
'ಕರಿ ಚಿರತೆ' ಎಂದೇ ಖ್ಯಾತರಾಗಿರುವ ಕನ್ನಡ ಚಿತ್ರಗಳ ಮಾಸ್ ನಟ ದುನಿಯಾ ವಿಜಯ್ ದಾಂಪತ್ಯ ಜೀವನದಲ್ಲಿ ಭಾರಿ ಬಿರುಕು ಮೂಡಿದ್ದು ಅವರು ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಕ್ಕೆ ಗುರುವಾರ (ಜ.17) ಅವರು ಹಾಜರಾಗುವ ಮೂಲಕ ಈ ಸುದ್ದಿಗೆ ರೆಕ್ಕೆ ಪುಕ್ಕ ಮೂಡಿಬಂದಿದೆ.
ಬಹಳಷ್ಟು ದಿನಗಳಿಂದಲೂ ದುನಿಯಾ ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಇಂದು ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗುವ ಮೂಲಕ ಈ ಸುದ್ದಿಗೆ ಮತ್ತೆ ಜೀವ ಬಂದಿದೆ. ಆದರೆ ಸತ್ಯಾಸತ್ಯತೆಗಳು ಇನ್ನಷ್ಟೇ ಗೊತ್ತಾಗಬೇಕು.
ನಟ ದುನಿಯಾ ವಿಜಯ್ ಅವರಿಗೆ ಇಬ್ಬರು ಪತ್ನಿಯರು ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ಅವರು ವಿಚ್ಛೇದನ ನೀಡುತ್ತಿರುವುದು ಮೊದಲ ಪತ್ನಿ ನಾಗರತ್ನ ಅವರಿಗೆ ಎನ್ನುತ್ತವೆ ಮೂಲಗಳು. ಸುಮಾರು ಹದಿನಾಲ್ಕು ವರ್ಷಗಳ ದಾಂಪ್ಯದ ಫಲವಾಗಿ ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.
"ತಮ್ಮ ಪತ್ನಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪಗಳನ್ನು ನಾಗರತ್ನ ಅವರ ವಿರುದ್ಧ ದುನಿಯಾ ವಿಜಯ್ ಮಾಡಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಸ್ವಲ್ಪ ಸಮಯದ ಬಳಿಕ ಸಂಪೂರ್ಣ ವಿವರಗಳು ಲಭ್ಯವಾಗಬಹುದು.
ಈ ಸುದ್ದಿ ನಿಜವೇ ಎಂದು ದುನಿಯಾ ವಿಜಯ್ ಅವರನ್ನು ಮಾಧ್ಯಮಗಳು ಸಂಪರ್ಕಿಸಲಾಗಿ, ಅವರು ಉತ್ತರಿಸಲು ನಿರಾಕರಿಸಿದ್ದು, ಸ್ವಲ್ಪ ಕಾಲಾವಕಾಶ ಕೊಡಿ ಬಳಿಕ ಎಲ್ಲವನ್ನೂ ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ. ವಿವರಗಳಿಗೆ ನಿರೀಕ್ಷಿಸಲಾಗಿದೆ. [ಶುಭಾ ಪೂಂಜಾ ಪ್ರತಿಕ್ರಿಯೆ] (ಒನ್ಇಂಡಿಯಾ ಕನ್ನಡ)




















