ರಾಜ್ಯ ಸುತ್ತಿಬಂದ ಅಶ್ವ: ಆರಂಭವಾಗಿದೆ ಅಶ್ವಮೇಧ ಯಾಗ
ನಗರದ ಹೊರ ವಲಯದ ದೊಡ್ಡಪುರದಲ್ಲಿರುವ ಶ್ರೀ ಸಮರ್ಥ ರಾಮಾಶ್ರಮದಲ್ಲಿ ಬುಧವಾರ ಬೆಳಿಗ್ಗೆ 7.30 ಗಂಟೆಗೆ ಗುರುದೇವತಾ ಪ್ರಾರ್ಥನೆ, ಗಣೇಶ ಪೂಜೆ, ಪಾದುಕಾ ಪೂಜೆ, ಗೋಪೂಜೆ, ಅಶ್ವಪೂಜೆ, ಮಂತ್ರಾನುಷ್ಟಾನದೊಂದಿಗೆ ಯಾಗ ಆರಂಭವಾಗಿದೆ.
ಎಲ್ಲ ಧಾರ್ಮಿಕ ಕಾರ್ಯಗಳು ಹೊನ್ನಾವರದ ಕಟ್ಟೆ ಪರಮೇಶ್ವರ ಭಟ್ಟರ ಪ್ರಧಾನ ಆಚಾರ್ಯತ್ವದಲ್ಲಿ ನಡೆಯಲಿವೆ. ಮಾರ್ಚ್ 6ನೇ ತಾರೀಖೀನವರೆಗೆ ನಡೆಯುವ ಯಾಗದಲ್ಲಿ ಅನೇಕ ಸಾಧು-ಸಂತರು, ಅಗ್ನಿಹೋತ್ರಿಗಳು, ವಿದ್ವಾಂಸರು ದೊಡ್ಡಪುರ ಆಶ್ರಮದ ಆವರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಹಸ್ರಾರು ಜನರು ಯಾಗವನ್ನು ವೀಕ್ಷಿಸಲು ಅನುಕೂಲವಾಗುವಂತೆ ಬೃಹತ್ ಪೆಂಡಾಲನ್ನು ನಿರ್ಮಿಸಲಾಗಿದೆ.
ಅತಿರುದ್ರ ಮಾಹಾಯಾಗ, ಸಹಸ್ರ ಚಂಡಿಕಾ ಯಾಗ, ಶ್ರೀರಾಮ ತಾರಕ ಯಾಗ ಸಹ ಇದೇ ಸಂದರ್ಭದಲ್ಲಿ ಏರ್ಪಾಡಾಗಿದ್ದು, ಮಹಾಯಾಗ ನಡೆಯುವ ದಿನಗಳಂದು ಬೆಳಿಗ್ಗೆ ಧಾರ್ಮಿಕ ಸಭೆಯಗಳು ಮತ್ತು ಸಂಜೆ ವೇಳೆ ಹರಿಕಥೆ, ಯಕ್ಷಗಾನ ಸೇರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾ. 6 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಸಿ.ಎಂ.ಉದಾಸಿ, ರೇಣುಕಾಚಾರ್ಯ, ಮುಂತಾದವರು ಭಾಗವಹಿಸುವ ಸಾಧ್ಯತೆಗಳಿವೆ.