ಪ್ರಿಯಾಂಕಾಳನ್ನು ವಂಚಿಸಿದ್ದ ಆನಂದನಿಗೆ ಜಾಮೀನು
ಇಬ್ಬರು ಸ್ಥಳೀಯ ವ್ಯಕ್ತಿಗಳ ಗ್ಯಾರಂಟಿ, 30 ಸಾವಿರ ರು, ಷ್ಯೂರಿಟಿ ಪಡೆದು ನ್ಯಾಯಮೂರ್ತಿ ಆನಂದ್ ಅವರಿದ್ದ ಏಕಸದಸ್ಯ ಪೀಠ ಆರೋಪಿ ಆನಂದ್ ಗೆ ಜಾಮೀನು ನೀಡಿದೆ. ಆದರೆ ಆರೋಪಿ ಬೆಂಗಳೂರಿನಿಂದ ಹೊರಹೋಗದಂತೆ ಸೂಚಿಸಲಾಗಿದ್ದು, ಪ್ರತಿ ವಿಚಾರಣೆಗೂ ತಪ್ಪದೇ ಹಾಜರಾಗುವಂತೆ ಕಟ್ಟಪ್ಪಣೆ ವಿಧಿಸಲಾಗಿದೆ.
ಪ್ರತಿ 15 ದಿನಗಳಿಗೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಹಾಗೂ ಪ್ರಿಯಾಂಕಾ ಮತ್ತು ಕುಟುಂಬಕ್ಕೆ ಬೆದರಿಕೆ ಹಾಕುವ ಪ್ರಯತ್ನ ಮಾಡಬಾರದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಕಳೆದ ನವೆಂಬರ್ 11 ರಂದು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಆನಂದ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಿಯಾಂಕಾ ಕಳೆದ ನಾಲ್ಕು ವರ್ಷಗಳಿಂದ ಆನಂದ್ ಎಂಬಾತನನ್ನು ಪ್ರೀತಿಸುತ್ತಿದ್ದರು.
ಆದರೆ, ಆನಂದ್ ಪ್ರೀತಿಸುವ ನಾಟಕವಾಡಿ ಆಕೆಯನ್ನು ಗರ್ಭಿಣಿ ಮಾಡಿ ಬೇರೊಂದು ಯುವತಿಯೊಂದು ಮದುವೆ ಮಾಡಿಕೊಂಡಿದ್ದ. ರಾಜಾಜಿನಗರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆ ಮೇಲೆ ಹೋಗಿ ಪ್ರಿಯಾಂಕಾ ಮತ್ತು ಅಕೆ ಸಹೋದರಿಯರು ಗಲಾಟೆ ನಡೆಸಿದ್ದರು.
ಈ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಇಬ್ಬರಿಗೂ ನಾಲ್ಕು ವರ್ಷಗಳಿಗೂ ಅಧಿಕ ಕಾಲ ಪರಸ್ಪರ ಸ್ನೇಹವಿದ್ದುದರಿಂದ ಈ ಹಂತದಲ್ಲಿ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.