ಮನಶ್ಶಾಸ್ತ್ರಜ್ಞ ಡಾ. ಸಿ.ಆರ್. ಚಂದ್ರಶೇಖರ್ಗೆ ರಾಷ್ಟ್ರೀಯ ಪುರಸ್ಕಾರ
ನವದೆಹಲಿ : ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸಿದವರಿಗೆ ನೀಡಲಾಗುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರಕ್ಕೆ (ಎನ್ಸಿಎಸ್ಟಿಸಿ) ಮನಶ್ಶಾಸ್ತ್ರಜ್ಞ ಹಾಗೂ ಲೇಖಕರಾದ ಡಾ. ಸಿ.ಆರ್. ಚಂದ್ರಶೇಖರ್ ಪಾತ್ರರಾಗಿದ್ದಾರೆ.
ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಮನೋವೈದ್ಯರಾಗಿರುವ ಚಂದ್ರಶೇಖರ್ ರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ದೇಶದ ನಾನಾ ಸಂಘ, ಸಂಸ್ಥೆ ಹಾಗೂ ತಜ್ಞರಿಂದ ಬಂದ ನಾಮಿನೇಷನ್ಗಳನ್ನು ಆಧರಿಸಿ ನೀಡಲಾಗುವ ಈ ಪ್ರಶಸ್ತಿಯು 1 ಲಕ್ಷ ರುಪಾಯಿ ನಗದು ಹಾಗೂ ಕಂಚಿನ ಪದಕ ಒಳಗೊಂಡಿದೆ.
ಫೆ.27ರಂದು ನವದೆಹಲಿಯ ತಂತ್ರಜ್ಞಾನ ಭವನದ ರಾಮನ್ ಸಭಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ವಿಜ್ಞಾನ ದಿನ ಸಮಾರಂಭದಲ್ಲಿ ಡಾ. ಚಂದ್ರಶೇಖರ್ ಅವರಿಗೆ 2001ರ ಸಾಲಿಗೆ ನೀಡಲಾಗಿರುವ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಡಾ. ಚಂದ್ರಶೇಖರ್ ಅವರು ಮನೋರೋಗಕ್ಕೆ ಸಂಬಂಧಿಸಿದಂತೆ ಹಲವು ಪುಸ್ತಕಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ರಾಜ್ಯದ ಜನಪ್ರಿಯ ದೈನಿಕ ಹಾಗೂ ನಿಯತಕಾಲಿಕಗಳಲ್ಲಿ ಇವರ ಸಾವಿರಾರು ಲೇಖನಗಳು ಪ್ರಕಟವಾಗಿವೆ. ಇವರ ನೂರನೇ ಕನ್ನಡ ಕೃತಿ 24ರಂದು ಬಿಡುಗಡೆ ಆಗಲಿದೆ.
ಮುಖಪುಟ / ಇವತ್ತು... ಈ ಹೊತ್ತು...