ಮೇರೆ ಮೀರಿದ ವಿಷ್ಣು ಅಭಿಮಾನಿಗಳ ಸಂತಸ
ವಿಷ್ಣುವರ್ಧನ್ ಅವರ 200ನೆಯ ಚಿತ್ರ ಮತ್ತು ಅವರ ಕೊನೆಯ ಚಿತ್ರ ಆಪ್ತರಕ್ಷಕ ಬಿಡುಗಡೆಯಾದಾಗ ಅಭಿಮಾನಿಗಳ ಸಂತಸಕ್ಕೆ ಎಣೆಯಿರಲಿಲ್ಲ. "ವಿಷ್ಣುವರ್ಧನ್ ಗೆ ಜಯವಾಗಲಿ, ಅಣ್ಣನಿಗೆ ಜಯವಾಗಲಿ, ಅಭಿನಯ ಭಾರ್ಗವ ಅಜರಾಮರ, ವಿಷ್ಣು ಚಿರಾಯು" ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು. ಸಿಳ್ಳೆಗಳಿಗಂತೂ ಕೊನೆಯೇ ಇರಲಿಲ್ಲ.
ಇದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಿಗ್ಗೆ ಕಂಡ ದೃಶ್ಯ. ಥಿಯೇಟರು ಎತ್ತರದ ಕಟೌಟ್ ಗೆ ಹೂವೇರಿಸಿ, ಕಾಯಿ ಒಡೆದು ಪೂಜೆ ಸಲ್ಲಿಸಲಾಯಿತು. ನೆರೆದಿದ್ದವರಿಗೆ ಸಿಹಿ ಹಂಚಲಾಯಿತು. ಬೆಳಿಗ್ಗೆ ಎಂಟು ಗಂಟೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಎರಡು ದಿನಗಳಿಂದ ಟಿಕೆಟ್ ಬುಕ್ ಆಗಿರುವುದರಿಂದ ಅನೇಕರು ಟಿಕೆಟ್ ಸಿಗದೆ ನಿರಾಶೆ ಅನುಭವಿಸಬೇಕಾಯಿತು. ಮುಂಗಡ ಟಿಕೆಟ್ ಬುಕ್ ಮಾಡಿದವರಿಗಂತೂ ಆಕಾಶ ಮೂರೇ ಗೇಣು.
ಅಣೆಕಟ್ಟೆ ಗೇಟು ತೆರೆದಾಗ ನುಗ್ಗುವ ನೀರಿನಂತೆ ಥಿಯೇಟರಿಗೆ ನುಗ್ಗಿದ ಜನರಿಗೆ ಇದ್ದದ್ದು ಒಂದೇ ಆಶಯ, ವಿಷ್ಣುವನ್ನು ತೆರೆಯ ಮೇಲೆ ನೋಡಬೇಕು, ಕಣ್ತುಂಬಿಕೊಳ್ಳಬೇಕು. ಹಲವರಿಗೆ ಕಣ್ಣಿನ ಕ್ರಸ್ಟ್ ಗೇಟ್ ಕೂಡ ತೆರೆದಿತ್ತು, ಅಶ್ರು ಧಾರೆಧಾರೆಯಾಗಿ ಹರಿದಿತ್ತು. ಕೆಲವರಿಗೆ ಆನಂದಕ್ಕೆ ಪಾರವೇ ಇರಲಿಲ್ಲ. ಹೂವಿನ ಪಕಳೆಗೊಂದಿಗೆ ಚಿಲ್ಲರೆಗಳನ್ನು ತೂರಿದಾಗಲೇ ಕೆಲವರಿಗೆ ಆನಂದ. ಒಬ್ಬರಿಂದೊಬ್ಬರಿಗೆ ಪಾಸ್ ಆದ ಚಾಕಲೇಟುಗಳಿಗಂತೂ ಲೆಕ್ಕವೇ ಇರಲಿಲ್ಲ.
ವಿಷ್ಣುವಿನ ಪುಟ್ಟಪುಟ್ಟ ಪೋಸ್ಟರುಗಳಿಗಂತೂ ಲೆಕ್ಕವೇ ಇರಲಿಲ್ಲ. ಹಲವರು ಕೈಯಲ್ಲಿ ವಿಷ್ಣು ಕುರಿತು ಬರೆದ ಪುಸ್ತಕವನ್ನೂ ಥಿಯೇಟರಿಗೆ ತಂದಿದ್ದರು. ಆಪರಿಯಿತ್ತು ಅಭಿಮಾನದ ಪ್ರವಾಹ. ವಿಷ್ಣು ಅವರಂತೆ ವೇಷ ತೊಟ್ಟ ವ್ಯಕ್ತಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ.
ವಿಷ್ಣು ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿರುವುದೇನೋ ನಿಜ. ಸುಮಾರು 70ಕ್ಕೂ ಹೆಚ್ಚಿನ ಥಿಯೇಟರುಗಳಲ್ಲಿ ಆಪ್ತರಕ್ಷಕ ಬಿಡುಗಡೆಯಾಗಿದೆ. ಬಿಡುಗಡೆಯಾದ ಚಿತ್ರಮಂದಿರಗಳಲ್ಲೆಲ್ಲ ವಿಷ್ಣು ಕಟೌಟ್ ಗೆ ಕ್ಷೀರಾಭಿಷೇಕ, ಕಿವಿಗಡಚಿಕ್ಕುವ ಪಟಾಕಿಗಳ ಸದ್ದು, ಮುಗಿಲು ಮುಟ್ಟಿದ ಅಭಿಮಾನಿಗಳ ಜೈಕಾರ ಮತ್ತು ಎಲ್ಲೆಡೆ ಹರ್ಷದ ಹೊನಲು.
ವಿಷ್ಣು ಅವರ ಮರಣದ ನಂತರ ಬಿಡುಗಡೆಯಾಗಿರುವ ಎರಡನೇ ಮತ್ತು ಭಾರೀ ನಿರೀಕ್ಷೆಯ ಚಿತ್ರ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಸ್ಕೂಲ್ ಮಾಸ್ಟರ್ ನೆಲಕಚ್ಚಿದ್ದನ್ನು ಮರೆತು ಆಪ್ತರಕ್ಷಕಕ್ಕೆ ಜನ ಮುಗಿಬಿದ್ದಿದ್ದಾರೆ. ಒಂದರ್ಥದಲ್ಲಿ ಪ್ರೇಕ್ಷಕರೇ ನಿಜವಾದ ಆಪ್ತರಕ್ಷಕರು ನಿರ್ಮಾಪಕರಿಗೆ. ಬಾಕ್ಸ್ ಆಫೀಸಿನಲ್ಲಿ ಚಿತ್ರ ಕೊಳ್ಳೆ ಹೊಡೆಯುವುದೆ? ಕಾಲವೇ ಉತ್ತರಿಸಲಿದೆ.