ಕಳೆದ ವರ್ಷ ಕಾಡು, ಈ ವರ್ಷ ನಾಡು : ಡಾ. ರಾಜ್ ಹರ್ಷ
ನಗರದ ಕುಮಾರ ಕೃಪ ರಸ್ತೆಯ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ , ಗುರುವಾರ ಬೆಳಗ್ಗೆ ಜರುಗಿದ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸಿ ಮಾತನಾಡುತ್ತಿದ್ದ ವರನಟ ಡಾ। ರಾಜ್ಕುಮಾರ್ ಭಾವುಕರಾಗಿದ್ದರು. ಜೊತೆಯಲ್ಲಿ ಪಾರ್ವತಮ್ಮ ಅವರಿದ್ದರು.
ಕಾಡಿನಲ್ಲಿದ್ದಾಗಲೂ ನನಗೆ ರಾಜ್ಯೋತ್ಸವದ ನೆನಪುಗಳು ಕಾಡುತ್ತಿದ್ದವು. ರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೆ ಹೋದದ್ದಕ್ಕೆ ಸಂಕಟವಾಗಿತ್ತು . ಈ ವರ್ಷ ನಿಮ್ಮ ನಡುವೆ ಇರುವುದಕ್ಕೆ ಸಂತೋಷವಾಗಿದೆ. ಈಗ ಸಿಹಿ ತಿನ್ನುವ ಯೋಗ ಬಂದಿದೆ. ತಾಯಿ ಭುವನೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ರಾಜ್ ಹೇಳಿದರು.
ನಾಡಹಬ್ಬದ ಸಂಭ್ರಮದಲ್ಲಿ ರಾಜ್ ಅವರೊಂದಿಗೆ ಪುಟ್ಟದೊಂದು ಗುಂಪು ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ನೆರೆದಿತ್ತು . ಪಾರ್ವತಮ್ಮನವರಿಗೆ ಸಿಹಿ ತಿನ್ನಿಸುವ ಮೂಲಕ ರಾಜ್ ಸಂಭ್ರಮ ಹಂಚಿಕೊಂಡರು. ನೆರೆದವರಿಗೂ ಸಿಹಿ ವಿತರಿಸಲಾಯಿತು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್, ಅಖಿಲ ಕರ್ನಾಟಕ ಡಾ।ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರನಟ ಶಿವಕುಮಾರ್, ಅಪ್ಪು ಪುನೀತ್ ರಾಜ್ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.