
ಬಿಜಾಪುರ, ಫೆ. 22 : ಹೋಳಿ ಹುಣ್ಣಿಮೆಗೆ ಮೊದಲೇ ಬಿಜಾಪುರದಲ್ಲಿ ಹಾಡುಹಗಲೆ ರಕ್ತದೋಕುಳಿಯಾಡಲಾಗಿದೆ. ದುಷ್ಕರ್ಮಿಗಳು ಸಾರ್ವಜನಿಕರೆದುರಿಗೇ ಯುವ ಕಾಂಗ್ರೆಸ್ ಮುಖಂಡನ ಎರಡೂ ಕೈಗಳನ್ನು ಕತ್ತರಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ.
ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಅಸಿಫ್ ಇನಾಂದಾರ್ ಎಂಬ ವ್ಯಕ್ತಿ ನಗರ ಬಸ್ ನಿಲ್ದಾಣದಿಂದ ಕೋರ್ಟಿಗೆ ಹೋಗುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಆತನ ಮೇಲೆರೆಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಆತನ ಎಡಮುಂಗೈ ಸಂಪೂರ್ಣ ತುಂಡಾಗಿದ್ದು, ಬಲಗೈಗೂ ಗಂಭೀರ ಗಾಯಗಳಾಗಿವೆ.
ಹಳೆ ವೈಷಮ್ಯವೇ ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಾಗುವ ಬಗ್ಗೆ ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದರೂ ಅವರು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅಸಿಫ್ನ ಸಂಬಂಧಿಗಳು ದೂರಿದ್ದಾರೆ.




























