ಮಂಗಳೂರಿನಲ್ಲಿ ಸಿಕ್ಕಿ ಬಿದ್ದ ಸೀರಿಯಲ್ ರೇಪಿಸ್ಟ್
ಮಂಗಳೂರಿನ ದೇರಳಕಟ್ಟೆಯ ನಿವಾಸಿ ಆನಂದ್ ಅಲಿಯಾಸ್ ಮೋಹನ್ ಕುಮಾರ್ (46) ಪೊಲೀಸರ ಬಲೆಗೆ ಬಿದ್ದ ವಿಕೃತಿಕಾಮಿ. 18 ರಿಂದ 20 ವರ್ಷದ ಯುವತಿಯರನ್ನು ಅಪಹರಿಸಿ ಮೈಮೇಲಿದ್ದ ಚಿನ್ನಾಭರಣಗಳನ್ನು ಕಸಿದುಕೊಂಡು ಅತ್ಯಾಚಾರ ನಡೆಸಿ ಕೊನೆಗೆ ಹತ್ಯೆ ಮಾಡುತ್ತಿದ್ದ ಎಂದು ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಕಳೆದ 5 ವರ್ಷಗಳಿಂದ ಈ ದಂಧೆ ಶುರು ಮಾಡಿಕೊಂಡಿದ್ದ ಆನಂದ್ ಅಲಿಯಾಸ್ ಮೋಹನ್ ಕುಮಾರ್ ಸುಮಾರು 18 ಹುಡುಗಿಯರ ಹತ್ಯೆ ಮಾಡಿದ್ದಾನೆ. ಅದರಲ್ಲಿ 13 ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು. 5 ಹುಡುಗಿಯರು ಕಾಸರಗೋಡಿನವರಾಗಿದ್ದಾರೆ. ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿರುವ ಹುಡುಗಿಯರ ಮೇಲೆ ಕಣ್ಣು ಹಾಕುತ್ತಿದ್ದ ಆರೋಪಿ, ತನ್ನ ಮಾತಿನ ಮೋಡಿಯಿಂದ ಹುಡುಗಿಯರನ್ನು ಮರಳು ಮಾಡಿ ಕರೆದುಕೊಂಡು ಹೋಗಿ ಸೈನೈಡ್ ನುಂಗಿಸಿ ಕೊಲೆ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳದ ಶಾಲೆಯೊಂದರಲ್ಲಿ ಮೋಹನ್ ಕುಮಾರ್ 1988ರಲ್ಲಿ ದೈಹಿಕ ತಾತ್ಕಾಲಿಕ ಶಿಕ್ಷಕನಾಗಿ ಸೇರಿಕೊಂಡಿದ್ದು, 2003-04ರ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಅಲ್ಲಿಂದ ಅಧಿಕೃತವಾಗಿ ಈ ಕೃತ್ಯಕ್ಕೆ ಇಳಿದಿದ್ದಾನೆ. ಕೇವಲ ಹಣ ಮತ್ತು ಲೈಂಗಿಕ ತೃಷೆಗಾಗಿ ಮೋಹನ್ ಕುಮಾರ್ ಅಮಾಯಕ ಹುಡುಗಿಯರಿಗೆ ಗಾಳ ಹಾಕಿ ತನ್ನ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಅವರು ಹೇಳಿದರು. ಸೈಕೋಪಾತ್ ಉಮೇಶ್ ರೆಡ್ಡಿಯನ್ನೇ ಹೋಲುವ ಈತನ ಬಂಧನದಿಂದ ದಕ್ಷಿಣ ಕನ್ನಡ ಜಿಲ್ಲೆ ನಿಟ್ಟುಸಿರು ಬಿಟ್ಟಿದೆ.
ಪೊಲೀಸ್ ಪೇದೆ ಆಗಿದ್ದ ಉಮೇಶ್ ರೆಡ್ಡಿ ಕಾಮುಕತನಕ್ಕೆ ಬಿದ್ದು ಹುಡುಗಿಯರು, ಗೃಹಿಣಿಯರು ಸೇರಿದಂತೆ ಅನೇಕರನ್ನು ತನ್ನ ಲೈಂಗಿಕ ತೃಷೆಗೆ ಬಳಿಸಿಕೊಂಡು ನಂತರ ಕೊಲೆ ಮಾಡುತ್ತಿದ್ದ. ಸಿರಿಯಲ್ ಕಿಲ್ಲರ್ ಮಲ್ಲಿಕಾ ಕೂಡಾ ಅಮಾಯಕ ಮಹಿಳೆಯರನ್ನು ಸೈನೈಡ್ ಮೂಲಕ ಹತ್ಯೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಇಬ್ಬರು ಇದೀಗ ಪೊಲೀಸರು ವಶದಲ್ಲಿದ್ದಾರೆ. ಉಮೇಶ್ ರೆಡ್ಡಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದೆ. ಇದೀಗ ಇದರ ಸಾಲಿಗೆ ಮಂಗಳೂರಿನಲ್ಲಿ ಮತ್ತೊಬ್ಬ ಹಂತಕ ಸೇರ್ಪಡೆಗೊಂಡಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)