ಕಾಂಗ್ರೆಸ್ ಅಧೋಗತಿಗೆ ಇಂದಿರಾ ಗಾಂಧಿ ಕಾರಣೀಭೂತ
ಇಂದಿರಾ ಗಾಂಧಿ ತಳಮಟ್ಟದವರೆಗೆ ಇಳಿದು ಬಂದು ಪಕ್ಷವನ್ನು ಪುನರ್ ರಚಿಸಲು ಪ್ರಯತ್ನಿಸಲಿಲ್ಲ. ನಿಕಟ ಸಹವರ್ತಿಗಳ ನೆರವಿನೊಂದಿಗೆ 'ಏಕಾಧಿಪತ್ಯ'ದ ಮಾದರಿಯಲ್ಲಿ ಪಕ್ಷವನ್ನು ನಿಯಂತ್ರಿಸಲು ತೊಡಗಿದರು. ಆದರೆ ಇದರಿಂದ ಕೆಲವು ರಾಜ್ಯಗಳಲ್ಲಿ ಪಕ್ಷದ ಬಲವಾಗಿದ್ದ 'ಮುಖ್ಯ ಲಕ್ಷಣ'ವನ್ನೇ ನಾಶ ಮಾಡಿತು.
ಪಕ್ಷವನ್ನು ಪೂರ್ಣವಾಗಿ ನಿಯಂತ್ರಿಸುವ ಅವರ ಧೋರಣೆಯಿಂದಾಗಿ 1980ರ ವೇಳೆಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿ ಉತ್ತರ ಪ್ರದೇಶದಂತಹ ಕೆಲವು ಪ್ರಮುಖ ರಾಜ್ಯಗಳಲ್ಲಿ ಪಕ್ಷದ ಘಟಕಗಳು ಕುಸಿಯತೊಡಗಿತು ಎಂದು ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ನ ಶತಮಾನದ ಚರಿತ್ರೆ (ಎ ಸೆಂಟಿನರಿ ಹಿಸ್ಟರಿ ಆಫ್ ದಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಪುಸ್ತಕದ ಐದನೇ ಆವೃತ್ತಿಯಲ್ಲಿ ವಿಶ್ಲೇಷಿಸಲಾಗಿದೆ.
ಪಕ್ಷದ 125ನೇ ವರ್ಷಾಚರಣೆ ನಿಮಿತ್ತ ಹಿರಿಯ ನಾಯಕ ಪ್ರಣವ್ ಮುಖರ್ಜಿ ಮುಖ್ಯಸ್ಥರಾಗಿರುವ ಸಂಪಾದಕರ ತಂಡವೊಂದು ಐದನೇ ಆವೃತ್ತಿಯನ್ನು ಹೊರ ತಂದಿದೆ. ಪಕ್ಷದ ಇತಿಹಾಸವನ್ನು ತಜ್ಞರ ಸಂಪಾದಕತ್ವದಲ್ಲಿ ಹೊರ ತರುವುದು ಬಹಳ ಅಪೇಕ್ಷಣೀಯವಾಗಿತ್ತು. ಆದರೆ ಇದರಲ್ಲಿರುವ ಅಭಿಪ್ರಾಯಗಳು ಕಾಂಗ್ರೆಸಿನ ಅಭಿಪ್ರಾಯವಾಗಿರಬೇಕಾಗಿಲ್ಲ ಎಂದು ಮುನ್ನುಡಿಯಲ್ಲಿ ಮುಖರ್ಜಿ ಬರೆದಿದ್ದಾರೆ. ಇದು 1964ರಿಂದ 1984ರ ತನಕ ಕಾಂಗ್ರೆಸ್ನ ಅಧಿಕೃತ ಇತಿಹಾಸವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂದಿರಾ ಗಾಂಧಿ ಒಮ್ಮತದ ನಾಯಕತ್ವದ ಶೈಲಿಗೆ ಬದಲಾಗಿ ವ್ಯಕ್ತಿ ಕೇಂದ್ರಿತ ನಾಯಕತ್ವವನ್ನು ಅಳವಡಿಸಿಕೊಂಡರು. ಅವರು ಪಕ್ಷವನ್ನು ವಿಘಟಿಸಿದರು ಮತ್ತು ಮಧ್ಯಮ ಸ್ತರದ ನಾಯಕತ್ವವನ್ನು ಮತ್ತು ಒಮ್ಮತದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ನಾಶ ಮಾಡಿದರು ಮತ್ತು ಪದಾಧಿಕಾರಿಗಳು ನೇರವಾಗಿ ತನಗೆ ಉತ್ತರಿಸುವಂತಹ ಪ್ರಜಾಪ್ರಭುತ್ವ ರಹಿತ ವ್ಯವಸ್ಥೆಯೊಂದನ್ನು ಅನುಷ್ಠಾನಕ್ಕೆ ತಂದರು. ಪಕ್ಷದ ಆಡಳಿತ ವ್ಯವಸ್ಥೆಯನ್ನು ಇಂದಿರಾ ಮೂಲೆಗುಂಪು ಮಾಡಿದ ಪರಿಣಾಮವಾಗಿ ಏಕ ಪಕ್ಷದ ಪ್ರಾಬಲ್ಯ ಕುಸಿತಕ್ಕೆ ನಾಂದಿ ಹಾಡಿದರು.
ಪ್ರಾದೇಶಿಕವಾಗಿ ಪ್ರಬಲ ನಾಯಕರು ಬೆಳೆಯದ ಕಾರಣ ಚುನಾವಣೆಯಿಂದ ಚುನಾವಣೆಗೆ ಪಕ್ಷ ದುರ್ಬಲವಾಗತೊಡಗಿತು. ಉತ್ತರ ಪ್ರದೇಶದಂತಹ ನಿರ್ಣಾಯಕ ರಾಜ್ಯದಲ್ಲಿ ಅಂತಿಮವಾಗಿ ಪಕ್ಷ ಸರ್ವನಾಶವಾಯಿತು. ತುರ್ತು ಪರಿಸ್ಥಿತಿಯ ಅತಿರೇಕಗಳೂ ಹಿಂದಿ ವಲಯದಲ್ಲಿ ಪಕ್ಷದ ಅವಸಾನಕ್ಕೆ ಕಾರಣವಾಯಿತು ಎನ್ನಲಾಗಿದೆ. ಕಾಂಗ್ರೆಸ್ ಪತನ ಇತರೆ ಪಕ್ಷಗಳ ಹುಟ್ಟು ಮತ್ತು ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತು ಎಂದು ಪುಸ್ತಕ ವಿಶ್ಲೇಷಿಸಿದೆ.