Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: ಹಳೆ ಸೂತ್ರ ಹೊಸ ಪಾತ್ರ 'ಜೈ ಲಲಿತ'
ಸಕಲಕಲಾ ವಲ್ಲಭ ಕಮಲ್ ಹಾಸನ್ ಅವರು 'ಚಾಚಿ 420' ಚಿತ್ರದಲ್ಲಿ ಹೆಣ್ಣಿನ ಪಾತ್ರವನ್ನು ಪೋಷಿಸಿ ಅಭಿಮಾನಿಗಳು ನಾಚುವಂತೆ ಮಾಡಿದ್ದರು. ಕಮಲ್ ಅವರು ಸ್ವಲ್ಪ ವಯಸ್ಸಾದ ಹೆಣ್ಣಿನ ಪಾತ್ರ ಪೋಷಿಸಿದ್ದರೆ, ಇಲ್ಲಿ ಶರಣ್ ನಿಂಬೆಹಣ್ಣಿನಂತ ಹುಡುಗಿ ಗೆಟಪ್ ನಲ್ಲಿ ರಂಜಿಸಿದ್ದಾರೆ.
ಈ ರೀತಿಯ ಹೆಣ್ಣಿನ ಗೆಟಪನ್ನು ಬಹುತೇಕ ಎಲ್ಲಾ ಹೀರೋಗಳು ಪೋಷಿಸಿದ್ದಾರೆ. ತಮ್ಮ ವೃತ್ತಿಬದುಕಿನಲ್ಲಿ ಒಮ್ಮೆಯಾದರೂ ಈ ರೀತಿಯ ಪಾತ್ರ ಪೋಷಿಸಬೇಕು ಎಂಬ ತುಡಿತ ಪ್ರತಿಯೊಬ್ಬ ಕಲಾವಿದರಿಗೂ ಇರುತ್ತದೆ. 'ಜೈ ಲಲಿತ' ಚಿತ್ರದ ಮೂಲಕ ಶರಣ್ ಆ ರೀತಿಯ ಒಂದು ಬಯಕೆ ಈಡೇರಿದಂತಾಗಿದೆ. [ಕನ್ನಡ ಚಿತ್ರ ವಿಮರ್ಶೆಗಳು]
ಇಲ್ಲಿ ಅವರು ಸ್ಕರ್ಟ್ ತೊಟ್ಟು ಷಟ್ಲ್ ಆಡುತ್ತಾರೆ, ಸೀರೆಯಲ್ಲಿ ಸೊಂಟ ಬಳುಕಿಸುತ್ತಾರೆ, ಚೂಡಿಧಾರ್ ನಲ್ಲಿ ಕುಂಟಾಬಿಲ್ಲೆ ಆಡುತ್ತಾರೆ. ಅವರ ಹೆಣ್ಣಿನ ಗೆಟಪ್ ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗುತ್ತಾರೆ. ಆದರೆ ಕಥೆ ಸರಿದಂತೆ ಕೇವಲ ಅವರ ಸ್ತ್ರೀಪಾತ್ರವಷ್ಟೇ ಆಕರ್ಷಣೆಯಾಗಿ ಉಳಿಯುತ್ತದೆ.
ಸಡಿಲವಾದ ನಿರೂಪಣೆ
ಚಿತ್ರದಲ್ಲಿ ಶರಣ್ ಅವರು ತಮ್ಮ ಸ್ತ್ರೀ ಪಾತ್ರಕ್ಕಾಗಿ ಸಾಕಷ್ಟು ಶ್ರಮಿಸಿರುವುದನ್ನು ಕಾಣಬಹುದು. ಹೆಣ್ಣಿನ ಧ್ವನಿ ಸರ ಅವರದೇ ಎಂಬುದು ವಿಶೇಷ. ಆದರೆ ಅವರ ಶ್ರಮವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಸಡಿಲವಾದ ನಿರೂಪಣೆಯೇ ಇದಕ್ಕೆ ಕಾರಣ ಎನ್ನದೆ ವಿಧಿಯಿಲ್ಲ. ಕಥೆ ಕೊನೆಯತನಕ ಕುತೂಹಲ ಉಳಿಸಿಕೊಂಡು ಹೋಗುವಲ್ಲಿ ಸೋಲುತ್ತದೆ.
ಪ್ರೇಕ್ಷಕರ ಸಹನೆ ಪರೀಕ್ಷಿಸುತ್ತದೆ
ಸುಮಾರು 149 ನಿಮಿಷಗಳ ಸುದೀರ್ಘ ಕಾಲದ ಚಿತ್ರ ಕೊನೆಕೊನೆಗೆ ಪ್ರೇಕ್ಷಕರ ಸಹನೆಯನ್ನು ಪರೀಕ್ಷಿಸುತ್ತದೆ. ಸ್ತ್ರೀಪಾತ್ರದ ಸಸ್ಪೆನ್ಸ್ ಮೊದಲರ್ಧದಲ್ಲೇ ಗೊತ್ತಾಗುವುದರಿಂದ ಪ್ರೇಕ್ಷಕರಿಗೆ ಆ ಪಾತ್ರದ ಬಗೆಗಿನ ಕುತೂಹಲ ಹೊರಟು ಹೋಗುತ್ತದೆ.
