Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪರಮಾತ್ಮ ಇಡೀ ಚಿತ್ರವೇ ಒಂದು ಫ್ಲಾಷ್ ಬ್ಯಾಕ್!
ಇಲ್ಲೊಂದು ವಿಸ್ಮಯವೂ ಇದೆ. ಅವನು ಹೇಳುವ ಕತೆಯೆಲ್ಲವೂ ಅವಳಿಗೂ ಗೊತ್ತು. ಗೊತ್ತಿದ್ದ ಕತೆಯನ್ನೇ ಅವನು ಹೇಳುತ್ತಾನೆ, ಅವಳು ಕೇಳುತ್ತಾಳೆ. ಆ ಎರಡು ವರ್ಷದಲ್ಲಿ ಅವರಿಬ್ಬರೂ ಸುಖವಾಗಿದ್ದರು ಅನ್ನುವುದಷ್ಟೇ ಅವಳಿಗೆ ಗೊತ್ತಿಲ್ಲ. ಆ ಕತೆ ತೆರೆದುಕೊಳ್ಳುವುದು ಕೊನೆಕೊನೆಗೆ. ಆರಂಭದಲ್ಲಿ ಹೇಳುವ ಹಿಮಾಲಯನ್ ಬ್ಲಂಡರ್,ಗಾಳಿಯಂತ್ರದ ಸಾಹಸ, ಬಡಗಿಯಾಗುವ ಹುಚ್ಚು, ಕುಂಗ್ಫೂ ಸಂಗತಿಗಳೆಲ್ಲ ಅವಳಿಗೂ ಗೊತ್ತಿದ್ದವೇ. ಯಾಕೆಂದರೆ ಅವಳು ಅವನನ್ನು ಬಿಟ್ಟು ಹೋಗುವ ಹೊತ್ತಿಗಾಗಲೇ ಅವನಿಗೆ ಮದುವೆ ಆಗಿರುತ್ತದೆ ಎಂದು ನಾವು ಊಹಿಸಬೇಕು.ಅವಳೂ ಊಹಿಸಬೇಕು. ಅವನು ಮನೆಬಿಟ್ಟು ಹೋಗಿ ಏಕಾಗಿಯಾಗಿ ಬಾಳಲು ನಿರ್ಧಾರ ಮಾಡಿ ಕಂಬದ ಮನೆ ಕಟ್ಟುವುದೆಲ್ಲ ಆನಂತರದ ಕತೆ. ಹಾಗಿದ್ದರೆ ಅವಳಿಗೂ ಗೊತ್ತಿರೋ ಕತೆಯನ್ನು ಅವನು ಹೇಳುವುದು ನಮಗೋಸ್ಕರ ಎಂದು ಭಾವಿಸಿಕೊಂಡೇ ನಾವು ಮುಂದುವರಿಯಬೇಕು.
ಭಟ್ಟರ ಮಾತಲ್ಲಿ ತಮಾಷೆಗೆ ಕೊರತೆಯಿಲ್ಲ. ವಿಷಾದಕ್ಕೂ. ಆದರೆ ವಿಷಾದವನ್ನು ನೀವು ಅನುಭವಿಸಬೇಕಾದರೆ ತನ್ಮಯರಾಗಬೇಕು. ಮೇಲುಸ್ತರದಲ್ಲಿರುವ ಕತೆಯನ್ನು ಕೇಳುತ್ತಲೇ ಅದರ ಆಳಕ್ಕೆ ಇಳಿಯುವುದನ್ನು ಚಿತ್ರ ಬೇಡುತ್ತದೆ. ಹಾಗೆ ಒಳಗೊಳ್ಳದೇ ಹೋದರೆ ನಿಮಗೆ ಚಿತ್ರದ ಆತ್ಮ ದಕ್ಕಲಾರದು. ಇಲ್ಲಿರುವ ದ್ವಂದ್ವವೆಂದರೆ ತಮಾಷೆಯಲ್ಲಿ ಚಿತ್ರ ಏನನ್ನೂ ಸಾಧಿಸುವುದಿಲ್ಲ. ವಿಷಾದದ ಕ್ಷಣವೂ ನಿಮಗೆ ಪೂರ್ತಿಯಾಗಿ ದಕ್ಕುವುದಿಲ್ಲ. ಅದಕ್ಕೆ ಮುಖ್ಯ ಕಾರಣ ನಮ್ಮ ಮೂಡನ್ನು ಸಿನಿಮಾ ಪದೇ ಪದೇ ಬದಲಾಯಿಸುತ್ತಾ ಹೋಗುವುದು. ತಾನು ತೀರ ಗಂಭೀರವಾದೆ ಅಂತ ಅನ್ನಿಸುವ ಹೊತ್ತಿಗೆ ಜೋಡಿ ಬೆನ್ನುಕಂಬಳ, ತಮಾಷೆ ಇವೆಲ್ಲ ಥಟ್ಟನೆ ಪ್ರತ್ಯಕ್ಷವಾಗುತ್ತದೆ.
ಇಡೀ ಚಿತ್ರ ಮಧುರ ಅನುಭವ ಅನ್ನಿಸುವುದಕ್ಕೆ ಸಕಾರಣಗಳಿವೆ. ದಾಂಪತ್ಯದ ಮಧುರಾನುಭವ, ತಾರುಣ್ಯರ ಜಿಗುಟು ಪ್ರೀತಿ, ತಾಯಿಯಿಲ್ಲದ ಹುಡುಗಿಯ ಸಿಟ್ಟು ಸೆಡವು, ಉತ್ಕಟತೆಗಳೆಲ್ಲ ನೆನಪಿನ ಓಣಿಯನ್ನು ನಮ್ಮನ್ನು ಹಿಂದಕ್ಕೂ ಮುಂದಕ್ಕೂ ಒಯ್ಯುತ್ತವೆ. ಅವನ ಪಾಲಿಗೆ ಅವಳು ತಿಥಿ ವಡೆ, ಅವಳ ಪಾಲಿಗೆ ಅವನು ನುಸಿಪೀಡೆ. ಅರಿಯುವ ಮುನ್ನವೇ ಪರವಶವಾದವನು, ತಿಳಿಯುವ ಮುನ್ನವೇ ತನ್ಮಯಳಾದಳ ಜೊತೆಗೆ ಹೆಜ್ಜೆ ಹಾಕಿದಂತೆ ನಮಗೆ ಭಾಸವಾಗುತ್ತದೆ.