ಶನಿವಾರ ಆಟ, ಭಾನು ಸಿನೆಮಾ, ಸೋಮ ಯುಗಾದಿ
1983ರ ನಂತರ ವಿಶ್ವಕಪ್ ಗೆಲ್ಲುವ ಕನಸು ಭಾರತಕ್ಕೆ ಕನಸಾಗಿಯೇ ಉಳಿದಿದೆ. 1996ರಲ್ಲಿ ಗೆದ್ದಿದ್ದ ಶ್ರೀಲಂಕಾ ಮತ್ತೊಮ್ಮೆ ತನ್ನ ಬುಟ್ಟಿಗೆ ಹಾಕಿಕೊಳ್ಳಲು ಶತಪ್ರಯತ್ನ ಮಾಡಲಿದೆ. ಯಾವುದೇ ತಂಡದ ಮೇಲೆ ಎಷ್ಟೇ ಭರವಸೆಗಳಿದ್ದರೂ, ಆಯಾ ದಿನ ಯಾವ ತಂಡ ಅತ್ಯುತ್ತಮವಾಗಿ ಆಡುತ್ತದೋ ಅದೇ ವಿಶ್ವಕಪ್ ಗೆಲ್ಲಲಿದೆ. ಎಂದಿನಂತೆ ದಟ್ಸ್ ಕನ್ನಡ ಕ್ಷಣಕ್ಷಣದ ವಿವರಗಳನ್ನು ಓದುಗರಿಗೆ ಬಡಿಸಲಿದೆ. ರೋಚಕ ದೃಶ್ಯಗಳನ್ನು ಕಾಣಲು ಚಿತ್ರಪಟದತ್ತ ಒಂದು ಕಣ್ಣಿರಲಿ. [ಕ್ರಿಕೆಟ್ ಸುದ್ದಿ ಸ್ವಾರಸ್ಯ] [ಚಿತ್ರಪಟ]
***
ಕ್ರಿಕೆಟ್ ಕಾಳಗ ಮುಗಿದ ನಂತರ ಭಾನುವಾರ ಏನಪ್ಪಾ ಮಾಡುವುದು ಎಂಬ ಚಿಂತೆ ನಿಮ್ಮದಾಗಿದ್ದರೆ, ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎನ್ನಬಹುದಾದ ಸಂಜು ವೆಡ್ಸ್ ಗೀತಾ ತೆರೆಗೆ ಅಪ್ಪಳಿಸಿದೆ. ನಮ್ಮ ಚಿತ್ರವಿಮರ್ಶಕರು ಬರೆದಿರುವಂತೆ ಇದೊಂದು ಅಮರ ಮಧುರ ಪ್ರೇಮ ಕಥೆ. ತನ್ನ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು ಹೇಳಿರುವ ಚಿತ್ರನಟಿ ರಮ್ಯಾ ಮನೋಜ್ಞವಾಗಿ ನಟಿಸಿದ್ದಾರಂತೆ.
ಕಿಟ್ಟಿಯೂ ಸಖತ್ತಾಗಿ ಅಭಿನಯಿಸಿದ್ದಾರಂತೆ. ತಪ್ಪದೆ ಚಿತ್ರಮಂದಿರದತ್ತ ಪಯಣ ಬಳಿಸಿ. ಸಾಧ್ಯವಾದರೆ, ನಿಮಗೆ ಚಿತ್ರ ಹೇಗೆ ಅನಿಸುತ್ತದೆ ಎಂಬ ಬಗ್ಗೆ ನಮಗೆ ಬರೆದು ತಿಳಿಸಿ. ಚಿತ್ರವಿಮರ್ಶಕರು ಏನೇ ಬರೆದರೂ ಚಿತ್ರದ ಹಣೆಬರಹ ನಿರ್ಧರಿಸುವ ಪ್ರೇಕ್ಷಕನ ವಿಮರ್ಶೆಯೇ ಅಂತಿಮ ಅಲ್ಲವೆ? [ಚಿತ್ರವಿಮರ್ಶೆ]
***
ಬೇಂದ್ರೆ ಅಜ್ಜ ಹೇಳಿದಂತೆ ಹೊಸ ವರುಷಕೆ ಹೊಸತು ಹೊಸತು ತರುವ ಯುಗಾದಿ ಹೊಸ ಆಶಯ, ಹೊಸ ಕನಸು, ಹೊಸ ಗುರಿಗಳನ್ನು ಹೊತ್ತು ಮತ್ತೆ ಬಂದಿದೆ. ಹಿಂದೂ ಸಂಪ್ರದಾಯಸ್ಥರಿಗೆ ಯುಗಾದಿ ಹೊಸ ವರ್ಷದ ಆರಂಭ. ಖರನಾಮ ಸಂವತ್ಸರ ನಿಮ್ಮ ಜೀವನದಲ್ಲಿಯೂ ಹೊಸ ಉತ್ಸಾಹ ಉಕ್ಕಿಸಲಿ. ಹೊಸ ವರುಷದೊಂದಿಗೆ ಹೊಸ ಚಿಂತನೆಗಳೂ ತೆರೆದುಕೊಳ್ಳಲಿ. ಸೋಮವಾರ ಹೇಗಿದ್ರೂ ರಜಾ. ಜೀವನದಲ್ಲಿ ಏನೇ ಕಷ್ಟು ಸುಖಗಳು ಬಂದರೂ ಎಲ್ಲರೊಂದಿಗೆ ಸಮನಾಗಿ ಹಂಚಿಕೊಳ್ಳುತ್ತ ಬಾಳುತ್ತೇವೆ ಎಂಬ ಆಶಯದೊಂದಿಗೆ ಬೇವು ಬೆಲ್ಲ ಹಂಚಿ. ಬಂಧುಬಾಂಧವರೊಂದಿಗೆ ಮೃಷ್ಟಾನ್ನದೊಡನೆ ಮಜಾ ಮಾಡುತ್ತ ಸಂತೋಷವಾಗಿ ಕಾಲ ಕಳೆಯಿರಿ.
ಅಂದ ಹಾಗೆ, ಚೈತ್ರದ ಕೋಗಿಲೆ ತನ್ನ ಇಂಪಾದ ಮಾಧುರ್ಯದೊಂದಿಗೆ ಕುಹೂಕುಹೂ ಎನ್ನಲು ಈಗಾಗಲೆ ಪ್ರಾರಂಭಿಸಿದೆ. ಕೋಗಿಲೆ ಯಾಕೆ ಹಾಡುತ್ತದೆ? ಕಾರಣವೇನೇ ಇದ್ದರೂ, ಮಾವಿನ ಮರದ ಮರೆಯ ಕೋಗಿಲೆಯ ಕೂಗು, ಹೊಂಗೆ ಹೂವ ತೊಂಗಲಲ್ಲಿಂದ ತೇಲಿತೇಲಿ ಬರುವ ಭೃಂಗದ ಸಂಗೀತ ಕೇಳಲು ಏನೋ ಒಂದು ಬಗೆಯ ಆನಂದ. ಖರನಾಮ ಸಂವತ್ಸರ ನಿಮ್ಮ ಕುಟುಂಬದವರಿಗೆಲ್ಲ ಅದೇ ಬಗೆಯ ಆನಂದ ನೀಡಲಿ. ಒನ್ ಇಂಡಿಯಾದಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.