ಮೂಲ ಕಥೆಗೆ ಹೊಸ ಸ್ಪರ್ಶ
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಮಲಯಾಳಂ ಮೂಲದ 'ಮಾಯಾಮೋಹಿನಿ' ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತರದೆ ಕಥೆಯಲ್ಲಿ ಬದಲಾವಣೆಗಳನ್ನೂ ಮಾಡಿಕೊಳ್ಳಲಾಗಿದೆ. ನಿರ್ದೇಶಕ ಪಿ.ಕುಮಾರ್ ಅವರು ಮೂಲ ಕಥೆಗೆ ತಮ್ಮದೇ ಆದಂತಹ ಸ್ಪರ್ಶವನ್ನು ಕೊಟ್ಟಿದ್ದಾರೆ.
ಜಯರಾಜ್ 'ಜೈ ಲಲಿತಾ' ಆಗುತ್ತಾನೆ
ಅಪಹರಣಕ್ಕೊಳಗಾದ ತಮ್ಮ ತಂದೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಜಯರಾಜ್ 'ಜೈ ಲಲಿತ' ಆಗಿ ಬದಲಾಗುತ್ತಾನೆ. ಇದಕ್ಕೆಲ್ಲಾ ಏನೆಲ್ಲಾ ಸಾಹಸ ಮಾಡುತ್ತಾರೆ, ತಮ್ಮ ತಂದೆಯನ್ನು ಬಿಡಿಸಿಕೊಂಡು ಬರುತ್ತಾರಾ ಇಲ್ಲವೇ ಎಂಬುದೇ ಕಥೆ.
ತಂದೆಯ ಪಾತ್ರದಲ್ಲಿ ನಾಗಾಭರಣ
ನಾಟಕ ಕಂಪನಿಯೊಂದನ್ನು ನಡೆಸುವ ತಂದೆಯ ಪಾತ್ರದಲ್ಲಿ ಟಿ.ಎಸ್.ನಾಗಾಭರಣ ಅವರು ಜೀವತುಂಬಿದ್ದಾರೆ. ತಲೆತಲಾಂತರದಿಂದ ಬಂದ ನಾಟಕ ಕಲೆಯನ್ನು ತನ್ನ ಮಗನೂ ಮುಂದೆ ನಡೆಸಬೇಕು ಎಂದು ತಂದೆ ಬಯಸುತ್ತಾನೆ. ಆದರೆ ಮಗನಿಗೆ ಬಣ್ಣದ ಹುಚ್ಚು ಇರಲ್ಲ. ತಂದೆಯನ್ನು ಉಳಿಸಿಕೊಳ್ಳಲು ಸ್ತ್ರೀ ಪಾತ್ರ ಹಾಕಿ ಮನಸ್ಸನ್ನು ಗೆಲ್ಲುತ್ತಾನೆ.
ಎಲ್ಲರ ಕಣ್ಣು ಮೂರನೇ ನಾಯಕಿ ಮೇಲೆ
ಚಿತ್ರದಲ್ಲಿ ದಿಶಾ ಪಾಂಡೆ, ಐಶ್ವರ್ಯಾ ದೇವನ್ ಇಬ್ಬರು ನಾಯಕಿಯರಿದ್ದರೂ ಎಲ್ಲರ ಕಣ್ಣು ಮೂರನೇ ನಾಯಕಿ ಶರಣ್ ಮೇಲೆಯೇ ಇರುತ್ತದೆ. ಮೊದಲೇ ಹಾಸ್ಯ ಪ್ರಧಾನ ಚಿತ್ರ, ಅದರಲ್ಲಿ ಸಾಧು ಕೋಕಿಲ, ಕುರಿ ಪ್ರತಾಪ್, ರವಿಶಂಕರ್, ಹರೀಶ್ ರಾಜ್ ಅವರು ಇನ್ನಷ್ಟು ನಗಿಸಲು ಪ್ರಯತ್ನಿಸಿದ್ದಾರೆ.
ಶ್ರೀಧರ್ ಸಂಭ್ರಮ್ ಸಂಗೀತ ಇಂಪು
ಇನ್ನು ಶ್ರೀಧರ್ ಸಂಭ್ರಮ್ ಅವರ ಸಂಗೀತದ ಆರು ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ದಿಲ್ಗೆ ದಿಲ್ಗೆ, ಸದಾರಮೆ, ಕನ್ನಡ ಸವಿ ಕನ್ನಡ ಹಾಡುಗಳು ಕಿವಿಗೆ ಇಂಪು ಕಣ್ಣಿಗೆ ತಂಪು. ಕರುಣಾಕರ್ ಅವರ ಛಾಯಾಗ್ರಹಣ ಕೂಲ್ ಆಗಿದೆ.
ಇನ್ನೂ ಏನೋ ಇರಬೇಕಾಗಿತ್ತು ಎಂಬ ಭಾವ
ಚಿತ್ರದ ಪೋಸ್ಟರ್ ಗಳನ್ನು ನೋಡಿ ಪ್ರೇಕ್ಷಕ ಭರ್ಜರಿ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗುತ್ತಾನೆ. ಆದರೆ ಚಿತ್ರದಲ್ಲಿ ಇನ್ನೂ ಏನೋ ಇರಬೇಕಾಗಿತ್ತು ಎಂಬ ಅತೃಪ್ತಿ ಕಾಡುತ್ತದೆ. ಶರಣ್ ಅವರ 'ಜೈ ಲಲಿತ' ಪಾತ್ರ ಮಾತ್ರ ಅಚ್ಚಳಿಯದೆ ಉಳಿಯುವಂತಿದೆ.