
ಕೊಲ್ಕತ್ತಾ, ಫೆ. 9 : ಪಶ್ಚಿಮ ಬಂಗಾಲ, ಬಿಹಾರ್, ಒರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ವ್ಯಾಪಕವಾಗಿರುವ ನಕ್ಸಲ್ ಹಾವಳಿಗೆ ತಗ್ಗಿಸಲು ಕೇಂದ್ರ ಸರಕಾರ ಮತ್ತೊಮ್ಮೆ ಮುಂದಾಗಿದ್ದು, ನಕ್ಸಲರು ಹಿಂಸೆ ಕೈಬಿಟ್ಟು ಮಾತುಕತೆಗೆ ಬಂದರೆ ಎಲ್ಲ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರಕಾರ ಬದ್ದವಾಗಿದೆ ಎಂದು ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಹೇಳಿದರು.
Read: In English
ಪಶ್ಚಿಮ ಬಂಗಾಲದ ಪ್ರವಾಸದಲ್ಲಿರುವ ಅವರು ಕೊಲ್ಕತ್ತಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ನಕ್ಸಲ್ ರಿಗೆ ಹಿಂಸೆಯನ್ನು ಕೈಬಿಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈಗಾಗಲೇ ಅನೇಕ ಬಾರಿ ಮನವಿ ಮಾಡಿಕೊಂಡಿವೆ. ಹಿಂಸೆ ಹೆಚ್ಚಾಗಿದ್ದರಿಂದ ಸೇನಾ ದಾಳಿ ಆರಂಭಿಸಲಾಗಿದೆ. ಈಗಲೂ ಸಮಯ ಮೀರಿಲ್ಲ. ನಕ್ಸಲರು ಹಿಂಸೆ ಕೈಬಿಟ್ಟು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಅವರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಬದ್ಧವಾಗಿದೆ. ಆದರೆ, ನಕ್ಸಲರು ಹಿಂಸೆ ಕೈಬಿಡದಿದ್ದರೆ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಚಿದಂಬರಂ ಎಚ್ಚರಿಕೆ ನೀಡಿದರು.






















