ವೇಗದ ಪಿಚ್: ನೆಹ್ರಾ ಜಾಗಕ್ಕೆ ಶ್ರೀಶಾಂತ್
ಮುಂಬೈ, ಏಪ್ರಿಲ್ 2: ಇಂದು ಶ್ರೀಲಂಕಾ ವಿರುದ್ಧ ನಡೆಯಲಿರುವ ಮಹಾಭಾರತ ಯುದ್ಧದಲ್ಲಿ ವೇಗಿ ಎಸ್. ಶ್ರೀಶಾಂತ್ ಆಡುವ ಸಾಧ್ಯತೆ ಹೆಚ್ಚಾಗಿದೆ. ತಂಡದ ಸಾರಥಿ ಎಂ.ಎಸ್. ಧೋನಿ ಶ್ರೀಶಾಂತ್ ಪರ ಒಲವು ತೋರಿದ್ದು, 'ಭಾರತ ತಂಡದ ಬತ್ತಳಿಕೆಯಲ್ಲಿ ಇನ್ನೂ ಬಳಕೆಯಾಗದ ಬ್ರಹ್ಮಾಸ್ತ್ರಗಳಿವೆ' ಎಂದು ಶ್ರೀಲಂಕಾ ತಂಡಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಆಶಿಶ್ ನೆಹ್ರಾ ಸೆಮೀಸ್ ನಲ್ಲಿ ಉತ್ತಮವಾಗಿಯೇ ಬೌಲ್ ಮಾಡಿದರು. ಆದರೆ ದುರದೃಷ್ಟವಶಾತ್ ಕೈಬೆರಳು ಮುರಿದುಕೊಂಡು ಫೈನಲ್-ನಿಂದ ದೂರವಾಗಿದ್ದಾರೆ. ಆದ್ದರಿಂದ ಶ್ರೀಶಾಂತ್ ಆಯ್ಕೆ ಅನಿವಾರ್ಯವಾಗಲಿದೆ. ಇನ್ನು ರವಿಚಂದ್ರನ್ ಅಶ್ವಿನ್ ಸಹ ುತ್ತಮವಾಗಿ ಬೌಲ್ ಮಾಡುತ್ತಿದ್ದು ಅವರೂ ತಂಡದೊಳಕ್ಕೆ ನುಗ್ಗಲು ಬಾಗಿಲು ಬಡಿಯುತ್ತಿದ್ದಾರೆ. ಮೀರ್ ಪುರದಲ್ಲಿ ಫೆಬ್ರವರಿ 19ರಂದು ಪ್ರಾರಂಭದ ಪಂದ್ಯದಲ್ಲಿ ಆಡಿದ ಬಳಿಕ ಶ್ರೀಶಾಂತ್ ವಾಟರ್ ಬಾಯ್ ಆಗಿ ತಂಡದ ಸೇವೆಯಲ್ಲಿದ್ದಾರೆ.
'ಮುಂಬೈ ವಾಂಖೇಡ್ ಪಿಚ್ ಆರಂಭದಲ್ಲಿ ವೇಗ ಮತ್ತು ಬೌನ್ಸ್ ಗೆ ನೆರವಾಗಲಿದೆ. ರಿವರ್ಸ್ ಸ್ವಿಂಗ್ ಗೂ ಅವಕಾಶವಿದೆ. ಶ್ರೀಶಾಂತ್ ಅಂತಹ ವೇಗಿಗಳು ನಿಜಕ್ಕೂಇಲ್ಲಿ ವಿಜೃಂಭಿಸಬಹುದು. ಮೂರನೇ ವೇಗದ ಬೌಲರ್ ಇದ್ದರೆ ನನಗೂ ಬೌಲಿಂಗ್ ಬದಲಾವಣೆಗೆ ಹೆಚ್ಚು ಅವಕಾಶ ಲಭಿಸಲಿದೆ. ಜತೆಗೆ ಶ್ರೀಶಾಂತ್ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸವಿದೆ' ಎಂದು ಶ್ರೀಶಾಂತ್ ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ.