
ಬೆಂಗಳೂರು, ಫೆ. 7 : ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಕನ್ನಡಪ್ರಭ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ವಿಧಾನವೀದಿಯಲ್ಲಿರುವ ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡದಲ್ಲಿರುವ ಪತ್ರಿಕೆಯ ಕಚೇರಿಯಲ್ಲಿ ಅವರು ಹೊಸ ಸಂಪಾದಕರಾಗಿ ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು. ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸ್ಥಾನವನ್ನು ಅವರು ತೊರೆದು ನಾಳೆಗೆ ಎರಡು ತಿಂಗಳು ತುಂಬುತ್ತದೆ.
ಟೈಂಸ್ ಪತ್ರಿಕಾ ಸಮೂಹದಿಂದ ಹೊರ ನಡೆದ ನಂತರ ಭಟ್ಟರು ಏನು ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬ ಬಗ್ಗೆ ಪತ್ರಕರ್ತರು ಮತ್ತು ಪತ್ರಕರ್ತರಲ್ಲದವರ ವಲಯದಲ್ಲಿ ಕುತೂಹಲ ಮನೆ ಮಾಡಿತ್ತು. ಕನ್ನಡಪ್ರಭ ಸೇರುವುದರ ಮೂಲಕ ಭಟ್ಟರು ಈ ಕುರಿತ ಊಹಾಪೋಹಗಳನ್ನು ಆಪೋಶನ ತೆಗೆದುಕೊಂಡಿದ್ದಾರೆ.
ವಿಜಯ ಕರ್ನಾಟಕ ಪತ್ರಿಕೆ ಸೇರುವ ಮುನ್ನ ಅವರು ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ನಂತರ ಇಂಡಿಯನ್ ಎಕ್ಸ್ ಪ್ರೆಸ್ ನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ನಲ್ಲಿ ಸಹಾಯಕ ಪ್ರೊಫೆಸರಾಗಿದ್ದರು. ಆ ಕೆಲಸ ತೊರೆದು ಸಂಸದ ಅನಂತ ಕುಮಾರ್ ಅವರು ಎನ್ ಡಿ ಎ ಸರಕಾರದಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲಿಂದ ವಿಜಯ ಕರ್ನಾಟಕಕ್ಕೆ ಬಂದು ಹನ್ನೊಂದು ವರ್ಷ ಅಲ್ಲಿ ಸೇವೆ ಸಲ್ಲಿಸಿ ಇದೀಗ ಕನ್ನಡಪ್ರಭಕ್ಕೆ ಮರಳಿದ್ದಾರೆ. ಜಗತ್ತು ದುಂಡಗಿದೆ.




















