
ಬೆಂಗಳೂರು, ಫೆ.23: ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯಲ್ಲಿಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಆವರ ಪುತ್ರ ಮಧು ಬಂಗಾರಪ್ಪ ಆವರನ್ನು ಕಣಕ್ಕಿಳಿಸುವ ಸುದ್ದಿಯನ್ನು ತೇಲಿಬಿಟ್ಟಿದ್ದ ಜೆಡಿಎಸ್, ನಿರೀಕ್ಷೆಯಂತೆ ಈಗ ಅವರನ್ನು ಕಣಕ್ಕಿಳಿಸದಿರುವ ಬಗ್ಗೆ ನಿರ್ಧರಿಸಿದೆ.
'ಏಪ್ರಿಲ್ನಲ್ಲಿ ದಾವಣಗೆರೆಯಲ್ಲಿ ಯುವ ಜನತಾದಳ ಸಮಾವೇಶ ನಡೆಯಲಿದೆ. ಅದಕ್ಕೆ ಯುವ ಜನತಾದಳದ ನಾಯಕನಾಗಿ ಇತ್ತೀಚೆಗೆ ಆಯ್ಕೆಗೊಂಡಿರುವ ಮಧು ಅವರ ಜವಾಬ್ದಾರಿ ಹೆಚ್ಚಾಗಿದೆ. ಅದರತ್ತ ಆದ್ಯ ಗಮನಹರಿಸಬೇಕಿರುವುದರಿಂದ ಚುನಾವಣೆಗೆ ಅವರನ್ನು ನಿಲ್ಲಿಸುವುದು ಸಮಂಜಸವಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ' ಎಂದು ಜೆಡಿಎಸ್ ಸಬೂಬು ಹೇಳಿದೆ.
ಆದರೆ ವಾಸ್ತವವಾಗಿ, ಒಂದು ವೇಳೆ ಚುನಾವಣೆಯ ಫಲಿತಾಂಶ ವ್ಯತಿರಿಕ್ತವಾದರೆ ಮುಂದಿನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಿಂದ ಸ್ವತಃ ಮಧು ಬಂಗಾರಪ್ಪ ಅವರೇ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಇನ್ನು, ಇತ್ತೀಚೆಗೆ ಜೆಡಿಎಸ್ ಗೆ ಸೇರ್ಪಡೆಗೊಂಡಿರುವ ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಅವರೂ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವುದರಿಂದ ತಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಅಷ್ಟಕ್ಕೂ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಜೆಡಿಎಸ್ ಕಣದಿಂದ ದೂರವುಳಿದಿರುವುದನ್ನು ನೋಡಿದರೆ ಉಡುಪಿ-ಚಿಕ್ಕಮಗಳೂರು ಉಪಚುನಾವಣೆಗೂ ಪಕ್ಷ ತನ್ನ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸುವ ಲಕ್ಷಣಗಳಿಲ್ಲ. ಅದಕ್ಕೂ ಮುನ್ನ ಯಡಿಯೂರಪ್ಪ ಪ್ರಸ್ತುತ ಬೆಂಗಳೂರಿನಲ್ಲಿ ಎಬ್ಬಿಸಿರುವ ರಾಜಕೀಯ ಬಿರುಗಾಳಿ ಉಡುಪಿ-ಚಿಕ್ಕಮಗಳೂರು ವರೆಗೂ ತಲುಪುವುದೋ ಎಂದು ಕಾದು ನೋಡುವ ತಂತ್ರವೂ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಂತಿಮವಾಗಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಫೆಬ್ರವರಿ 27 ರಂದು ತೀರ್ಮಾನ ಕೈಗೊಳ್ಳುತ್ತಾರೆ ಎನ್ನಲಾಗಿದೆ.




























