ಆಹಾರ ಕರ್ನಾಟಕ ವೆಬ್ ಸೈಟಿಗೆ ನುಗ್ಗಿದ ಗ್ರಾಹಕರು
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಪ್ರಕಾರ, "ಜು. 25ರಂದು 3.53 ಲಕ್ಷ ಗ್ರಾಹಕರು ವೆಬ್ ತಾಣಕ್ಕೆ ಭೇಟಿ ನೀಡಿದ್ದರು. ಎಲ್ಲ ತಾಂತ್ರಿಕ ದೋಷಗಳನ್ನು ನಿವಾರಿಸಲಾಗಿದ್ದು, ವೆಬ್ ಸೈಟ್ ಮತ್ತು ಕಾರ್ಯಚಾಲನೆಯಲ್ಲಿದೆ."
ವೆರಿಫಿಕೇಷನ್ ಗೆಂದು ಅಗತ್ಯವಾದ ಕಡತಗಳನ್ನು ಅಪ್ಲೋಡ್ ಮಾಡಲು ಯತ್ನಿಸಿದಾಗ ವೆಬ್ ಸೈಟೆ ಹ್ಯಾಂಗ್ ಆಯಿತು ಮತ್ತು ಸ್ವೀಕಾರವಾದ ಸಂದೇಶ ಬರಲೇ ಇಲ್ಲ ಎಂದು ಕೆಲ ಗ್ರಾಹಕರು ದೂರಿದ್ದಾರೆ. ಆರ್ ಆರ್ ನಂಬರ್ ನೀಡಿದಾಗಲೂ 'RR number mismatch' ಸಂದೇಶ ಬಂದಿತೆಂದು ಕೆಲ ಗ್ರಾಹಕರು ದೂರಿದ್ದಾರೆ.
ಹೆಲವರಿಗೆ, ನಿಮ್ಮ ಸಂಪರ್ಕವನ್ನೇ ಕಡಿತಗೊಳಿಸಲಾಗಿದೆ ಎಂಬ ಸಂದೇಶ ವೆಬ್ ಸೈಟಿನಲ್ಲಿ ಬಂದಾಗ ಆದ ಆಘಾತ ಅಷ್ಟಿಷ್ಟಲ್ಲ. ವೆಬ್ ಸೈಟ್ ಸೇವೆಯೇ ದೋಷಪೂರಿತವಾಗಿದ್ದರಿಂದ ಗ್ರಾಹಕರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಬಿಎ ಹರೀಶ್ ಗೌಡ ಅವರ ಪ್ರಕಾರ, ಯಾವುದೇ ಗ್ರಾಹಕ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಅಥವಾ ಎಲ್ ಪಿಜಿ ಸಂಪರ್ಕ ಹೊಂದುವಹಾಗಿಲ್ಲ. ಹಾಗೇನಾದರೂ ಹೊಂದಿದ್ದರೆ, ಅದು ಪಡಿತರ ಚೀಟಿ ಅಕ್ರಮ ನಿಯಂತ್ರಣಾ ಕಾನೂನು ಪ್ರಕಾರ ಅಕ್ರಮವಾಗಿರುತ್ತದೆ.
ನೆಟ್ ಇಲ್ಲದವರು ಏನು ಮಾಡಬೇಕು?: ಸಂಬಂಧಿಸಿದ ತಾಲೂಕು ಕಚೇರಿಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ನಿರೀಕ್ಷಕರನ್ನು ಭೇಟಿಯಾಗಿ ಮಾಹಿತಿ ಮತ್ತು ಪರಿಹಾರ ಪಡೆಯಬಹುದು. ಪಡಿತರ ಕಚೇರಿಗಳಲ್ಲಿ ಇಂಟರ್ ನೆಟ್ ಸೌಲಭ್ಯ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಗ್ರಾಹಕರಿಗೆ ನೆರವು ನೀಡಲು ಅಧಿಕಾರಿಗಳು ಸಿದ್ಧರಿದ್ದಾರೆ ಎಂದು ಹರೀಶ್ ಗೌಡ ಹೇಳಿದ್ದಾರೆ.