ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲ. ನಮ್ಮವು ಸಣ್ಣ ಬಜೆಟ್ ಚಿತ್ರಗಳು. ಪರಭಾಷಾ ಚಿತ್ರಗಳ ನಡುವೆ ಪೈಪೋಟಿ ಮಾಡುವುದು ಕಷ್ಟ. ಹಾಗೆ ಹೀಗೆ ಎಂದು ಬಂಡಲ್ ಬಿಡುತ್ತಿದ್ದವರಿಗೆ ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರ ಹೊಸ ದಾರಿ ತೋರಿಸಿದೆ.
ಒಳ್ಳೆಯ ಕಥೆ, ಉತ್ತಮ ನಿರೂಪಣೆ, ಮನರಂಜನಾತ್ಮಕ ಅಂಶಗಳಿಂದ ಕೂಡಿದ ಸ್ವಮೇಕ್ ಚಿತ್ರಗಳನ್ನು ಪ್ರೇಕ್ಷಕರು ಕೈಬಿಡಲ್ಲ ಎಂಬುದು ಈಗಾಗಲೆ ಸಾಬೀತಾಗಿದೆ. ಇದೇ ಅಂಶಗಳೊಂದಿಗೆ ಬಂದ 'ಡ್ರಾಮಾ' ಚಿತ್ರವೂ ಈ ಮಾತಿಗೆ ಹೊರತಲ್ಲ. ಬಾಕ್ಸ್ ಆಫೀಸಲ್ಲೂ ಗೆದ್ದಿದೆ.
ಈಗ ಈ ಚಿತ್ರ ಚೆನ್ನೈನಲ್ಲೂ ಬಿಡುಗಡೆಯಾಗಿದೆ. ಇತ್ತ ಕಾವೇರಿ ಜಲ ವಿವಾದ ಭುಗಿಲೆದ್ದಿದ್ದು ಬೆಂಗಳೂರಿನಲ್ಲಿ ತಮಿಳು ಚಿತ್ರಗಳು ಎತ್ತಂಗಡಿಯಾಗುತ್ತಿವೆ. ಇದೇ ಸಂದರ್ಭದಲ್ಲಿ 'ಡ್ರಾಮಾ' ಚಿತ್ರ ಚೆನ್ನೈ ಕನ್ನಡಿಗರ ಮುಂದೆ ಬಂದಿರುವುದು ವಿಶೇಷ.
ಚೆನ್ನೈನ ವಿರುಗಂಬಾಕಂನ ಆರ್ಕಾಟ್ ರಸ್ತೆಯಲ್ಲಿರುವ ಫೇಮ್ ನ್ಯಾಶನಲ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ 'ಡ್ರಾಮಾ' ಬಿಡುಗಡೆಯಾಗಿದೆ. ಡಿಸೆಂಬರ್ 7ರಂದು ಬಿಡುಗಡೆಯಾಗಿರುವ ಈ ಚಿತ್ರ ಪ್ರತಿದಿನ 12 ಗಂಟೆಗೆ ಒಂದು ಶೋ ಪ್ರದರ್ಶನಗೊಳ್ಳುತ್ತಿದೆ. ಇದೇ ಡಿಸೆಂಬರ್ 13ರವರೆಗೂ ಚಿತ್ರವನ್ನು ನೋಡಬಹುದು.
ಈ ಹಿಂದೆಯೂ ಹಲವಾರು ಕನ್ನಡ ಚಿತ್ರಗಳು ರಾಜ್ಯದ ಗಡಿದಾಟಿವೆ. ಅವುಗಳಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಅಣ್ಣಾಬಾಂಡ್ ಹಾಗೂ ದಿ ರಾಜ್ ಶೋ ಮ್ಯಾನ್ ಚಿತ್ರಗಳು ಮುಖ್ಯವದವು. ಈಗ ಡ್ರಾಮಾ ಕೂಡ ಅದೇ ರೀತಿಯ ಅಲೆ ಎಬ್ಬಿಸಿದೆ. (ಏಜೆನ್ಸೀಸ್)





























