ದೆಹಲಿ ಗ್ಯಾಂಗ್ ರೇಪಿಸ್ಟುಗಳಿಗೆ ಗಲ್ಲು ಶಿಕ್ಷೆ ಪ್ರಕಟ
ನವದೆಹಲಿ, ಸೆಪ್ಟೆಂಬರ್ 13: ಚಲಿಸುತ್ತಿದ್ದ ಬಸ್ಸಿನಲ್ಲಿ ಡಿಸೆಂಬರ್ 16ರಂದು ಅರೆ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ 4 ಕಾಮಾಂಧರಿಗೆ ದೆಹಲಿಯ ಸಾಕೇತ್ ಕ್ಷಿಪ್ರ ನ್ಯಾಯಾಲಯವು ಸಮಸ್ತ ದೇಶವಾಸಿಗಳ ಅಪಾರ ನಿರೀಕ್ಷೆಯಂತೆ ಮರಣದಂಡನೆ ಶಿಕ್ಷೆ ಘೋಷಿಸಿದೆ.
60 ದಿನದೊಳಗೆ ಗಲ್ಲು: 60 ದಿನಗಳೊಳಗಾಗಿ ಗಲ್ಲು ಶಿಕ್ಷೆ ವಿಧಿಸುವಂತೆಯೂ ಕೋರ್ಟ್ ಆದೇಶಿಸಿದೆ.ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಯೋಗೀಶ್ ಖನ್ನಾ ಅವರು ಈ ತೀರ್ಪು ನೀಡಿದ್ದಾರೆ. ತೀರ್ಪು ಪ್ರಕಟವಾಗುತ್ತಿದ್ದಂತೆ ನ್ಯಾಯಾಲಯದ ಆವರಣ ಸೇರಿದಂತೆ ದೇಶಾದ್ಯಂತ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಬಾಧಿತ ಕುಟುಂಬದವರು ದಿಲ್ಲಿ ಪೊಲೀಸರು ಮತ್ತು ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ದೆಹಲಿಯಲ್ಲಿ ಪೈಶಾಚಿಕ ಕೃತ್ಯ ಎಸಗಿದ ಸುಮಾರು ಒಂಬತ್ತು ತಿಂಗಳ ಬಳಿಕ ಮುಕೇಶ್ (26), ಪವನ್ ಗುಪ್ತಾ (19), ವಿನಯ್ ಶರ್ಮಾ (20) ಮತ್ತು ಅಕ್ಷಯ್ ಸಿಂಗ್ ಠಾಕೂರ್ (28) ಅವರು ಸರಣಿ ಅತ್ಯಾಚಾರ, ಕೊಲೆ, ಕೊಲೆ ಯತ್ನ, ಅಸಹಜ ಅಪರಾಧಗಳು, ಒಳಸಂಚು, ಕೊಲೆ ಮಾಡುವುದಕ್ಕಾಗಿ ಅಪಹರಣ ಮತ್ತು ಸಾಕ್ಷ್ಯ ನಾಶ, ಡಕಾಯಿತಿ ಮತ್ತಿತರ ಕೃತ್ಯಗಳನ್ನು ಎಸಗಿದ್ದಾರೆ ಎಂದು ನ್ಯಾಯಾಲಯವು ಮಂಗಳವಾರ ಸಾರಿತ್ತು.
ಮತ್ತೊಬ್ಬ ಬಾಲ ಅಪರಾಧಿಗೆ ಇತ್ತೀಚೆಗೆ 3 ವರ್ಷದ ಸಾಧಾರಣ ಶಿಕ್ಷೆಯಾಗಿತ್ತು. ಒಬ್ಬ ಆರೋಪಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಕೋರ್ಟಿನಲ್ಲಿ ಹಾಜರಿದ್ದ ನಾಲ್ಕೂ ಕಾಮಾಂಧರು ಒಂದೇ ಸಮನೆ ಬಿಕ್ಕಿ ಬಿಕ್ಕಿ ಅತ್ತರು. ನಾಲ್ವರು ಪಾತಕಿಗಳಿಗೆ ದೆಹಲಿ ಸಾಕೇತ್ ಕೋರ್ಟ್ ಗಲ್ಲು ಶಿಕ್ಷೆ ಪ್ರಕಟಿಸುತ್ತಿದ್ದಂತೆ ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಕಣ್ಣೀರಿಟ್ಟ ಘಟನೆ ಕೋರ್ಟ್ ಹೊರಗಡೆ ನಡೆಯಿತು.
ತಮ್ಮ ಕಕ್ಷಿದಾರರ ಪರ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಡಿಫೆನ್ಸ್ ವಕೀಲ ಸಿಂಗ್ ಹೇಳಿದ್ದಾರೆ. ಅಲ್ಲದೆ ಮುಂದಿನ ಎರಡು ತಿಂಗಳಲ್ಲಿ ಈ ದೇಶದಲ್ಲಿ ಯಾವುದೇ ಅತ್ಯಾಚಾರ ನಡೆಯದಿದ್ದರೆ ತಾವು ಮೇಲ್ಮನವಿ ಸಲ್ಲಿಸುವುದಿಲ್ಲ ಎಂದೂ ಹೇಳಿದ್ದಾರೆ.