Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒನ್ಇಂಡಿಯಾ ಕಚೇರಿಯಲ್ಲಿ ಕೋಟಿ ಗೆದ್ದ ಬಾಷಾ
ಅದೃಷ್ಟವೆಂದರೆ ಇದೇನಾ? ಕಲಿತ ವಿದ್ಯೆ ಯಾವುದೇ ಕಷ್ಟವಿಲ್ಲದೆ ನಂಬಲಾಗದಷ್ಟು ಹಣ ಜೇಬನ್ನು ತುಂಬಿಸಿದೆ. ಕನಸಲ್ಲೂ ಊಹಿಸಲಾಗದಷ್ಟು ಸನ್ಮಾನ ಸಮಾರಂಭಗಳು, ರಾಜ್ಯದ ಹಿರಿಯ ನಾಯಕರುಗಳ ಕೈಕುಲುಕುವ ಅವಕಾಶ... ಎಲ್ಲಕ್ಕಿಂತ ಹೆಚ್ಚಾಗಿ ಕನಸಿನ ಸಿನೆಮಾ ನಾಯಕನಿಂದ ಅಭಿಮಾನದ 'ಅಪ್ಪು'ಗೆ!
ಇಂಥ ಅದೃಷ್ಟ ಹುಡುಕಿಕೊಂಡು ಬಂದಿದ್ದು ಮತ್ತಾರನ್ನೂ ಅಲ್ಲ, ಸುವರ್ಣ ವಾಹಿನಿ ನಡೆಸಿಕೊಡುವ 'ಕನ್ನಡದ ಕೋಟ್ಯಾಧಿಪತಿ' ರಿಯಾಲಿಟಿ ಶೋದಲ್ಲಿ ಮೊತ್ತಮೊದಲ ಬಾರಿಗೆ 1 ಕೋಟಿ ರು. ಜೇಬಿಗಿಳಿಸಿಕೊಂಡ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿ ಬಳಿಯ ಚೆಳ್ಳೂರು ಗ್ರಾಮದ ಬಡರೈತ ಕುಟುಂಬದಿಂದ ಬಂದ 25ರ ಯುವಕ ಹುಸೇನ್ ಬಾಷಾ ಅವರನ್ನು.
ಒಂದು ಕೋಟಿ ರು. ಗೆದ್ದರೂ ತಲೆಯನ್ನು ಸ್ಥಿರವಾಗಿ ಹೆಗಲ ಮೇಲೆ ಹೊತ್ತಿರುವ, ಕಾಲನ್ನು ಭದ್ರವಾಗಿ ನೆಲದ ಮೇಲೆ ಊರಿರುವ ಹುಸೇನ್ ಬಾಷಾ ಅವರು ಮಂಗಳವಾರ ಒನ್ಇಂಡಿಯಾ ಕಚೇರಿಗೆ ಬಂದು ತಮ್ಮ ಸಂತೋಷವನ್ನು ಹಂಚಿಕೊಂಡರು. ತಾವೊಬ್ಬ ಕೋಟ್ಯಾಧಿಪತಿ ಎಂಬ ಹಮ್ಮಬಿಮ್ಮು ತೋರದೆ ತಮ್ಮ ಮನದಾಳದ ಮಾತುಗಳನ್ನು, ಕನಸುಗಳನ್ನು ಬಿಡಿಸಿಟ್ಟರು. ಸಂದರ್ಶನದ ಆಯ್ದಭಾಗ ಓದಿರಿ.
ಹತ್ತು ಸದಸ್ಯರ ಭರ್ತಿ ರೈತರ ಕುಟುಂಬ
ವೃತ್ತಿಯಿಂದ ರೈತರಾಗಿರುವ ಹುಸೇನ್ ಮನೆ, ಅಜ್ಜ ಅಜ್ಜಿ, ಅಪ್ಪ ಅಮ್ಮ, ನಾಲ್ವರು ಸಹೋದರಿಯರು, ಓರ್ವ ಸಹೋದರನಿಂದ ಕೂಡಿದ ಭರ್ತಿ ಕುಟುಂಬ. ಕಾರಟಗಿಯಲ್ಲಿ ಓದಿದ್ದು ಏಳನೇ ಇಯತ್ತೆವರೆಗೆ, ನಂತರ ಮೂರು ವರ್ಷಗಳ ಹೈಸ್ಕೂಲು ತುಮಕೂರಿನ ಸಿದ್ದಗಂಗಾ ಶಾಲೆಯಲ್ಲಿ. ಹಣಕಾಸಿನ ತೊಂದರೆಯಿಂದ 4 ವರ್ಷಗಳ ಬಿಡುವು. ಕಳೆದೆರಡು ವರ್ಷಗಳಿಂದ ಮತ್ತೆ ಮುಂದುವರಿದ ಓದು. ಸದ್ಯಕ್ಕೆ ಬಿಎ ಓದುತ್ತಿದ್ದಾರೆ ಹುಸೇನ್.
