•  

ಬಿಎಂಟಿಸಿ ಮಹಿಳಾ ಕಂಡಕ್ಟರ್‌ ಮೇಲೆ ಎಸ್ಐ ಹಲ್ಲೆ

ಬುಧವಾರ, ಫೆಬ್ರವರಿ 1, 2012, 9:39 [IST]
bmtc-woman-conductor-slapped-by-bangalore-police-si
ಬೆಂಗಳೂರು, ಫೆ. 1: ಮೊನ್ನೆ ಮಹಿಳಾ ಇನ್ಸ್‌ಪೆಕ್ಟರ್‌ ಮೇಲೆ ಐಎಎಸ್‌ ಅಧಿಕಾರಿಯ ಪತ್ನಿ ದರ್ಪ ಮೆರೆದಿದ್ದರು. ನಿನ್ನೆ ಮಂಗಳವಾರ ಕ್ಷುಲಕ ಕಾರಣಕ್ಕೆ ಕರ್ತವ್ಯ ನಿರತ ಬಿಎಂಟಿಸಿ ಮಹಿಳಾ ಕಂಡಕ್ಟರ್‌ ಮೇಲೆ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹಲ್ಲೆ ನಡೆಸಿದ್ದಾರೆ.

ಶೇಷಾದ್ರಿಪುರ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಆಗಿರುವ ಗುರುಸಿದ್ದಣ್ಣ ಸಂಜೀವಮೂರ್ತಿ (49), ಕರ್ತವ್ಯ ನಿರತ ಬಿಎಂಟಿಸಿ ನಿರ್ವಾಹಕಿ ಮೇಲೆ ಹಲ್ಲೆ ನಡೆಸಿದ ಪೊಲೀಸ್‌ ಅಧಿಕಾರಿ. ಶೈಲಜಾ ಹಲ್ಲೆಗೊಳಗಾದ ನಿರ್ವಾಹಕಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಜಾಮೀನು ನೀಡಿದ ನಂತರ ಬಿಡುಗಡೆ ಮಾಡಿದ್ದಾರೆ.

ಏನಿದು ಪ್ರಕರಣ: ಪೊಲೀಸರ ಪ್ರಕಾರ, ಗೋವಿಂದರಾಜನಗರ ನಿವಾಸಿಯಾಗಿರುವ ಗುರುಸಿದ್ದಣ್ಣ ಕರ್ತವ್ಯಕ್ಕೆಂದು ಮನೆಯಿಂದ ಶೇಷಾದ್ರಿಪುರ ಪೊಲೀಸ್‌ ಠಾಣೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇವರು ಬೈಕ್‌ನಲ್ಲಿ ಅಗ್ರಹಾರ ದಾಸರಹಳ್ಳಿಯ ಜೈಮಿನಿ ವೃತ್ತದ ಬಳಿ ಬರುತ್ತಿರಬೇಕಾದರೆ ಅದೇ ಮಾರ್ಗದಲ್ಲಿ ಗೋವಿಂದರಾಜನಗರ-ಮೆಜೆಸ್ಟಿಕ್‌ ರೂಟ್‌ ಬಿಎಂಟಿಸಿ ಬಸ್‌ ಚಲಿಸುತ್ತಿತ್ತು.

ಜೈಮಿನಿ ವೃತ್ತದ ಸಮೀಪದ ಬಳಿಯ ನಿಲ್ದಾಣದಲ್ಲಿ ಬಸ್‌ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿತ್ತು. ಆದರೆ, ಪ್ರಯಾಣಿಕರು ಬಸ್‌ ಹತ್ತುತ್ತಿದ್ದ ಕಾರಣ ಬೈಕ್‌ನಲ್ಲಿದ್ದ ಗುರುಸಿದ್ದಣ್ಣನಿಗೆ ಮುಂದಕ್ಕೆ ಚಲಿಸಲು ಸಾಧ್ಯವಾಗಿಲ್ಲ. ಇದರಿಂದ ಕೋಪಗೊಂಡ ಪಿಎಸ್‌ಐ ಗುರುಸಿದ್ದಣ್ಣ ಬೈಕ್‌ನಿಂದ ಕೆಳಗಿಳಿದ್ದು ಬಸ್‌ನ ಬಾಗಿಲು ಬಳಿ ನಿಂತಿದ್ದ ನಿರ್ವಾಹಕಿ ಶೈಲಜಾ ಅವರನ್ನು ಏಕಾಏಕಿ ಬೈದು ನಿಂದಿಸತೊಡಗಿದರು.

ಆಗ, ಶೈಲಜಾ ತಾಳ್ಮೆಯಿಂದಲೇ 'ಏನು ಸಾರ್‌ ನೀವೇ ಈ ರೀತಿ ಗದರಿದರೆ ಹೇಗೆ?' ಎಂದು ಪ್ರಶ್ನಿಸಿದರು. ಆಗ, ಮತ್ತಷ್ಟು ಆಕ್ರೋಶಗೊಂಡ ಗುರುಸಿದ್ದಣ್ಣ, ಶೈಲಜಾಗೆ ಕೆನ್ನೆಗೆ ಹೊಡೆದಿದ್ದಾರೆ. ಕರ್ತವ್ಯ ನಿರತ ನಿರ್ವಾಹಕಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲ ಗುರುಸಿದ್ದಣ್ಣ ವಿರುದ್ಧ ತಿರುಗಿಬಿದ್ದರು. ಅಷ್ಟೊತ್ತಿಗೆ ಬಸ್‌ ಚಾಲಕ ಸ್ವಯಂ ಚಾಲಿಕ ಬಾಗಿಲು ಮುಚ್ಚಿ ಪಿಎಸ್‌ಐ ಗುರುಸಿದ್ದಣ್ಣ ಬಸ್‌ನಿಂದ ಕೆಳಗಿಳಿಯದಂತೆ ಮಾಡಿದರು. ಬಳಿಕ ಬಸ್‌ನ್ನು ನೇರವಾಗಿ ತಂದು ವಿಜಯನಗರ ಪೊಲೀಸ್‌ ಠಾಣೆ ಮುಂದೆ ನಿಲ್ಲಿಸಿದರು.

ನಂತರ ಶೈಲಜಾ ಅವರು, ತಮ್ಮ ಮೇಲೆ ಹಲ್ಲೆ ಮಾಡಿದ್ದಕ್ಕೆ ವಿಜಯನಗರ ಪೊಲೀಸರಿಗೆ ದೂರು ನೀಡಿದರು. ಆದರೆ, ಪ್ರಕರಣ ನಡೆದಿದ್ದು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ. ಹೀಗಾಗಿ, ಅಲ್ಲಿನ ಪೊಲೀಸರು ಬಂದು ಗುರುಸಿದ್ದಣ್ಣನನ್ನು ಬಂಧಿಸಿದರು.

ಪೊಲೀಸರು ನಂತರ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಸಂಜೆ ಆರೋಪಿಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಗುರುಸಿದ್ದಣ್ಣ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಿದ್ದರಾಮಪ್ಪ ತಿಳಿಸಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೈಲಜಾ ನೀಡಿದ ದೂರಿನ ಅನ್ವಯ ಸಂಜೀವ್‌ಮೂರ್ತಿಯನ್ನು ಬಂಧಿಸಿ ಜಾಮೀನಿನ ಮೇಲೆ ರಾತ್ರಿ ಬಿಡುಗಡೆಗೊಳಿಸಲಾಯಿತು. ಅವರ ವಿರುದ್ಧ ಹಲ್ಲೆ ಹಾಗೂ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article