Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಜ್ವಲ್ ದೇವರಾಜ್ ಅಭಿನಯದ 'ಅಂಗಾರಕ'ವಿಮರ್ಶೆ
ಅಂಗಾರಕ ಎಂದರೆ ಮಂಗಳಗ್ರಹ. ಅದನ್ನು ಕುಜಗ್ರಹ ಎಂದೂ ಕರೆಯುತ್ತಾರೆ. ತಮ್ಮ ಜಾತಕದಲ್ಲಿ ಕುಜದೋಷವಿದ್ದರೂ ಎಲ್ಲವೂ ಮಂಗಳಕರವಾಗುತ್ತದೆ ಎಂಬ ಒಳ್ಳೆಯ ಸಂದೇಶ ನೀಡಲು ನಿರ್ದೇಶಕರು ಸಾಕಷ್ಟು ಶ್ರಮಿಸಿದ್ದಾರೆ. ಅದರಲ್ಲಿ ಅವರು ತಕ್ಕಮಟ್ಟಿಗೆ ತಮ್ಮ ಮಹತ್ತರ ಸಂದೇಶವನ್ನು ರವಾನಿಸುವಲ್ಲಿ ಸಫಲರಾಗಿದ್ದಾರೆ.
'ಡೈನಮಿಕ್ ಪ್ರಿನ್ಸ್' ಎಂದು ಕರೆಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಗಲಾಟೆ' ಚಿತ್ರದಷ್ಟೇ ನಿರೀಕ್ಷೆ ಮೂಡಿಸಿದ ಚಿತ್ರ 'ಅಂಗಾರಕ'. ಬಹಳ ಹಿಂದೆಯೇ ಚಿತ್ರ ಸೆಟ್ಟೇರಿದರೂ ಬಿಡುಗಡೆಯಾಗಿದ್ದು ಮಾತ್ರ ತುಂಬಾ ಲೇಟಾಗಿ. ಲೇಟಾದರೂ ಚಿತ್ರ ಲೇಟೆಸ್ಟ್ ಆಗಿರುತ್ತದೆ ಎಂಬ ನಿರೀಕ್ಷೆಗಳನ್ನು ಚಿತ್ರ ಹುಸಿಯಾಗಿಸುತ್ತದೆ. [ಉಳಿದ ಚಿತ್ರವಿಮರ್ಶೆಗಳನ್ನೂ ಓದಿ]
ಈ ಚಿತ್ರದಲ್ಲಿ ಎರಡೂ ಕಣ್ಣುಗಳಿಗೆ ತಂಪೆರೆಯಲು ಇಬ್ಬರು ನಾಯಕಿಯರಿದ್ದಾರೆ. ಅಭಿನಯಕ್ಕಿಂತ ಹೆಚ್ಚಾಗಿ ಅವರು ಬಹುತೇಕ ಗ್ಲಾಮರ್ ಗಷ್ಟೇ ಸೀಮಿತವಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಪಾತ್ರವನ್ನು ವೈಭವೀಕರಿಸದೆ ಸರಳವಾಗಿ ಹೆಣೆದಿರುವುದು ನಿರ್ದೇಶಕ ಶ್ರೀನಿವಾಸ ಕೌಶಿಕ್ ಅವರ ಜಾಣ್ಮೆ.
ಚಿತ್ರ: ಅಂಗಾರಕ
ನಿರ್ಮಾಪಕರು: ಜಯಸುಧಾ ರಾಘವೇಂದ್ರ (ಎಸ್ಎಸ್ಎಸ್ ಸ್ಟುಡಿಯೋಸ್)
ರಚನೆ, ನಿರ್ದೇಶನ: ಶ್ರೀನಿವಾಸ ಕೌಶಿಕ್
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಬಿ.ಎಲ್.ಬಾಬು
ಸಂಕಲನ: ಸಂಜೀವರೆಡ್ಡಿ
ಸಾಹಸ: ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಮಾಸ್ ಮಾದ
ತಾರಾಗಣ: ಪ್ರಜ್ವಲ್ ದೇವರಾಜ್, ಪ್ರಣೀತಾ, ಹಾರ್ದಿಕಾ ಶೆಟ್ಟಿ, ಅವಿನಾಶ್, ಮುನಿ, ಧರ್ಮ, ಜೈಜಗದೀಶ್, ಚಿದಾನಂದ್ (ಪಾಪ ಪಾಂಡು) ಮುಂತಾದವರು.