ಜ್ಞಾನಾರ್ಜನೆಗೆ ಸಿದ್ಧಗಂಗಾಶ್ರೀಗಳ ಸ್ಫೂರ್ತಿ
ಓದಿಗೆ ತಾತ್ಕಾಲಿಕ ಬಿಡುವು ನೀಡಿದಾಗ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಟ್ರಕ್ ಓಡಿಸಿ ನಾಲ್ಕು ಕಾಸು ಸಂಪಾದಿಸುತ್ತಿದ್ದರು. ಸದ್ಯಕ್ಕೆ ಬಿಎ ಓದುತ್ತಿರುವ ಅವರು, ಪದವಿ ಪಡೆದ ಮೇಲೆ ಎಲ್ಲ ಕೆಲಸ ಕಾರ್ಯಗಳಿಗೆ ಬ್ರೇಕ್ ಹಾಕಿ, ಐಎಎಸ್ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ. ತಮ್ಮ ಓದಿಗೆ, ಜ್ಞಾನಾರ್ಜನೆಗೆ ಸ್ಫೂರ್ತಿ ಸಿದ್ದಗಂಗಾ ಶ್ರೀಗಳು ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.
ಸನ್ಮಾನ ಸ್ವೀಕರಿಸುವುದು ನಿಜಕ್ಕೂ ಮುಜುಗರ
"ಕೋಟಿ ರು. ಗೆದ್ದಿರುವುದು ಸಂತೋಷವಾದರೂ ಸನ್ಮಾನಗಳನ್ನು ಸ್ವೀಕರಿಸುವುದು, ಸಂದರ್ಶನಗಳನ್ನು ನೀಡುವುದು ನಿಜಕ್ಕೂ ಮುಜುಗರ ತರುವಂಥ ವಿಷಯ. ಯಾಕೆಂದರೆ ಮೊದಲ ಬಾರಿ ಇಂಥದನ್ನು ಎದುರಿಸುತ್ತಿದ್ದೇನೆ. ಆದರೂ, ಜ್ಞಾನವುಳ್ಳ ವ್ಯಕ್ತಿಗಳನ್ನು ಭೇಟಿಯಾಗುತ್ತಿರುವುದು ಸಂತೋಷ ತಂದಿದೆ" ಎಂಬುದು ವಿಪರೀತ ಸಂಕೋಚ ಸ್ವಭಾವದ ಹುಸೇನ್ ಅವರ ಅಭಿಪ್ರಾಯ.
ಕೋಟಿ ಗೆಲ್ಲುವ ಮುನ್ನ ಯಾರನ್ನೂ ನೆನೆಯಲಿಲ್ಲ
"ಪುನೀತ್ ಅವರ ಪ್ರೋತ್ಸಾಹದಿಂದ 50 ಲಕ್ಷ ರು. ಗೆದ್ದ ನಂತರ 1 ಕೋಟಿ ರು. ಪ್ರಶ್ನೆಗೆ ಎರಡು ದಿನಗಳ ಅಂತರವಿತ್ತು. ನನ್ನ ಅದೃಷ್ಟಕ್ಕೆ 1 ಕೋಟಿ ರು. ಪ್ರಶ್ನೆ ನನಗೆ ತಿಳಿದದ್ದೇ ಆಗಿತ್ತು. ಆ ಕ್ಷಣದಲ್ಲಿ ನಾನು ಯಾರನ್ನೂ ನೆನೆಸಲಿಲ್ಲ, ಯಾಕೆಂದರೆ ನನಗೆ ಸರಿಯಾದ ಉತ್ತರ ಕೊಡುತ್ತೇನೆಂಬ ವಿಶ್ವಾಸವಿತ್ತು. ಕೊನೆಗೆ ಸರಿ ಉತ್ತರ ಕೊಟ್ಟಾಗ ನಾನು ಭೂಮಿಯ ಮೇಲೆಯೇ ಇರಲಿಲ್ಲ."
