ಮಂಗಳೂರಿನ ಜನಪ್ರಿಯ ಅತ್ರಿ ಬುಕ್ ಸೆಂಟರ್ ಇನ್ನಿಲ್ಲ
'ವೃತ್ತಿ ಜೀವನದ ಸರಣಿಯೋಟದಲ್ಲಿ ನಾನು ತಂದೆಯಿಂದ (ಅಧ್ಯಾಪನದ) ಕೈಕೋಲು ಪಡೆದವನಲ್ಲ, ಮಗನಿಗೆ (ಸಿನಿಮಾ ನಿರ್ದೇಶಕ) ಕೊಡಬೇಕಾಗಿಯೂ ಇಲ್ಲ. ಮೂವತ್ತಾರು ವರ್ಷಗಳ ಪುಸ್ತಕೋದ್ಯಮದಲ್ಲಿ ನನ್ನ ನಿರ್ವಹಣೆ ಬಗ್ಗೆ ಧನ್ಯತೆಯಿದ್ದರೂ ನನ್ನನ್ನು ಬೆಳೆಸಿದ ಮತ್ತು ನನ್ನ ಭವಿಷ್ಯಕ್ಕೆ ಭದ್ರತೆಯನ್ನೂ ಒದಗಿಸುತ್ತಿರುವ ಈ ವೃತ್ತಿಯ ಬಗ್ಗೆ ಸಂತೋಷವಿದ್ದರೂ ಮುಖ್ಯವಾಗಿ ಕನ್ನಡ ಮತ್ತೆ ಪುಸ್ತಕೋದ್ಯಮದ ಭವಿಷ್ಯದ ಬಗ್ಗೆ ನಿರಾಶೆಯಲ್ಲಿ ನಿವೃತ್ತನಾಗುತ್ತಿದ್ದೇನೆ...' ಎಂದು ಅಂಗಡಿಯ ಮಾಲೀಕ ಅಶೋಕ್ ವರ್ಧನ್ ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಪುಸ್ತಕ ಕೊಳ್ಳುವವರ ಬರಗಾಲ ಬಂದಿದೆ. ಅದರಲ್ಲೂ ಕನ್ನಡ ಪುಸ್ತಕ ಖರೀದಿಸುವವರೇ ಇಲ್ಲದಂತಾಗಿದೆ. ಹೀಗಾಗಿ ಅತ್ಯಂತ ದುಃಖವಾದರೂ ಮಾರ್ಚ್ 31ಕ್ಕೆ ಈ ನನ್ನ ಪುಸ್ತಕ ಸೇವೆ ಬಂದ್ ಮಾಡಲು ತೀರ್ಮಾನಿಸಿದ್ದೇನೆ' ಎಂದು ಎಬಿಸಿ ಅಂಗಡಿ ಮಾಲಕ ಅಶೋಕವರ್ಧನ್ ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣೆಗಾಗಿ ತಮ್ಮ ಸಮಯವನ್ನು ಮೀಸಲಿಡುವುದಾಗಿ ಅಶೋಕ್ ಹೇಳಿದ್ದಾರೆ. ವಿಜ್ಞಾನ ಲೇಖಕ ಜಿ ಟಿ ನಾರಾಯಣ ರಾವ್ ಸುಪುತ್ರರಾದ ಅಶೋಕ್ ವರ್ಧನ್ ಅವರ ಮಗ ಅಭಯಸಿಂಹ ಸಿನಿಮಾ ನಿರ್ದೇಶಕರಾಗಿದ್ದಾರೆ.
ಈ ಹಿಂದೆ ಕುದುರೆಮುಖದಲ್ಲಿ ಕೆಐಒಸಿಎಲ್ನ ಗಣಿಗಾರಿಕೆ ವಿರುದ್ಧ ನಡೆದಿದ್ದ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಹಾಗೂ ಪಶ್ಚಿಮಘಟ್ಟ ರಕ್ಷಣೆ ವಿಷಯದಲ್ಲೂ ಬಹಳಷ್ಟು ಕೆಲಸ ಮಾಡುತ್ತ ಬಂದಿದ್ದಾರೆ. ಅತ್ರಿ ಬುಕ್ ಸೆಂಟರ್ ಗೆ ಅಶೋಕ್ ವರ್ಧನ್ ಅವರು ಬರೆದಿರುವ ಚರಮಗೀತೆ ಇಲ್ಲಿ ಓದಿ