
ಮುಂಬೈ, ಮಾ.5: ಆರ್ಥಿಕ ಸುಳಿಯಿಂದ ಹೊರಬರಲು ಮುಟ್ಟುಗೋಲು ಹಾಕಿಕೊಂಡಿರುವ ಬ್ಯಾಂಕ್ ಖಾತೆಗಳನ್ನು ಬಿಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆಯನ್ನು ಮುಚ್ಚಲು ಸಾಧ್ಯವೇ ಇಲ್ಲ. ಪೈಲಟ್ ಗಳಿಗೆ ಸಿಇಒ ಸಂಜಯ್ ಎಚ್ಚರಿಕೆ ನೀಡಿದ್ದರು ಅಷ್ಟೇ ಎಂದು ಡಾ.ವಿಜಯ್ ಮಲ್ಯ ಸ್ಪಷ್ಟಪಡಿಸಿದ್ದಾರೆ.
ಪೈಲಟ್ ಗಳಿಗೆ ಸಂಬಳ ಕೊಡಲಾಗದೆ ತೊಂದರೆಗೆ ಸಿಲುಕಿರುವ ಕಿಂಗ್ ಫಿಷರ್ ಸಂಸ್ಥೆ ಬಾಗಿಲು ಮುಚ್ಚಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸುದ್ದಿ ಅರ್ಧಸತ್ಯ ಮಾತ್ರ ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ಮಲ್ಯ ಅವರ ಮಾತನ್ನು ಪುಷ್ಟೀಕರಿಸಿದ ಉಪಾಧ್ಯಕ್ಷ ಪ್ರಕಾಶ್ ಮಿರ್ ಪುರಿ, ಪೈಲಟ್ ಗಳಿಗೆ ಅವರ ಕರ್ತವ್ಯದ ಮನವರಿಕೆ ಮಾಡಿಕೊಡಲಾಯಿತು ಅಷ್ಟೇ. ಬ್ಯಾಂಕ್ ಖಾತೆಯಲ್ಲಿ ಹಣವಿದೆ ಆದರೆ, ನಮ್ಮ ಕೈಗೆಟಕುತ್ತಿಲ್ಲ ಅಷ್ಟೇ ಎಂದಿದ್ದಾರೆ.
ಮುಟ್ಟುಗೋಲಾಗಿರುವ ನಮ್ಮ 40 ಖಾತೆಗಳನ್ನು ತೆರವುಗೊಳಿಸಲು ತೆರಿಗೆ ಇಲಾಖೆಯ ಜತೆ ಸಹಕರಿಸುತ್ತಿದ್ದು, ನೌಕರರ ಸಂಬಳ ನೀಡಲಾಗಿದೆ. ಕೆಲ ದಿನಗಲ್ಲಿ ವಿಮಾನ ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಸಂಸ್ಥೆ ಹೇಳಿದೆ.




















