
ಪಿಯುಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಬಂದ ಹ್ಯಾಂಡ್ ಸಮ್ ಹುಡುಗ ಚೇತನ್ ಚಂದ್ರ, ನಂತರ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮೂರ್ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದರು. ಪಿಯುಸಿ ನಂತರ ಪ್ರೇಮಿಸಂ, ರಾಜಧಾನಿ ಹಾಗೂ ಜರಾಸಂಧ ಚಿತ್ರಗಳಲ್ಲೂ ಅಭಿನಯಿಸಿ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತ ಎನಿಸಿದ್ದಾರೆ. ಇದೀಗ ಹೊಸ ಚಿತ್ರವೊಂದಕ್ಕೆ ನಾಯಕರು ಚೇತನ್ ಚಂದ್ರ.
ಇಂದು, (ಏಪ್ರಿಲ್ 10, 2012) ರಂದು ಚೇತನ್ ಚಂದ್ರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿದಾಗ "ಇಂದು ನಾನು ಹುಟ್ಟುಹಬ್ಬವನ್ನು ತುಂಬಾ ಸಂತೋಷದಿಂದ ಆಚರಿಸಿಕೊಳ್ಳುತ್ತಿದ್ದೇನೆ. ಕಾರಣ ಹೊಸ ಚಿತ್ರವೊಂದಕ್ಕೆ ನಾನೀಗ ನಾಯಕ. ಹೆಸರು ಸಿಂಹರಾಶಿ, ನಿರ್ದೇಶಕರು ಚಂದ್ರಹಾಸ. ಈ ಚಿತ್ರದ ಪಾತ್ರ ತುಂಬಾ ವಿಭಿನ್ನ. ಕನ್ನಡ ಚಿತ್ರರಂಗದಲ್ಲಿ ಇದು ಹೊಸ ಪ್ರಯತ್ನ.
ತೆರೆಯ ಮೇಲೆ ನನ್ನನ್ನು ಆ ಪಾತ್ರದಲ್ಲಿ ನೋಡುವ ಪ್ರೇಕ್ಷಕರಿಗೆ ನಿರಾಸೆ ಆಗಬಾರದೆಂಬ ಕಾರಣಕ್ಕೆ ಕಷ್ಟುಪಟ್ಟು ವರ್ಕ್ ಔಟ್ ಮಾಡಿ 'ಏಯ್ಟ್ ಪ್ಯಾಕ್' ಮಾಡಿಕೊಂಡಿದ್ದೇನೆ. ಡಯಟ್ ಮಾಡಿ ಈ ಪಾತ್ರಕ್ಕೆ ಬೇಕಾದ ದೇಹವನ್ನು ಬೆಳೆಸಿಕೊಂಡಿದ್ದೇನೆ. ಇದೇ ತಿಂಗಳಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ನಾನು ಈಗಲೂ ದಿನಕ್ಕೆ 7 ಗಂಟೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದೇನೆ" ಎಂದಿದ್ದಾರೆ.
ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ನಮ್ಮ ಒನ್ ಇಂಡಿಯಾ ಕನ್ನಡದ ಜೊತೆ ಈ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ ನಟ ಚೇತನ್ ಚಂದ್ರ. ಅವರಿಗೆ ಒನ್ ಇಂಡಿಯಾ ಕನ್ನಡದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು.




























