ಗೊಂದಲದಲ್ಲೇ ಮುಕ್ತಾಯವಾದ ಯಡಿಯೂರಪ್ಪ ಕರೆದ ಸಭೆ
ಯಡಿಯೂರಪ್ಪನವರು ತಾವೇ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲು ಎಲ್ಲ ಶಾಸಕರ ಸಭೆಯನ್ನು ಕರೆದಿದ್ದರು ಎಂಬುದು ಸ್ಪಷ್ಟವಿದ್ದರೂ ತಾವು ಆ ದೃಷ್ಟಿಯನ್ನಿಟ್ಟುಕೊಂಡಿಲ್ಲ ಎಂದು ಶಾಸಕರ ಮುಂದೆ ಯಡಿಯೂರಪ್ಪ ಸಾರಿ ಮತ್ತಷ್ಟು ಗೊಂದಲಕ್ಕೆ ಕಾರಣರಾಗಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಎಂಬುದು ಕಲ್ಲು ಹೊಡೆದ ಜೇನಿನ ಗೂಡಿನಂತಾಗಿದೆ.
ಈ ಸಭೆಯ ನಂತರ ಹೊರಬಂದಿರುವ ಕೆಲ ಅಂಶಗಳೆಂದರೆ, ಈಶ್ವರಪ್ಪ ಅವರ ನೇತೃತ್ವದ 10 ಜನ ಹಿರಿಯ ಶಾಸಕರ ನಿಯೋಗ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಅವರನ್ನು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲಿನಲ್ಲಿ ಭೇಟಿಯಾಗಲಿದೆ. ಬಲ್ಲ ಮೂಲಗಳ ಪ್ರಕಾರ, ಸದಾನಂದ ಗೌಡ ಅವರು ಕೆಲ ಶಾಸಕರನ್ನು ಕಡೆಗಣಿಸುತ್ತಿರುವ ಬಗ್ಗೆ ದೂರು ನೀಡಲು ನಿರ್ಧರಿಸಲಾಗಿದೆ. ಹಾಗೆಯೆ, ಸಂಪುಟವನ್ನು ಆದಷ್ಟು ಬೇಗನೆ ವಿಸ್ತರಿಸಲು ಒತ್ತಾಯ ತರಲು ಕೋರಲಾಗುತ್ತಿದೆ.
ಸಭೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆದೇ ಇಲ್ಲ. ಮುಂಬರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಮತ್ತು ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದರು. ಸಭೆಗೆ ಸದಾನಂದ ಗೌಡರು ಹೀಗೆ ಬಂದು ಹಾಗೆ ಮಂಗಳೂರಿಗೆ ಹೊರಟುಹೋದರು. ಬಾಲಚಂದ್ರ ಜಾರಕಿಹೊಳಿ, ಶಂಕರಲಿಂಗೇ ಗೌಡ ಮುಂತಾದ ಶಾಸಕರು ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಯಡಿಯೂರಪ್ಪಗೆ ಬುದ್ಧಿಭ್ರಮಣೆ : ಈ ನಡುವೆ, ಸಭೆಗೆ ಗೈರು ಹಾಜರಾಗಿದ್ದ ಶಂಕರಲಿಂಗೇ ಗೌಡ ಅವರು, ಯಡಿಯೂರಪ್ಪನಿಗೆ ನನ್ನ ಬೆಂಬಲ ಖಂಡಿತ ಇಲ್ಲ. ಅವರಿಗೆ ಬುದ್ಧಿಭ್ರಮಣೆಯಾಗಿದೆ. ಸವಕಳಿಯಾದ ನಾಣ್ಯವನ್ನು ಚಲಾವಣೆಯ ನಾಣ್ಯ ಮಾಡಲು ಯತ್ನಿಸುತ್ತಿರುವ ಡಿವಿ ಸದಾನಂದ ಗೌಡರಿಗೇ ನನ್ನ ಬೆಂಬಲ ಎಂದು ಯಡಿಯೂರಪ್ಪನವರ ವಿರುದ್ಧ ಕಿಡಿಕಾರಿದ್ದಾರೆ.