ಅಣ್ಣಾಬಾಂಡ್ ಚಿತ್ರ ನಿಜವಾಗಿಯೂ 16 ಕೋಟಿ ವಿತರಣೆ ಹಕ್ಕಿಗೆ ಮಾರಾಟವಾಗಿದೆಯಾ? ಇಲ್ಲ ಎನ್ನುತ್ತಿವೆ ಸುದ್ದಿ ಮೂಲಗಳು. ಸಾಕಷ್ಟು ದಿನಗಳ ಹಿಂದೆಯೇ ಈ ಚಿತ್ರದ ವಿತರಣೆ ಹಕ್ಕನ್ನು ತೆಗೆದುಕೊಂಡಿದ್ದೇನೆ ಎಂದು ಪ್ರಸಾದ್ ಹೇಳಿದ್ದರು. ಆದರೆ ಅವರು ಹೇಳಿದ್ದು ಸುಳ್ಳು ಎನ್ನಲಾಗುತ್ತಿದೆ.
ಅದಕ್ಕೆ ಸಾಕ್ಷಿ ಇತ್ತೀಚಿಗೆ ನಡೆದ ಅಣ್ಣಾಬಾಂಡ್ ಆಡಿಯೋ ಬಿಡುಗಡೆ ಕಾರ್ಯಕ್ರಮ. ಈ ಚಿತ್ರದ ನಿರ್ಮಾಪಕರಾದ ರಾಘವೇಂದ್ರ ರಾಜ್ ಕುಮಾರ್, "ಈ ಚಿತ್ರವನ್ನು ಪ್ರಸಾದ್ ಜೊತೆ ಪಾಲುದಾರಿಕೆಯಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಹಾಗಾದರೆ ಪ್ರಸಾದ್ ಮಾತಿನ ಸತ್ಯಾಸತ್ಯತೆಯೇನು?
ಈ ವಿಷಯಕ್ಕೆ ಪ್ರಸಾದ್ "ಆ ಚಿತ್ರವನ್ನು 16 ಕೋಟಿ ರು. ಗೆ ಮಾತಾಡಿದ್ದು ಹೌದು. ಈಗಾಗಲೇ ಅಡ್ವಾನ್ಸ್ ಸಹ ಕೊಟ್ಟಾಗಿದೆ. ಆದರೆ ಅಗ್ರಿಮೆಂಟ್ ಆಗಿಲ್ಲ" ಎಂದಿದ್ದಾರೆ. ಅಗ್ರಿಮೆಮಟ್ ಇಲ್ಲದೆಯೇ ಅಷ್ಟು ದೊಡ್ಡ ವ್ಯವಹಾರ ನಡೆದದ್ದು ಹೇಗೆ? ಮಾಧ್ಯಮಗಳಲ್ಲೂ 16 ಕೋಟಿಗೆ ವಿತರಣೆ ಹಕ್ಕು ಸೇಲಾಗಿದೆ ಎಂಬುದು ಜಗಜ್ಜಾಹೀರಾಗಿದ್ದರೂ ಚಿತ್ರತಂಡ ಯಾಕೆ ಮೌನವಾಗಿದೆ?
ಈ ಎಲ್ಲ ಪ್ರಶ್ನೆಗಳಿಗೆ ನೈಜ ಉತ್ತರಕ್ಕಾಗಿ ಎಲ್ಲರೂ ಪ್ರಸಾದ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕಡೆ ನೋಡುತ್ತಿದ್ದಾರೆ. ಉತ್ತರ ಸಿಗಬಹುದು ಎಂಬ ನಿರೀಕ್ಷೆ ಕೂಡ ಎಲ್ಲರಲ್ಲಿದೆ. ಒಟ್ಟಿನಲ್ಲಿ ಬಿಡುಗಡೆ ಸಮೀಪಿಸಿರುವ ವೇಳೆಯಲ್ಲಿ ಅಣ್ಣಾಬಾಂಡ್ ಚಿತ್ರದ ವಿತರಣೆ ಹಕ್ಕು 16 ಕೋಟಿಗೆ ಹೋಗಿದ್ದು ಸುಳ್ಳು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)





























