ಉಡುಪಿ-ಚಿಕ್ಕಮಗಳೂರು : ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ಪ್ರಕಟ
ಸುನೀಲ್ ಕುಮಾರ್ ಕಾರ್ಕಳ ಅವರನ್ನು ಭಾರತೀಯ ಜನತಾ ಪಕ್ಷ ಕಣಕ್ಕೆ ಇಳಿಸಿದೆ. ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಎಂದು ಎಐಸಿಸಿ ಘೋಷಿಸಿದೆ. ಕಾಂಗ್ರೆಸ್ ಪರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಗಳು ಪ್ರಿಯಾಂಕಾ ಗಾಂಧಿ ವದ್ರಾ ಅವರು ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಕ್ಕೆ ತೆರೆಬಿದ್ದಂತಾಗಿದೆ.
ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಜೆಡಿಎಸ್ ಅನ್ನು ಇತ್ತೀಚೆಗೆ ಸೇರಿದ ಕನ್ನಡ ಸಿನೆಮಾ ತಾರೆ ಪೂಜಾ ಗಾಂಧಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪರ ಪ್ರಿಯಾಂಕಾ ಹೆಸರು ಕೇಳಿಬಂದಿದ್ದರಿಂದ ಪೂಜಾ ಹೆಸರು ಚಾಲ್ತಿಗೆ ಬಂದಿತ್ತು. ಚುನಾವಣೆ ಮಾ.18, ಭಾನುವಾರ ನಡೆಯಲಿದ್ದು, ಫಲಿತಾಂಶ ಮಾ.21, ಬುಧವಾರ ಪ್ರಕಟವಾಗಲಿದೆ.
ಡಿವಿ ಸದಾನಂದ ಗೌಡ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರಿಂದ ತೆರವಾಗಿದ್ದ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆ ಎಲ್ಲ ಪಕ್ಷಗಳಿಗೂ ಭಾರೀ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಕಾಂಗ್ರೆಸ್ ಭಾರೀ ಯತ್ನ ನಡೆಸಿದೆ. ಸಿಎಂ ಜೊತೆಗಿನ ಮುನಿಸಿನಿಂದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಭ್ಯರ್ಥಿಯ ಆಯ್ಕೆ, ಚುನಾವಣಾ ಪ್ರಚಾರದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿಲ್ಲ.