ಕಥೆಯ ಚೌಕಟ್ಟಿನಲ್ಲಿ ಪ್ರಜ್ವಲ್ ಪಾತ್ರ
ಪ್ರಜ್ವಲ್ ದೇವರಾಜ್ ಅವರನ್ನು ಉದ್ದೇಶವಾಗಿರಿಸಿಕೊಂಡು ಚಿತ್ರದ ಕಥೆಯನ್ನು ಹೆಣೆದಿಲ್ಲ ಎಂಬುದು ಚಿತ್ರ ನೋಡಿದ ಮೇಲೆ ಪ್ರೇಕ್ಷಕರಿಗೆ ಅನ್ನಿಸದೆ ಇರದು. ಕಥೆಯ ಚೌಕಟ್ಟಿನಲ್ಲಿ ಅವರ ಪಾತ್ರವನ್ನು ಕೂರಿಸಲಾಗಿದೆ. ಕಥೆಗೆ ತಕ್ಕಂತೆ ಅವರ ಪಾತ್ರ ಓಡುತ್ತದೆ. ಅಷ್ಟರ ಮಟ್ಟಿಗೆ ಶ್ರೀನಿವಾಸ ಕೌಶಿಕ್ ಅವರು ಗೆದ್ದಿದ್ದಾರೆ. ಚಿತ್ರದಲ್ಲಿ ಎಲ್ಲಾ ಮಸಾಲೆ ಅಂಶಗಳಿದ್ದರೂ ನಿಧಾನಗತಿಯ ಓಟ ಪ್ರೇಕ್ಷಕರನ್ನು ಕಾಡಿಸುತ್ತದೆ.
ಚಿತ್ರದ ನಾಯಕ ನಟ ಕೃಷಿ ಪದವೀಧರ
ಚಿತ್ರದ ಕಥೆಯಲ್ಲಿ ಅಂತಹ ವಿಶೇಷವೇನು ಇಲ್ಲದಿದ್ದರೂ ಅದನ್ನು ನೀಟಾಗಿ ಪ್ರೆಸೆಂಟ್ ಮಾಡುವಲ್ಲಿ ನಿರ್ದೇಶಕರು ಶ್ರಮಿಸಿದ್ದಾರೆ. ಪ್ರೇಮಿಗಳ ಮುಂದೆ ಜಾತಕ, ಜ್ಯೋತಿಷ್ಯ, ಭವಿಷ್ಯ ಎಲ್ಲ ನಡೆಯಲ್ಲ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ. ಇಲ್ಲಿ ಚಿತ್ರದ ನಾಯಕ ನಟ ಎಂ.ಎಸ್ಸಿ ಅಗ್ರಿಕಲ್ಚರಲ್ ಸೈನ್ಸ್ ಪದವೀಧರ. ಹಳ್ಳಿಯಲ್ಲೇ ಇದ್ದು ಸೇವೆ ಸಲ್ಲಿಸಬೇಕು ಎಂಬ ಮನೋಭಾವದವ. ಅಲ್ಲಲ್ಲಿ ಬರುವ ಇಂತಹ ಸನ್ನಿವೇಶಗಳು ಚಿತ್ರಕ್ಕೆ ಒಂದಷ್ಟು ಮೆರುಗು ತರುತ್ತವೆ.
ಗುಟ್ಟಾಗಿ ಮದುವೆ ಮಾಡಿಸುವ ನಾಯಕ ತಂದೆ
ತಮ್ಮ ಮಗನ ಜಾತಕದಲ್ಲಿ ಕುಜ ದೋಷವಿದೆ. ಹಾಗಾಗಿ ಮೊದಲು ಮದುವೆಯಾದ ಹುಡುಗಿ ಮೂರು ತಿಂಗಳಲ್ಲೇ ಸಾವಪ್ಪುತ್ತಾಳೆ ಎಂದು ಜ್ಯೋತಿಷಿ ವಿಜಯ್ (ಪ್ರಜ್ವಲ್ ದೇವರಾಜ್) ತಂದೆಗೆ ಹೇಳುತ್ತಾನೆ. ಸರಿ ಪ್ರೀತಿಸಿದ ಹುಡುಗಿ ಪ್ರಿಯಾ (ಪ್ರಣೀತಾ) ಜೊತೆ ಗುಟ್ಟಾಗಿ ಮದುವೆಯನ್ನೂ ಮಾಡಿಸುತ್ತಾನೆ. ಆದರೆ ಹುಡುಗಿ ಮೂರು ತಿಂಗಳಾದರೂ ಸಾಯಲ್ಲ. ಅದಕ್ಕೆ ಸದಾಶಿವ (ಅವಿನಾಶ್) ಏನು ಪ್ಲಾನ್ ಮಾಡುತ್ತಾರೆ ಎಂಬುದು ಗೊತ್ತಾಗಬೇಕಾದರೆ ಕ್ಲೈಮ್ಯಾಕ್ಸ್ ಹಂತದ ತನಕ ಕಾಯಬೇಕು.
