ಒಂದು ರೀತಿಯಲ್ಲಿ ಯಡಿಯೂರಪ್ಪ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಮಂದಹಾಸ ಬೀರುವಂತೆ ಮಾಡಿತು.
ಮುಂಬಯಿ ಕರ್ನಾಟಕದ ಪ್ರತಿ ಜಿಲ್ಲೆಯಿಂದಲೂ 7-15 ಸಾವಿರದವರೆಗೆ ಜನರು ಪಾಲ್ಗೊಂಡಿದ್ದರು. ಬೆಳಗಾವಿ, ಹಾವೇರಿ, ಧಾರವಾಡ ಇನ್ನಿತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದು ಕಂಡುಬಂತು. ಒಟ್ಟಾರೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಅಭೂತಪೂರ್ವ ಸಮಾವೇಶಕ್ಕೆ ಸಾಕ್ಷಿಯಾದರು.