
ಗೋಲ್ಡನ್ ಸ್ಟಾರ್ ಗಣೇಶ್ ಅವರ ತಮ್ಮ ಮಹೇಶ್ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ (ಅ.31ರ ಬುಧವಾರ)ನೂತನ ದಾಂಪತ್ಯಕ್ಕೆ ಅಡಿಯಿಟ್ಟರು. ತಾನು ಪ್ರೀತಿಸುತ್ತಿದ್ದ ನೇಪಾಳಿ ಮೂಲದ ಹುಡುಗಿ ಪ್ರೇಮಾರನ್ನು ಕೈಹಿಡಿದಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಪ್ರೇಮಾ ಅವರು ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇವರಿಬ್ಬರ ಮದುವೆಗೆ ಕೇವಲ ಬೆರಳೆಣಿಕೆಯಷ್ಟು ಮಂದಿ ಸಮ್ಮುಖದಲ್ಲಿ ನೆರವೇರಿದೆ. ಮಹೇಶ್ ಅವರ ಭಾವ, ವಧು ಪ್ರೇಮಾ ಅವರ ತಂದೆತಾಯಿ ಸೇರಿದಂತೆ ಕೆಲವೇ ಕೆಲವು ಮಂದಿ ಸಮ್ಮುಖದಲ್ಲಿ ಮದುವೆ ನಡೆದಿದೆ. ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಮದುವೆಗೆ ಆಗಮಿಸಿರಲಿಲ್ಲ.
ಮಹೇಶ್ ಗೆ ಈಗಾಗಲೆ ಮದುವೆ ನಿಗದಿಯಾಗಿತ್ತು ಎನ್ನಲಾಗಿದೆ. ಯಡಿಯೂರು ದೇವಸ್ಥಾನದಲ್ಲಿ ಮದುವೆ ಏರ್ಪಾಟಾಗಿತ್ತು. ಆದರೆ ಮಹೇಶ್ ಮತ್ತೊಬ್ಬ ಹುಡುಗಿ ವನಜಾ ಎಂಬುವವರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಇವರಿಬ್ಬರ ಮದುವೆ ಮಾರ್ಚ್ 2, 2012ಕ್ಕೆ ನಿಗದಿಯಾಗಿತ್ತು. ಆದರೆ ಮಹೇಶ್ ಹೊಸ ಹುಡುಗಿ ಸೌಮ್ಯಾ ಎಂಬಾಕೆಯ ಜೊತೆ ಮದುವೆ ಮಾಡಿಕೊಂಡು ಪರಾರಿಯಾಗಿದ್ದ ಎಂಬ ಸುದ್ದಿಯೂ ಇತ್ತು. ಈಗ ಪ್ರೇಮಾ ಕೈಹಿಡಿಯುವ ಮೂಲಕ ಮಹೇಶ್ ಲವ್ ಸ್ಟೋರಿಗೆ ಹೊಸ ತಿರುವು ಸಿಕ್ಕಿದೆ.
ಕಳೆದ ಎಂಟು ತಿಂಗಳಿಂದ ನಾಪತ್ತೆಯಾಗಿದ್ದ ಮಹೇಶ್ ಮಾಧ್ಯಮಗಳ ಪ್ರತಿಕ್ರಿಯೆಗೂ ಲಭ್ಯವಿರಲಿಲ್ಲ. ಈಗ ದಿಢೀರ್ ಎಂದು ನೇಪಾಳಿ ಮೂಲದ ಪ್ರೇಮಾ ಅವರ ಕೈಹಿಡಿಯುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.
ಮಹೇಶ್ ಅವರು 'ಅಲೆಮಾರಿ' ಎಂಬ ಚಿತ್ರವನ್ನೂ ಕೈಗೆತ್ತಿಕೊಂಡಿದ್ದರು. ಈ ಚಿತ್ರಕ್ಕೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಬೇಕಾಗಿತ್ತು. ಚಿತ್ರದ ಮುಹೂರ್ತವೇನೋ ನೆರವೇರಿತು. ಆದರೆ ಚಿತ್ರ ನಾನಾ ಕಾರಣಗಳಿಗೆ ಸೆಟ್ಟೇರಲೇ ಇಲ್ಲ. ಯಾಕೋ ಏನೋ ಚಿತ್ರ ನಿರ್ದೇಶಕರು ಚಿತ್ರದ ಮೇಲೆ ಆಸೆ ಕೈಬಿಟ್ಟರು. (ಏಜೆನ್ಸೀಸ್)




























