
ಯೋಗರಾಜ್ ಭಟ್ ಅವರ ಡ್ರಾಮಾ ಚಿತ್ರ ನಾಳೆ (ನ 22) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಭಟ್ರ ನಿರ್ದೇಶನದ ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದ ಬಹು ನಿರೀಕ್ಷಿತ ಪರಮಾತ್ಮ ಚಿತ್ರ 'ನಿರೀಕ್ಷಿತ' ಮಟ್ಟದಲ್ಲಿ ಯಶಸ್ಸು ಪಡೆಯದ ನಂತರ ಭಟ್ರ ಬತ್ತಳಿಕೆಯಿಂದ ಮೂಡಿ ಬರುತ್ತಿರುವ ಮತ್ತೊಂದು ಚಿತ್ರವೇ ಡ್ರಾಮಾ.
ಯೋಗರಾಜ್ ಭಟ್ ಅವರಿಗೆ ಅವರದೇ ಆದ ಫ್ಯಾನ್ಸ್ ಬಳಗವಿದೆ. ಯುವ ಸಮೂಹದ ಮೇಲೆ ಕಣ್ಣಿಟ್ಟು ಕಥೆ, ಚಿತ್ರಕಥೆ ಹಣೆಯುವ ಯೋಗರಾಜ್ ಭಟ್ಟರಿಗೆ ಯುವ ಸಮುದಾಯನವೇ ಮುಖ್ಯವಾದ ಅಭಿಮಾನಿ ಬಳಗ.
ಭಟ್ರ ಚಿತ್ರದಲ್ಲಿ ಹೆಚ್ಚಾಗಿ ಕಥೆಗಳೇ ಇರುವುದಿಲ್ಲ ಎನ್ನುವು ಕೂಗಿಗೆ ಅವರ ಉತ್ತರವೇನು? ನಮ್ಮ ಸಂಸ್ಥೆಯ ಉಪ ಸಂಪಾದಕ ಪ್ರಕಾಶ್ ಉಪಾಧ್ಯಾಯ ಅವರಿಗೆ ಯೋಗರಾಜ್ ಭಟ್ ನೀಡಿದ ಸಂದರ್ಶನದ ಆಯ್ದ ಭಾಗ ಇಂತಿದೆ:
ಪ್ರ: ಬಿಡುಗಡೆಗೆ ಸಿದ್ದವಾಗಿರುವ ಡ್ರಾಮಾ ಚಿತ್ರದ ಬಗ್ಗೆ?
ಭಟ್: ಮತ್ತೊಬ್ಬರು ಆಡಿಸಿದಂತೆ ಆಡುವುದೇ ಜೀವನ, ಒಂದು ರೀತಿಯಲ್ಲಿ ಗೊಂಬೆಯಾಟ ಅಂತಾರೆ ನೋಡಿ ಹಾಗೆ. ಇದನ್ನೇ ಮುಖ್ಯ ಕಥೆಯನ್ನಾಗಿ ಇಟ್ಟುಕೊಂಡು ಯುವ ಸಮುದಾಯವನ್ನು ಗಮನದಲ್ಲಿ ಇಟ್ಟು ಈ ಚಿತ್ರಕಥೆ ಹಣೆದಿದ್ದೇನೆ.
ಪ್ರ: ನಿಮ್ಮ ಈ ಹಿಂದಿನ ಚಿತ್ರಕ್ಕಿಂತ ಇದು ಹೇಗೆ ವಿಭಿನ್ನ?
ಭಟ್: ಕಥಾವಸ್ತು, ವಿಶೇಷ ಲಕ್ಷಣಗಳನ್ನು ತೆರೆಗೆ ತಂದಿದ್ದನ್ನು ಪ್ರೇಕ್ಷಕರು ಗಮನಿಸಬಹುದು ಎನ್ನುವುದು ನನ್ನ ನಂಬಿಕೆ. ಚಿತ್ರದ ಸಂಗೀತ ವಿಭಿನ್ನವಾಗಿದೆ. ಒಟ್ಟಿನಲ್ಲಿ ಇದೊಂದು 'ವಿಚಿತ್ರ ವಿಲಕ್ಷಣದ' ಸಿನಿಮಾ ಅನ್ನಬಹುದು.
