
ಕೆ. ಮಂಜು ನಿರ್ಮಾಣದಲ್ಲಿ ಉಪೇಂದ್ರ ಮತ್ತೊಂದು ಸಿನಿಮಾ ಮಾಡುತ್ತಾರೆ ಎಂದು ವರದಿಯಾಗಿತ್ತು. ಆ ಚಿತ್ರದ ಹೆಸರು ಸೂಪರೋ ರಂಗ ಅಂತ ಹೇಳಲಾಗಿತ್ತು. ಆದರೆ ಆ ಸುದ್ದಿಯಲ್ಲಿ ಈಗ ಕೊಂಚ ಪರಿಷ್ಕರಣೆಯಾಗಿದೆ. ಉಪೇಂದ್ರ ಅವರು ಮಂಜು ನಿರ್ಮಾಣದ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿರುವುದೇನೋ ನಿಜ.
ಆದರೆ ಆ ಚಿತ್ರದ ಹೆಸರು ಮಾಧ್ಯಮಗಳಲ್ಲಿ ವರದಿಯಾದಂತೆ ಸೂಪರೋ ರಂಗ ಅಲ್ಲ. ಅದು ‘ಸೂಪರ್ ಕಿಕ್' ಅಂತೆ. ಇಲ್ಲೀವರೆಗೂ ಆ ಚಿತ್ರವನ್ನ ಯಾರು ನಿರ್ದೇಶಿಸುತ್ತಾರೆ ಎಂಬುದು ಘೋಷಣೆಯಾಗಿರಲಿಲ್ಲ. ಈಗ ಬಂದಿರುವ ವರ್ತಮಾನಗಳ ಪ್ರಕಾರ ರಮೇಶ್ ಅರವಿಂದ್ ಈ ಚಿತ್ರ ನಿರ್ದೇಶಿಸಲಿದ್ದಾರೆ...!
ಕನ್ನಡ ಚಿತ್ರರಂಗದ ಬುದ್ಧಿವಂತ ನಟರಲ್ಲೊಬ್ಬರಾಗಿರುವ ರಮೇಶ್, ಅತಿ ಬುದ್ಧಿವಂತ ನಿರ್ದೇಶಕ ಅಂತ ಕರೆಸಿಕೊಂಡಿರುವ ಉಪೇಂದ್ರರನ್ನ ನಿರ್ದೇಶಿಸುತ್ತಿರುವುದು ಪ್ರೇಕ್ಷಕರ ಕುತೂಹಲ ಕೆರಳಿಸುವುದಂತೂ ನಿಶ್ಚಿತ. ಈ ಕಾಂಬಿನೇಷನ್ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ.
ರಮೇಶ್ ನಿರ್ದೇಶನ ಮಾಡಿರುವ ರಾಮಾಶಾಮಾಭಾಮಾ, ಆಕ್ಸಿಡೆಂಟ್, ಸತ್ಯವಾನ್ ಸಾವಿತ್ರಿ, ವೆಂಕಟ ಇನ್ ಸಂಕಟ, ನಮ್ಮಣ್ಣ ಡಾನ್ ಚಿತ್ರಗಳು ಹೊಸತನದಿಂದ ಆಕರ್ಷಿಸಿದಂಥವು. ಉಪೇಂದ್ರರನ್ನ ನಿರ್ದೇಶಿಸಲು ರಮೇಶ್ ಆಯ್ಕೆ ಮಾಡಿಕೊಂಡಿರುವ ಸಬ್ಜೆಕ್ಟ್ನಲ್ಲೂ ಕೂಡಾ ಅಷ್ಟೇ ಹೊಸತನ, ತಮಾಶೆ, ರೊಮ್ಯಾನ್ಸ್ ಮೂಡಿ ಬರಲಿದೆ ಎಂಬುದು ಪ್ರಾಥಮಿಕ ಮಾಹಿತಿ.
ಸದ್ಯಕ್ಕೆ ಉಪ್ಪಿ ಟೋಪಿವಾಲದಲ್ಲಿ ಬ್ಯುಸಿ ಇದ್ದಾರೆ. ಅದರ ನಂತರ ಅವರದ್ದೇ ಬ್ಯಾನರ್ನಲ್ಲಿ ಸಿನಿಮಾವೊಂದು ಘೋಷಣೆಯಾಗುವ ಸಂಭವವಿದೆ. ರಮೇಶ್ ಕೂಡಾ ಮಂಜು ಸಿನಿಮಾಕ್ಕಿಂತ ಮುಂಚಿತವಾಗಿ ಬೇರೊಬ್ಬ ನಿರ್ಮಾಪಕರ ಸಿನಿಮಾ ನಿರ್ದೇಶಿಸಲು ಒಪ್ಪಿಕೊಂಡಿರುವ ಬಗ್ಗೆ ಮಾತುಗಳು ಕೇಳಿಬಂದಿದೆ. ಹಾಗಾದರೆ ಸೂಪರ್ ಕಿಕ್ ಸಿನಿಮಾ ಸೆಟ್ಟೇರುವುದು ಯಾವಾಗ?
ಅಕ್ಟೋಬರ್ ನಂತರವಷ್ಟೇ ಈ ಸಾಧ್ಯತೆಗಳು ಕಂಡುಬರುತ್ತಿದೆ. ಕಥೆ ಬಗ್ಗೆ, ಚಿತ್ರದ ಇನ್ನಿತರೆ ಮಾಹಿತಿ ಬಗ್ಗೆ ರಮೇಶ್ರನ್ನ ಕೇಳಿದರೆ, ಅವರು ಕೊಡುವ ಉತ್ತರವೂ ಅದೇ; ಮಾತುಕಥೆ ನಡೆದಿರುವುದು ನಿಜ. ಆದರೆ ಸ್ಕ್ರಿಪ್ಟ್ ಇನ್ನೂ ಸಂಪೂರ್ಣಗೊಂಡಿಲ್ಲ. ಹಾಗಾಗಿ ಈಗಲೇ ಅದರ ಬಗ್ಗೆ ಮಾತು ಬೇಡ...'
ಅಂದ ಹಾಗೆ ರಮೇಶ್ ಬರೀ ನಿರ್ದೇಶನ ಮಾತ್ರ ಮಾಡುತ್ತಿಲ್ಲ. ಈ ಚಿತ್ರದ ಒಂದು ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಗಮನಕ್ಕಿರಲಿ.




























