ಕೇರಳ ಪದ್ಮನಾಭ ದೇಗುಲಕ್ಕೆ ಭದ್ರತೆಯ ಆತಂಕ
ಹತ್ತಾರು ಕ್ಯಾಮರಾಗಳೊಂದಿಗೆ ರಾಜ್ಯ ಪೊಲೀಸ್ ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರೂ ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಭೀತಿಗೆ ತುತ್ತಾಗಿದೆ. ದೇಗುಲದ ನೆಲಮಾಳಿಗೆಗಳಲ್ಲಿರುವ ಅಪಾರ ಸಂಪತ್ತನ್ನು ದೋಚಲು ಭೂಗತ ಡಕಾಯಿತಿ ಪ್ರಯತ್ನಗಳು ನಡೆದರೆ ಗತಿಯೇನು? ಸದ್ಯಕ್ಕೆ ಈ ಸಾಧ್ಯತೆ ಇಲ್ಲ ಎನ್ನುವುದಾದರೂ ದೇಗುಲದ ನೆಲಮಾಳಿಗೆಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗಗಳು ಇವೆಯೆಂಬುದು ಜನಜನಿತ. ಇದೇ ಈಗ ಆತಂಕ ಸೃಷ್ಟಿಸಿರುವುದು.
ಜತೆಗೆ, ಭಾರಿ ಪ್ರಮಾಣದ ಸಂಪತ್ತು ಮತ್ತು ಅದರ ಬಗ್ಗೆ ಅಪಾರ ಪ್ರಚಾರ ಸಿಕ್ಕಿರುವುದರಿಂದ ವಿಶ್ವಮಟ್ಟದ ವೃತ್ತಿಪರ ಡಕಾಯಿತಿ ತಂಡಗಳು ಏನು ಬೇಕಾದರೂ ಮಾಡಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ವೀಡನ್ನಿನಲ್ಲಿ ಹಾಡಹಗಲೇ ಹೆಲಿಕಾಪ್ಟರ್ ಮೂಲಕ ಬ್ಯಾಂಕ್ ತಿಜೋರಿಗಳ ಡಕಾಯಿತಿ ಮಾಡುವ ಭೂಗತ ಪಾತಕಿಗಳು ಇದ್ದಾರೆ. ಹೀಗೆ ಸಾವಿರಾರು ಕೋಟಿ ರುಪಾಯಿ ದರೋಡೆಯಾಗಿದ್ದರೂ ಜಗತ್ತಿನಲ್ಲೇ ಅತ್ಯಂತ ಚಾಣಾಕ್ಷರು ಎನಿಸಿಕೊಂಡಿರುವ ಸ್ವೀಡನ್ ಪೊಲೀಸರು ಈ ಪ್ರಕರಣಗಳನ್ನು ಬೇಧಿಸದೆ ಇನ್ನೂ ಕಣ್ಮುಚ್ಚಿ ಕುಳಿತಿರುವಾಗ ಕೇರಳ ಪದ್ಮನಾಭ ದೇಗುಲಕ್ಕೆ ಏನಾಗುವುದೋ ಎಂಬ ಆತಂಕ ಸ್ಥಳೀಯ ಪೊಲೀಸರಿಗೆ ಇದೆ.