
ನೀವು ಪ್ರತಿಭಾನ್ವಿತರು, ಸಿನಿಮಾ ರಂಗದಲ್ಲಿ ಬಹಳಷ್ಟು ಸಾಧನೆ ಮಾಡಿದ್ದೀರಾ, ಸಿನಿಮಾ ರಂಗದ ಜೊತೆಗೆ ರಾಜಕೀಯಕ್ಕೆ ಕೂಡಾ ನೀವು ಪ್ರವೇಶ ಮಾಡಬೇಕೆನ್ನುವುದು ನನ್ನ ಅಭಿಲಾಷೆ ಎಂದು ಡಿಸಿಎಂ ಕಮ್ ಸಾರಿಗೆ ಸಚಿವ ಆರ್ ಅಶೋಕ್ ಕಿಚ್ಚ ಸುದೀಪ್ ಅವರಿಗೆ ರಾಜಕೀಯಕ್ಕೆ ಪ್ರವೇಶಿಸುವಂತೆ ಆಹ್ವಾನ ನೀಡಿದ್ದಾರೆ.
ವರದನಾಯಕ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅಶೋಕ್, ನಾನು ಕಂಡ ಉತ್ತಮ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಅವರು ರಾಜಕೀಯ ಪ್ರವೇಶ ಮಾಡಬೇಕೆಂದು ಬಯಸುತ್ತೇನೆ. ನಾನು ಬಿಜೆಪಿಯವನಾಗಿದ್ದರೂ ಅವರು ಇದೇ ಪಕ್ಷ ಸೇರಬೇಕೆಂದು ನಾನು ಅವರನ್ನು ಒತ್ತಾಯಿಸುವುದಿಲ್ಲ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್, ಅಶೋಕ್ ಅವರ ಆಹ್ವಾನಕ್ಕೆ ನಾನು ಥ್ಯಾಂಕ್ಸ್ ಹೇಳಲು ಇಷ್ಟ ಪಡುತ್ತೇನೆ. ಈ ಹಿಂದೆ ಕೂಡಾ ನಾನು ರಾಜಕೀಯ ಪ್ರವೇಶಿಸುತ್ತೇನೆ ಎನ್ನುವ ಸುದ್ದಿ ಹಬ್ಬಿತ್ತು. ಅದೆಲ್ಲಾ ಗಾಳಿ ಸುದ್ದಿ.
ಸದ್ಯ ರಾಜಕೀಯ ಪ್ರವೇಶ ಮಾಡುವ ಯಾವುದೇ ಉದ್ದೇಶ ನಾನು ಹೊಂದಿಲ್ಲ. ಚಿತ್ರರಂಗದಲ್ಲಿ ಇನ್ನೂ ಸಾಧನೆ ಮಾಡಬೇಕಿದೆ. ಈ ಚಿತ್ರರಂಗ ನನಗೆ ಬಹಳಷ್ಟು ಕೊಟ್ಟಿದೆ. ಹಾಗಾಗಿ ಸದ್ಯ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಅಶೋಕ್ ಆಹ್ವಾನವನ್ನು ಸುದೀಪ್ ನಯವಾಗಿ ತಿರಸ್ಕರಿಸಿದ್ದಾರೆ.
ಕನ್ನಡ ಚಿತ್ರೋದ್ಯಮದ ಅಭಿವೃದ್ದಿಗೆ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ಸಾಧನೆಗೆ ಇತಿಮಿತಿ ಇಲ್ಲ, ಕಲಾವಿದನಾಗಿ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಬೇಕೆಂದಿದೆ. ಚಿತ್ರ ತಂಡದ ಮನವಿಗೆ ಓಗೊಟ್ಟು ವರದನಾಯಕ ಆಡಿಯೋ ಬಿಡುಗಡೆ ಸಮಾರಭಕ್ಕೆ ಬಂದ ಅಶೋಕ್ ಅವರಿಗೆ ನನ್ನ ನಮಸ್ಕಾರಗಳು ಎಂದು ಹೇಳಿ ಸುದೀಪ್ ಮಾತು ಮುಗಿಸಿದರು.
ವರದನಾಯಕ ಚಿತ್ರದ ಫೋಟೋ ಗ್ಯಾಲರಿ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ




























