
ಸಬ್ಸಿಡಿ ಹರಗಣಕ್ಕೆ ಸಂಬಂಧಿಸಿದಂತೆ ಲಂಚ ಪಡೆದ ಆರೋಪದ ಮೇಲೆ ಸಿನಿಮಾ ನಟರಾದ ಶಿವರಾಂ, ಸುರೇಶ್ ಮಂಗಳೂರು ವಿರುದ್ಧ ಉಪ್ಪಾರಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರತಿ ವರ್ಷ ರಾಜ್ಯ ಸರ್ಕಾರ 50 ಚಿತ್ರಗಳಿಗೆ 10 ರಿಂದ 25 ಲಕ್ಷ ರೂಪಾಯಿ ಸಬ್ಸಿಡಿ ಒದಗಿಸುತ್ತದೆ. 2009-10ನೇ ಸಾಲಿನಲ್ಲಿ ಸಹಾಯಧನಕ್ಕಾಗಿ (ಸಬ್ಸಿಡಿ) ಚಿತ್ರಗಳ ಆಯ್ಕೆ ಮಾಡಲು ರಾಜ್ಯ ಸರ್ಕಾರ ರಚಿಸಿದ ಸಮಿತಿಗೆ ಶಿವರಾಂ ಅಧ್ಯಕ್ಷ ಹಾಗೂ ಮಂಗಳೂರಿನ ಸುರೇಶ್ ಸದಸ್ಯರಾಗಿದ್ದರು.
ಚಿತ್ರವೊಂದಕ್ಕೆ ಸಹಾಯಧನ ಪಡೆಯಲು 2.5 ಲಕ್ಷ ರೂ ಲಂಚ ನೀಡುವಂತೆ ಇಬ್ಬರು ಕೇಳಿದ್ದರು ಎಂಬುದು ಸುವರ್ಣ ವಾಹಿನಿ ಚುಟಕು ಕಾರ್ಯಚರಣೆಯಿಂದ ಸಾಬೀತಾಗಿತ್ತು. ಈ ಬಗ್ಗೆ ಚಿತ್ರ ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರು ದೂರು ನೀಡಿದ್ದರು.
ಸಿಎಂ ಭರವಸೆ: ಕಳೆದ ಸಾಲಿನಲ್ಲಿ ಸಬ್ಸಿಡಿ ಹಣ ಪಡೆಯಲು 50ಕ್ಕೂ ಹೆಚ್ಚು ಮಂದಿ ಚಿತ್ರ ನಿರ್ಮಾಪಕರು ಸಮಿತಿಗೆ ಲಂಚ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಸಹಾಯಧನಕ್ಕೆ ಅರ್ಹವಾಗಿರುವ ಚಿತ್ರಗಳನ್ನು ಪಟ್ಟಿಯಿಂದ ಕೈಬಿಡುವಂತೆ ಅನೇಕ ನಿರ್ಮಾಪಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದ್ದಾರೆ.
ಹಿರಿಯ ನಟ ಶಿವರಾಂ ಅವರು ರಾಜಕುಮಾರ್ ಪ್ರಶಸ್ತಿಗೆ ಅರ್ಹರಾಗಿದ್ದರೂ ಹಗರಣದಲ್ಲಿ ಹೆಸರು ಸಿಕ್ಕಿಹಾಕಿಕೊಂಡಿದೆ. ಅವರಿಗೆ ಈಗ ಈ ರಾಜ್ಯ ಪ್ರಶಸ್ತಿ ನೀಡುವುದು ಸರಿಯಲ್ಲ ಎಂದು ನಿರ್ಮಾಪಕ ಉಮೇಶ್ ಬಣಕಾರ್, ಕೂಡ್ಲು ರಾಮಕೃಷ್ಣ ಆಗ್ರಹಿಸಿದ್ದಾರೆ.




















