ಮೆಟ್ರೋ ರೈಲು ಕಾಯಲು 900 ಜನ ಸಿಬ್ಬಂದಿ
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಸಹ ಅ.20 ರಂದು ನಗರದ ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಅ.20 ರಂದು ಎಂಜಿ ರಸ್ತೆ ನಿಲ್ದಾಣದ ಬಳಿ ಜಂಟಿ ಪೊಲೀಸ್ ಆಯುಕ್ತ ದಯಾನಂದ್ ಮತ್ತು ಭೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಬಳಿ ಸಿಎಆರ್ ನ ಜಂಟಿ ಪೊಲೀಸ್ ಆಯುಕ್ತ ಡಿಎನ್ ಎಸ್ ರೆಡ್ಡಿ ಅವರನ್ನು ಭದ್ರತಾ ಉಸ್ತುವಾರಿಗೆ ನಿಯೋಜಿಸಲಾಗಿದೆ.
ರಾಜ್ಯ ಮೀಸಲು ಪಡೆಯ 14 ತುಕಡಿಗಳು, 900 ಮಂದಿ ಸಿವಿಲ್ ಪೊಲೀಸರು, ಎಸಿಪಿಗಳು, ಇನ್ಸ್ ಪೆಕ್ಟರ್ ಗಳು, ಪೇದೆಗಳು ಸೇರಿ ಒಂದು ಸಾವಿರ ಮಂದಿ ಮೆಟ್ರೋ ಉದ್ಘಾಟನೆ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳಲಿದ್ದಾರೆ ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದರು.
ದೆಹಲಿ ಮೆಟ್ರೋ ಉದ್ಘಾಟನೆ ವೇಳೆ ಅಹಿತಕರ ಘಟನೆ ಸಂಭವಿಸಿದ್ದು, ಬೆಂಗಳೂರಿನಲ್ಲಿ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು.
ಜಡ್ ಶ್ರೇಣಿ ಭದ್ರತೆ ಹೊಂದಿರುವ ಜಯಲಲಿತಾ ಅವರು 66 ಕೋಟಿ ರು ಅಕ್ರಮ ಆಸ್ತಿ ಹೊಂದಿರುವ ಆರೋಪದ ಪ್ರಕರಣದ ವಿಚಾರಣೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಕೋರ್ಟ್ ನಲ್ಲಿ ಸಿಸಿಟಿವಿ ಕೆಮರಾ ಅಳವಡಿಕೆ ಸೇರಿದಂತೆ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯುಕ್ತ ಮಿರ್ಜಿ ತಿಳಿಸಿದರು.