ಪ್ರ: ನಿಮ್ಮ ಚಿತ್ರಗಳಲ್ಲಿ ಕಥೆ ಅನ್ನೋದೇ ಇರೋದಿಲ್ಲ ಎನ್ನುವ ಕೂಗಿಗೆ ಡ್ರಾಮಾ ಚಿತ್ರ ಸರಿಯಾದ ಉತ್ತರ ನೀಡುವುದೇ?
ಭಟ್: ನನ್ನ ಚಿತ್ರಗಳಲ್ಲಿ ಕಥೆ ಇರೋದಿಲ್ಲ ಎನ್ನುವ ಟೀಕೆಯನ್ನು ನಾನೂ ಕೇಳಿದ್ದೇನೆ. ಮುಂಗಾರು ಮಳೆ ಚಿತ್ರ ಬಿಡುಗಡೆಯಾದಾಗಲೂ ಇದೇ ರೀತಿ ಟೀಕೆಗಳು ಬಂದಿದ್ದವು. ಚಿತ್ರಕ್ಕೆ ಯಾವ ರೀತಿ ಜನ ಸ್ಪಂದಿಸಿದರು ಅನ್ನೋದು ಇತಿಹಾಸ. ನಾವು ಚಿತ್ರ ಮಾಡೋದು ಜನ ನೋಡಲೀಂತಾ, ಪ್ರೇಕ್ಷಕರೇ ನಿರ್ಧರಿಸಬೇಕು ನನ್ನ ಚಿತ್ರದಲ್ಲಿ ಕಥೆ ಇದೆಯಾ ಅಥವಾ ಇಲ್ಲವಾ ಎಂದು.
ಪ್ರ: ಮತ್ತೊಂದು ಬಹುನಿರೀಕ್ಷಿತ ಎದೆಗಾರಿಕೆ ಚಿತ್ರ ಕೂಡಾ ಡ್ರಾಮಾ ಚಿತ್ರದ ಜೊತೆಗೆ ಬಿಡುಗಡೆಯಾಗುತ್ತಿದೆ. ಈ ಎರಡು ಚಿತ್ರಗಳ ಪೈಪೋಟಿ ನಿಮ್ಮ ನಿಮ್ಮ ಚಿತ್ರಗಳ ಕಲೆಕ್ಷನ್ ಗೆ ತೊಂದರೆಯಾಗುವುದಿಲ್ಲವೇ?
ಭಟ್: ನನ್ನಲ್ಲಿ ಉತ್ತರವಿಲ್ಲ. ಎದೆಗಾರಿಕೆ ಚಿತ್ರದ ಮೇಕಿಂಗ್ ಬಗ್ಗೆ ಬಹಳಷ್ಟು ಉತ್ತಮ ಮಾತುಗಳು ಕೇಳಿ ಬರುತ್ತಿವೆ. ಎರಡೂ ಚಿತ್ರ ಒಳ್ಳೆ ಕಲೆಕ್ಷನ್ ಗಳಿಸಿದರೆ ಕನ್ನಡ ಚಿತ್ರರಂಗಕಲ್ಲವೇ ಲಾಭ..
ಪ್ರ: ಡ್ರಾಮಾ ಚಿತ್ರದ ತಾರಾಗಣದ ಬಗ್ಗೆ?
ಭಟ್: ಯಶ್ ಮತ್ತು ರಾಧಿಕಾ ಪಂಡಿತ್ ನಟನೆ ಅದ್ಭುತ ಮತ್ತು ಅಂಬರೀಶ್ ನಟನೆ ಪರಮಾದ್ಭುತ.
ಡ್ರಾಮಾ ಚಿತ್ರದ ಗ್ಯಾಲರಿ




