ರಾಜಕೀಯ ಸಂಘರ್ಷದಲ್ಲಿ ಸಾಗುವ ಕಥೆ
ಆರಂಭದಲ್ಲಿ ಕಥೆ ರಾಜಕೀಯ ಸಂಘರ್ಷದ ಹಾದಿಯಲ್ಲಿ ಸಾಗುತ್ತದೆ. ವಿಜಯ್ (ಪ್ರಜ್ವಲ್ ದೇವರಾಜ್) ಎಂಟ್ರಿಕೊಡುತ್ತಿದ್ದಂತೆ ಕಥೆ ಮಗ್ಗುಲು ಬದಲಿಸುತ್ತದೆ. ಲವ್ ದಾರಿಯಲ್ಲಿ ಸಾಗುತ್ತದೆ. ಪ್ರಿಯಾ (ಪ್ರಣೀತಾ) ಹಾಗೂ ವಿಜಿ ನಡುವಿನ ಒಂದಷ್ಟು ಪ್ರೇಮ ಸನ್ನಿವೇಶಗಳಲ್ಲೇ ಕಳೆದುಹೋಗುತ್ತದೆ.
ಕ್ಲೈಮ್ಯಾಕ್ಸ್ ಹಂತದಲ್ಲಿ ಕಥೆ ಯೂ ಟರ್ನ್
ದ್ವಿತೀಯಾರ್ಧದಲ್ಲಿ ಕಾವ್ಯಾ (ಹಾರ್ದಿಕಾ ಶೆಟ್ಟಿ) ಪ್ರವೇಶದ ಮೂಲಕ ಇನ್ನೊಂದು ತಿರುವಿನಲ್ಲಿ ಸಾಗುತ್ತದೆ. ಅಲ್ಲಿಗೆ ಇದೊಂದು ತ್ರಿಕೋನ ಪ್ರೇಮಕಥೆ ಎಂಬುದು ಖಚಿತವಾಗುತ್ತಿದ್ದಂತೆ ಕ್ಲೈಮ್ಯಾಕ್ಸ್ ಹಂತದಲ್ಲಿ ಯೂ ಟರ್ನ್ ತೆಗೆದುಕೊಂಡು ಟ್ರ್ಯಾಕ್ ಗೆ ಮರಳುತ್ತದೆ. ಅಲ್ಲಿಗೆ ಪ್ರೇಕ್ಷಕರೂ ಉಸ್ಸಪ್ಪಾ ಎಂದಿರುತ್ತಾರೆ.
ಪತ್ನಿ ಮಗನ ಮುಂದೆ ಸಣ್ಣವನಾಗುವ ತಂದೆ
ವಿಜಯ್ ತಂದೆಯಾಗಿ ಅವಿನಾಶ್ ಅವರು ಎಂದಿನ ಅಭಿನಯ ನೀಡಿದ್ದಾರೆ. ಎಂಎಲ್ಎ ಆದರೂ ಪ್ರಾಮಾಣಿಕ ರಾಜಕಾರಣಿ ಎನ್ನಿಸಿಕೊಂಡಿರುತ್ತಾರೆ. ಆದರೆ ಕೊನೆ ಕೊನೆಗೆ ಪ್ರಿಯಾಳನ್ನು ಕೊಲೆ ಮಾಡಿಸುವಂತಹ ದುಸ್ಸಾಹಸಕ್ಕೆ ಕೈಹಾಕಿ ಪತ್ನಿ ಮಗನ ಮುಂದೆ ಸಣ್ಣವರಾಗುತ್ತಾರೆ.
ಚಿದಾನಂದ ಹಾಸ್ಯ ಅಯ್ಯೋ ಪಾಪ
ಇನ್ನು ಜೈ ಜಗದೀಶ್ ಅವರು ಅವಿನಾಶ್ ಅವರ ಗೆಳೆಯ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಚಿತ್ರದಲ್ಲಿ ಖಳನಟ ಮುನಿ, ಧರ್ಮ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಹಾಸ್ಯಕ್ಕೆ ಒಂದಷ್ಟು ಜಾಗ ಸಿಕ್ಕಿದೆ. ಚಿದಾನಂದ್ (ಪಾಪ ಪಾಂಡು) ಅವರ ಹಾಸ್ಯ ಸನ್ನಿವೇಶಗಳಿಗೆ ಅಯ್ಯೋ ಪಾಪ ಅನ್ನದೆ ವಿಧಿಯಿಲ್ಲ.
ಅಲ್ಲಲ್ಲಿ ಛಾಯಾಗ್ರಹಣ ಆಹ್ಲಾದಕರ
ಅಲ್ಲಲ್ಲಿ ಇಣುಕುವ ಹಳ್ಳಿಗಾಡಿನ ಸೌಂದರ್ಯದ ದೃಶ್ಯಗಳು ಆಹ್ಲಾದಕರವಾಗಿವೆ (ಬಿ.ಎಲ್.ಬಾಬು ಛಾಯಾಗ್ರಹಣ). ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಮಾಸ್ ಮಾದ ಸಾಹಸ ಸನ್ನಿವೇಶಗಳು ಪ್ರಜ್ವಲ್ ದೇವರಾಜ್ ಅಭಿಮಾನಿಗಳು ನಿರೀಕ್ಷೆಗೆ ತಕ್ಕಂತೆ ಇವೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಹಾಡುಗಳಲ್ಲಿ ಎರಡು ಮನಮುಟ್ಟುವಂತಿವೆ.