ಒಡಹುಟ್ಟಿದವರಿಗೆ ಉತ್ತಮ ವಿದ್ಯಾಭ್ಯಾಸದ ಕನಸು
"ಸುಮಾರು ನಾಲ್ಕು ಲಕ್ಷ ರು. ಸಾಲ ಮಾಡಿರುವ ನಮಗೆ ಈ ಹಣ ತುಂಬಾ ಉಪಯೋಗವಾಗುತ್ತದೆ. ಎಲ್ಲ ಸಾಲ ತೀರಿಸಿ, ಸಹೋದರ ಸಹೋದರಿಯರಿಗೆ ಉತ್ತಮ ಶಿಕ್ಷಣ ಕೊಡಿಸಬೇಕಾಗಿದೆ. ನಂತರ ಸಹೋದರಿಯರ ಮದುವೆಗೆ ಈ ಹಣವನ್ನು ವಿನಿಯೋಗಿಸುತ್ತೇನೆ. ಚಾರಿಟಿ ಕೆಲಸ ಮಾಡಬೇಕೆಂದು ಇಚ್ಛೆಯಿದೆಯಾದರೂ ಸದ್ಯಕ್ಕೆ ಅದರ ಬಗ್ಗೆ ಹೆಚ್ಚು ಚಿಂತಿಸಿಲ್ಲ."
ಐಎಎಸ್ ಹುಸೇನ್ ಮುಂದಿನ ಗುರಿ
"ಸಿವಿಲ್ ಸರ್ವೀಸಸ್ ಸೇರಬೇಕೆಂಬುದು ನನ್ನ ಬಹುದಿನದ ಕನಸು. ಮೊದಲಾಗಿದ್ದರೆ ಕೆಲಸ ಮಾಡಿ ಐಎಎಸ್ಗೆ ಓದಬೇಕಾಗಿತ್ತು. ಈಗ ಕೆಲಸ ಮಾಡಬೇಕಾದ ಅಗತ್ಯವಿಲ್ಲ. ಏನಾದ್ರೂ ಆಗಲಿ ಐಎಎಸ್ ಪಾಸ್ ಮಾಡಿ ಜನರ ಸೇವೆ ಮಾಡಬೇಕೆಂಬುದು ನನ್ನ ಹಂಬಲ. ಮುಂದೆ ಏನಾಗುತ್ತದೋ ನೋಡೋಣ" ಎಂದಿರುವ ಹುಸೇನ್ ಬಾಷಾ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಕನಸುಗಳೆಲ್ಲವನ್ನು ಅವರು ಗೆದ್ದಿರುವ ಹಣ ಮತ್ತು ಛಲ ನನಸು ಮಾಡಲಿ ಎಂಬುದು ಒನ್ಇಂಡಿಯಾ ಆಶಯ.
ಕೋಟ್ಯಾಧಿಪತಿ ಹಾಟ್ ಸೀಟಲ್ಲಿ ಬಾಷಾ
ಕನ್ನಡದ ಕೋಟ್ಯಾಧಿಪತಿಯ ಹಾಟ್ ಸೀಟಿನಲ್ಲಿ ಏ.23ರಂದು ಹುಸೇನ್ ಕುಳಿತುಕೊಂಡಿದ್ದಾರೆ. 4 ಪ್ರಶ್ನೆಗಳಿಗೆ ಸರಾಗವಾಗಿ ಉತ್ತರ ನೀಡಿದ್ದಾರೆ. ಮುಂದಿನ ಭಾಗ ಏ.27 ಮತ್ತು ಅವರು ಕೋಟಿ ರು. ಗೆದ್ದಿರುವ ಭಾಗ ಏ.29ರಂದು ಸೋಮವಾರ ಪ್ರಕಟವಾಗಲಿದೆ. ನೋಡಿ ಆನಂದಿಸಿ, ನೀವೂ ಜ್ಞಾನಾರ್ಜನೆಯನ್ನು ಮಾಡಿರಿ.