ಪುಟ್ಟೇನಹಳ್ಳಿ ಕೆರೆ ಉಳಿಸಲು ಒಂದು ಓಟು ಹಾಕಿ
ಮನಸ್ಸಿದ್ದಲ್ಲಿ ಮಹಾದೇವ ಎಂಬ ಮಾತನ್ನು ಕೆರೆಯ ಸುತ್ತಲಿನ ಪರಿಸರ ಪ್ರೇಮಿ ನಿವಾಸಿಗಳು ಮಾಡಿ ತೋರಿಸಿದ್ದಾರೆ. ಇವರ ಜೊತೆ ಬಿಬಿಎಂಪಿ ಕೂಡ ಕೈಜೋಡಿಸಿ, ಸತ್ತು ಹೋಗುವ ಸ್ಥಿತಿಗೆ ತಲುಪಿದ್ದ ಕೆರೆಗೆ ಮರುಜೀವ ನೀಡಿದೆ. ಈ ಕನಸನ್ನು ಸಾಕಾರಗೊಳಿಸಿದ್ದು ಪುಟ್ಟೇನಹಳ್ಳಿ ನೇಬರ್ಹುಡ್ ಲೇಕ್ ಇಂಪ್ರೂವ್ಮೆಂಟ್ ಟ್ರಸ್ಟ್ (PNLIT).
13 ಎಕರೆ ವಿಸ್ತಾರದಲ್ಲಿ ನೀರನ್ನು ತುಂಬಿಕೊಂಡಿರುವ ಪುಟ್ಟೇನಹಳ್ಳಿ ಕೆರೆ ಹಿಂದೆ ಬರೀ ಹೂಳು ಮತ್ತು ಚರಂಡಿ ನೀರನ್ನೇ ತುಂಬಿಕೊಂಡಿತ್ತು. ಇದನ್ನು ಗಮನಿಸಿದ ನಾಗರಿಕರು ಕೆರೆ ಶುದ್ಧೀಕರಣಕ್ಕೆ ತಾವೇ ಸ್ವತಃ ಕಾರ್ಯಾಚರಣೆಗಿಳಿದು ಪಿಎನ್ಎಲ್ಐಟಿ ಸಂಘಟನೆ ಕಟ್ಟಿದರು. ಬಿಬಿಎಂಪಿಯೊಡನೆ ಒಪ್ಪಂದ ಮಾಡಿಕೊಂಡು ಕೆರೆ ನೀರು, ಚರಂಡಿ ನೀರನ್ನು ಬೇರ್ಪಡಿಸಿ ಬೇಲಿ ನಿರ್ಮಿಸಿದರು, ವಾಕ್ಪಥ ನಿರ್ಮಿಸಿದರು.
ನಂತರ ಎನ್ಜೆನ್ ಎಂಬ ಸಂಸ್ಥೆ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸಿ ಕೆರೆಯ ಹಸಿರು ಬಣ್ಣದ ನೀರನ್ನು ಶುದ್ಧೀಕರಿಸಿದೆ. ಈಗ ಕೆರೆಯಲ್ಲಿನ ಮೀನುಗಳು ಶುದ್ಧ ಆಮ್ಲಜನಕ ಸೇವಿಸುತ್ತ ಸಂತಸದಿಂದ ವಿಹರಿಸುತ್ತಿವೆ. ಬಾತುಕೋಳಿಗಳು ಸಾಲಿನಲ್ಲಿ ಈಜಿಕೊಂಡು ಮಜವಾಗಿವೆ. ಕೆರೆಯ ಸುತ್ತಲೂ ಮರ ನೆಟ್ಟ ಮಕ್ಕಳು ಕೆರೆಯಂಗಳದಲ್ಲಿ ನಲಿದಾಡುತ್ತಿದ್ದಾರೆ. [ಕೆರೆಯ ಉಳಿವಿಗಾಗಿ ನೀವೂ ಮತ ಹಾಕಿ]
ಆರಂಭದಲ್ಲಿ ಈ ಯೋಜನೆಗೆ 1.35 ಕೋಟಿ ರು. ಅನುದಾನ ನೀಡಿದ್ದ ಬಿಬಿಎಂಪಿ ಮುಂದಿನ ಮೂರು ವರ್ಷಗಳ ಕಾಲ ಯಾವುದೇ ಹಣಕಾಸು ಸಹಾಯ ನೀಡುವುದಿಲ್ಲ. ಸಾರ್ವಜನಿಕರ ಹಣದ ಸಹಾಯದಿಂದ ಕೆರೆಯ ಸಂರಕ್ಷಣಾ ಕಾರ್ಯ ನಡೆಯಬೇಕಿದೆ. ಈ ಕೆರೆಯ ಉಳಿವಿಕೆಗೊಂದು ನಿಮ್ಮ ವೋಟು ಇರಲಿ. ಇದೇ ಕೆರೆಯನುಳಿಸುವ ಅಭಿಯಾನವನ್ನು ಬೆಂಗಳೂರಿನಲ್ಲಿ ಇನ್ನೂ ಜೀವಹಿಡಿದುಕೊಂಡಿರುವ ಕೆರೆಗಳಿಗೂ ವಿಸ್ತರಿಸಬೇಕಿದೆ.