ಹಿರಿಯ ಸಿನಿ ಪತ್ರಕರ್ತ, ನಟ ಆರ್ ಜಿವಿ ಎಂದೇ ಹೆಸರುವಾಸಿಯಾಗಿದ್ದ ರಾಜಪುರ ಗೋಪಾಲರಾವ್ ವಿಜಯಸಾರಥಿ ಅವರು ಭಾನುವಾರ ಬೆಳಗ್ಗೆ ಸುಮಾರು 10.40ಕ್ಕೆ ಕೊನೆಯುಸಿರೆಳೆದಿದ್ದಾರೆ. ಹಲವು ತಿಂಗಳುಗಳಿಂದ ಬಳಲುತ್ತಿದ್ದ ವಿಜಯಸಾರಥಿ ಅವರನ್ನು ಶನಿವಾರ ಎಂಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ವಿಜಯಸಾರಥಿ ಅವರಿಗೆ 62 ವರ್ಷ ವಯಸ್ಸಾಗಿತ್ತು.
ಸುಮಾರು 10 ವರ್ಷಕ್ಕೂ ಅಧಿಕ ಕಾಲ ಚಲನಚಿತ್ರ ಕ್ಷೇತ್ರದ ಚಟುವಟಿಕೆಗಳು, ಚಿತ್ರವಿಮರ್ಶೆಗಳನ್ನು ಬರೆದ ಅನುಭವವಿದ್ದ ವಿಜಯಸಾರಥಿ ಅವರು ಎಲ್ಲರ ಅಚ್ಚುಮೆಚ್ಚಿನ ಪತ್ರಕರ್ತ ಎನಿಸಿದ್ದರು. ಮೃತರ ಅಂತ್ಯಕ್ರಿಯೆಯನ್ನು ಸುಮನಹಳ್ಳಿ ಚಿತಾಗಾರದಲ್ಲಿ ನೆರವೇರಿಸಲಾಯಿತು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ವಿಜಯಸಾರಥಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಉಪೇಂದ್ರ, ಶಿವರಾಜ್ ಕುಮಾರ್, ದ್ವಾರಕೀಶ್, ಭಾವನಾ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಸುಮಾರು 100ಕ್ಕೂ ಅಧಿಕ ಚಿತ್ರಗಳೂ, ಅನೇಕ ಸಿರೀಯಲ್ ಗಳಲ್ಲೂ ನಟಿಸಿದ್ದರು. ಶುಕ್ರವಾರ ಬಿಡುಗಡೆಯಾದ ನಾಗಶೇಖರ್ ನಿರ್ದೇಶನದ 'ಮೈನಾ' ಚಿತ್ರದಲ್ಲಿ ನಟಿಸಿದ್ದ ಆರ್ ಜಿವಿ ಅವರು ಚಿತ್ರವನ್ನು ವೀಕ್ಷಿಸಿ ವಿಮರ್ಶೆ ಬರೆದು ನಂತರ ನರ್ಸಿಂಗ್ ಹೋಂ ಗೆ ಡಯಾಬಿಟಿಸ್ ಚೆಕ್ ಅಪ್ ಗೆ ಎಂದು ಹೋಗಿದ್ದಾರೆ. ಆಮೇಲೆ ಮರುದಿನ ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಕನ್ನಡ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದ ವಿಜಯಸಾರಥಿ ಅವರು ಇಂಗ್ಲೀಷ್ ಪತ್ರಿಕೆಗಳು ವೆಬ್ ಸೈಟ್ ಗಳಲ್ಲಿ ನಿರಂತರವಾಗಿ ಚಿತ್ರ ವಿಮರ್ಶೆ ಬರೆದಿದ್ದಾರೆ. ರೀಡಿಫ್.ಕಾಂ, ಏಷ್ಯನ್ ಏಜ್, ಚಿತ್ರಲೋಕ.ಕಾಂ ಮುಂತಾದ ವೆಬ್ ಪತ್ರಿಕೆಗಳಲ್ಲಿ ಇವರ ಲೇಖನಗಳನ್ನು ಕಾಣಬಹುದು.
ಉಪೇಂದ್ರ ಅವರು ತಮ್ಮ ಆಪರೇಷನ್ ಅಂತ ಚಿತ್ರದಲ್ಲಿ ವಿಜಯಸಾರಥಿ ಅವರಿಗೆ ಒಂದು ಸಣ್ಣ ರೋಲ್ ನೀಡಿದ್ದರು. ಮುಂದೆ ಹಲವು ರಾಜಕಾರಣಿಯ ಪಾತ್ರಧಾರಿಯಾದರು. ಶಿವಮಣಿ ನಿರ್ದೇಶನದ ಶಿವ ಸೈನ್ಯ ಚಿತ್ರದಲ್ಲಿ ಚುನವಣಾಧಿಕಾರಿ ಟಿ.ಎನ್ ಶೇಷನ್ ಪಾತ್ರ ಮಾಡಿ ಮಿಂಚಿದ್ದರು. ಕಿರುತೆರೆಯಲ್ಲಿ ಟಿ.ಎನ್ ಸೀತಾರಾಮ್, ಎಸ್ ನಾರಾಯನ್, ನಾಗತಿಹಳ್ಳಿ ಚಂದ್ರಶೇಖರ್, ಫಣಿ ರಾಮಚಂದ್ರ, ಪಿ ಶೇಷಾದ್ರಿ, ನಾಗೇಂದ್ರ ಶಾ ನಿರ್ದೇಶನದಲ್ಲಿ ನಟಿಸಿದ್ದರು.
ಚಲನಚಿತ್ರಗಳ ಪೈಕಿ ಸೈಕೋ, ಸೂರ್ಯವಂಶ, ಕುಟುಂಬ, ಗೌರಮ್ಮ, ವೀರಪರಂಪರೆ, ಪಂಚರಂಗಿ ಮುಂತಾದ ಚಿತ್ರಗಳಲ್ಲಿ ಇವರ ನಟನೆ ಜನಮೆಚ್ಚುಗೆ ಗಳಿಸಿತ್ತು.




















