
ಇದೆಲ್ಲಕ್ಕೂ ಕಾರಣ ಅಶೋಕ್ ಕಶ್ಯಪ್ ಎನ್ನುತ್ತಿವೆ ಮೂಲಗಳು. ಅಂತಾರಾಷ್ಟ್ರೀಯ ಮಟ್ಟದ ಸಿನಿಮಾದಂತಿರುವ 'ಸೂಪರ್'ಗೆ ಪ್ರಶಸ್ತಿ ಕೊಡದೇ ಬೇರೆ ಯಾವ ಚಿತ್ರಕ್ಕೆ ಪ್ರಶಸ್ತಿ ಕೊಡಬೇಕು? ಹೀಗೆಂದು ಆಯ್ಕೆ ಸಮಿತಿಯ ಸಭೆಯಲ್ಲಿ 'ಸೂಪರ್' ಚಿತ್ರದ ಛಾಯಾಗ್ರಾಹಕ ಅಶೋಕ್ ಕಶ್ಯಪ್ ವಾದ ಮಾಡಿದ್ದರು ಎನ್ನಲಾಗಿದೆ. ಕೊನೆಗೆ ಅದಕ್ಕೆ ಪ್ರಶಸ್ತಿ ಕೊಡಿಸುವಲ್ಲಿ ಯಶಸ್ವಿಯಾದರು ಎನ್ನಲಾಗುತ್ತಿದೆ.
ಆದರೆ, ಆಶ್ಚರ್ಯವೆಂದರೆ ಪ್ರತಿ ವರ್ಷ ಅಪಸ್ವರ ಇದ್ದದ್ದೇ. 10 ವರ್ಷಗಳ ನಂತರ ಉಪೇಂದರ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹೆಸರಿಗೆ ಸರಿಯಾಗಿ 'ಸೂಪರ್ರೇ ಆಗಿದೆ. ಪ್ರಶಸ್ತಿ ಸಿಕ್ಕಿರುವುದು ನ್ಯಾಯ, ಅದಕ್ಕೆ ಎಲ್ಲರೂ ಸಂತೋಷ ವ್ಯಕ್ತಪಡಿಸುವ ಬದಲು ಅಪಸ್ವರ ಯಾಕೆ. ಯಾವ ದಿಕ್ಕಿನಿಂದ ನೋಡಿದರೂ ಸೂಪರ್ ಗೆ ಪ್ರಶಸ್ತಿ ಬಂದಿರುವುದರಲ್ಲಿ ತಪ್ಪಿಲ್ಲ ಎಂಬುದು ಪ್ರೇಕ್ಷಕರ ವಾದ ಎನ್ನುತ್ತಿವೆ ಇನ್ನೊಂದು ಸುದ್ದಿ ಮೂಲ.
ಸೂಪರ್ ಚಿತ್ರ ಬರೀ ವ್ಯಾಪಾರ, ಮಸಾಲೆಗೆ ಸೀಮಿತವಾದ ಚಿತ್ರವಲ್ಲ. ರಕ್ತಪಾತ, ಲಾಂಗು-ಮಚ್ಚುಗಳ ವೈಭವೀಕರಣ ಕೂಡ ಇದರಲ್ಲಿಲ್ಲ. ಜನತೆಯನ್ನು ಬಡಿದೆಬ್ಬಿಸುವ ಸಂದೇಶವಿದ್ದ 'ಸೂಪರ್' ದೇಶಪ್ರೇಮದ, ಜನರನ್ನು ಚಿಂತನೆಗೆ ಹಚ್ಚುವ ಹಾಗೂ ಭವಿಷ್ಯದ ಕನಸು ಕಾಣುವ ಚಿತ್ರ. ಹಾಗಾಗಿ ಆರೆಸ್ಸೆಸ್ ಕೂಡ ಈ ಚಿತ್ರಕ್ಕೆ ಪ್ರಶಸ್ತಿ ನೀಡಬೇಕೆಂದು ಶಿಫಾರಸು ಮಾಡಿತ್ತು ಎನ್ನುವ ವಾದವೂ ಕೇಳಿ ಬರುತ್ತಿದೆ. (ಒನ್ ಇಂಡಿಯಾ ಕನ್ನಡ)




















