ಏ. 23 ರಂದು ಜಯನಗರ ಕ್ಷೇತ್ರದ ಅಭ್ಯರ್ಥಿಯಾಗಿ ಇವರು ಸಲ್ಲಿಸಿದ ನಾಮಪತ್ರ ಪುರಸ್ಕೃತಗೊಂಡಿದೆ. ನಗಾರಿ ಲಾಂಛನದಡಿಯಲ್ಲಿ ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ರವಿ ಅವರು ವ್ಯಕ್ತಪಡಿಸಿದ್ದಾರೆ. ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಇಂದು ಬೆಳಗ್ಗೆ 10 ಕ್ಕೆ ಆರಂಭಿಸಿದ ರವಿಕೃಷ್ಣರೆಡ್ಡಿ ಅವರಿಗೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಮಿತ್ರರು ಹಾಗೂ ಆಸಕ್ತ ನಾಗರೀಕರು ಕೈಜೋಡಿಸಿದ್ದಾರೆ. 'ಮೌಲ್ಯಾಗ್ರಹ 'ಎಂಬ ಹೆಸರಿನಲ್ಲಿ ನಡೆಯಲಿರುವ ಈ ಉಪವಾಸ ಸತ್ಯಾಗ್ರಹ ಏ. 28ರಂದು ಕೊನೆಗೊಳ್ಳಲಿದೆ.
ಚಿಂತಕರು, ಮೌಲ್ಯಾಧಾರಿತ ರಾಜಕಾರಣ ಮಾಡುವವರ ಕೈಯಿಂದ ಕರ್ನಾಟಕ ಇಂದು ಕೈತಪ್ಪಿ ಹೋಗುತ್ತಿದೆ. ಅವರ ಸ್ಥಾನಗಳಲ್ಲಿ ಇವತ್ತು ಭೂಗಳ್ಳರು, ಮಣ್ಣನ್ನೇ ಅಗೆದು ಮಾರಿಕೊಳ್ಳುತ್ತಿರುವ ಗಣಿ ಕುಳಗಳು ಬಂದು ಕೂರುತ್ತಿದ್ದಾರೆ. ಸಮಸ್ಯೆಗಳ ಮೇಲೆ ಸವಾರಿ ಮಾಡುವ ಈಗಿನ ರಾಜಕಾರಣಿಗಳಿಗೆ ಸಮಸ್ಯೆ ಬಗೆ ಹರಿಯುವುದು ಬೇಕಿಲ್ಲ. ಅವರು ಸಮಸ್ಯೆಗಳನ್ನು ಉದ್ಬವಿಸುತ್ತಲೇ ಇರುತ್ತಾರೆ, ಅಲ್ಲೊಬ್ಬ ಇಲ್ಲೊಬ್ಬ ಸಜ್ಜನ ಸಂಘ ಸೇವಾ ಸಂಸ್ಥೆಗಳು ಸದ್ದಿಲ್ಲದೆ ಅವುಗಳಿಗೆ ತೇಪೆ ಹಾಕುತ್ತಲೇ ಇರುತ್ತವೆ. ನಮ್ಮಂತ ಕೆಲವರು ತೇಪೆ ಹಾಕುವ ಬಗ್ಗೆಯೇ ಬರೆಯುತ್ತಾ ಬೆರಳಿಗೆ ವ್ಯಾಯಾಮ ಮಾಡಿಸುತ್ತಿರುತ್ತೇವೆ ಎಂದು ರವಿಕೃಷ್ಣರೆಡ್ಡಿ ಈ ಸಂದರ್ಭದಲ್ಲಿ ದಟ್ಸ್ ಕನ್ನಡಕ್ಕೆ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಚುನಾವಣಾ ಕೊಳದಲ್ಲಿ ಐಟಿ ಹುಡುಗ
















