ಪತ್ರಕರ್ತೆ ಗೌರಿ ಲಂಕೇಶ್ ವಿರುದ್ದ ದಾವೆ
ಉಡುಪಿ, ಜು. 30 : ಗೌರಿ ಲಂಕೇಶ್ ತಮ್ಮ ಕನ್ನಡ ವಾರಪತ್ರಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಕುರಿತು ಪ್ರಕಟವಾದ ವರದಿ ವಿರುದ್ದ ಉಡುಪಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಸ್ಥಳೀಯ ನಿವಾಸಿ ವಾಸುದೇವ್ ಭಟ್ ಎನ್ನುವವರು ಖಾಸಗಿ ದಾವೆ ಹೂಡಿದ್ದಾರೆ.
ಚಲನಚಿತ್ರ ನಟಿ ಮಲ್ಲಿಕಾ ಶೆರಾವತ್ ಗೋಕರ್ಣ ಭೇಟಿಗೆ ಸಂಬಂಧಿಸಿ ಮೇ 27, 2009ರ ಲಂಕೇಶ್ ವಾರಪತ್ರಿಕೆಯಲ್ಲಿ ಅವಹೇಳನಕಾರಿ, ಆಧಾರರಹಿತ ಮತ್ತು ತುಚ್ಚ ವರದಿ ಪ್ರಕಟಿಸಿದ್ದು, ಇದು ಮಠ ಮತ್ತು ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಭಕ್ತರ ಭಾವನೆಗೆ ಘಾಸಿಯುಂಟು ಮಾಡಿದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮತ್ತು ಕೋಮು ಸಾಮರಸ್ಯ ಕದಡುವ ಯತ್ನ ಪತ್ರಿಕೆಯಿಂದಾಗಿದ್ದು, ಐಪಿಸಿ 153ಎ, 295ಎ ಮತ್ತು 505 ಅಡಿ ಶಿಕ್ಷಾರ್ಹ ಅಪರಾಧವೆಸಗಿದ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ವಾಸುದೇವ್ ಭಟ್ ಮನವಿ ಮಾಡಿದ್ದಾರೆ.
ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಮತ್ತು ವರದಿಗಾರ ಬಿಳಿದಾಳೆ ಈಶ ವಿರುದ್ದ ದೂರು ಸಲ್ಲಿಸಿದ್ದು, ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸುವಂತೆ ನಗರದ ಮಣಿಪಾಲ ಠಾಣಾಧಿಕಾರಿಗೆ ನ್ಯಾಯಾಲಯವು ಕಡತ ಹಸ್ತಾಂತರಿಸಿ ಆಗಸ್ಟ್ 18 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
(ದಟ್ಸ್ ಕನ್ನಡ ವಾರ್ತೆ)