ಇನ್ನೂ ನಿಶ್ಚಿತಾರ್ಥವಾಗಿ ತಿಂಗಳು ಕಳೆದಿಲ್ಲ, ಆಗಲೇ ನಟಿ ಪೂಜಾಗಾಂಧಿ ಮದುವೆ ಮುರಿದು ಬಿತ್ತೇ? ಹೌದು ಎಂಬ ಸುದ್ದಿಯೊಂದು ಬೆಂಗಳೂರಿನ ಕತ್ರಿಗುಪ್ಪೆಯಿಂದ ಕೇಳಿಬಂದಿದೆ. ಬಿಜಿನೆಸ್ ಮ್ಯಾನ್, ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಅವರಿಗೆ ಪೂಜಾಗಾಂಧಿ ತಂದೆತಾಯಿ ಕನ್ಯಾದಾನ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
'ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ' ಎಂಬ ಗಾದೆ ಮಾತೊಂದಿದೆ. ಆದರೂ ಪೂಜಾಗಾಂಧಿ ಅವರ ಹೆತ್ತವರು ಮಾತ್ರ ತಮ್ಮ ಮಗಳು ತಮ್ಮೊಂದಿಗೆ ಇರಬೇಕು ಎಂದು ಬಯಸಿದ್ದಾರಂತೆ. ತಮ್ಮ ಮಗಳೇ ತಮಗೆ ಜೀವನಾಧಾರ. ಮದುವೆಯಾಗಿ ಅವಳು ತಮ್ಮಿಂದ ದೂರವಾದರೆ ತಮ್ಮ ಗತಿ ಏನು. ತಮ್ಮನ್ನು ಮುಂದೆ ನೋಡಿಕೊಳ್ಳುವವರು ಯಾರು?
ಈ ಕಾರಣಕ್ಕೆ ಪೂಜಾಗಾಂಧಿ ಅವರ ಮದುವೆಯನ್ನು ನಿಶ್ಚಿತಾರ್ಥಕ್ಕೆ ನಿಲ್ಲಿಸಿದ್ದಾರೆ ಎನ್ನುತ್ತದೆ 'ಸುವರ್ಣ ನ್ಯೂಸ್ 24/7' ಮಟಮಟ ಮಧ್ಯಾಹ್ನದ ಬ್ರೇಕಿಂಗ್ ನ್ಯೂಸ್. ಇದು ನಿಜವೇ ಎಂದು ಆನಂದಗೌಡ ಅವರನ್ನು ಸಂಪರ್ಕಿಸಿದರೆ ಅವರು ಹೇಳಿದ್ದಿಷ್ಟು...
ಆನಂದಗೌಡ ಅವರ ಕುಟುಂಬಿಕರನ್ನು ಪೂಜಾಗಾಂಧಿ ತಾಯಿ ಅಪಮಾನಿಸಿದ್ದರಂತೆ. ಇದಿಷ್ಟೇ ಅಲ್ಲದೆ ಎಲ್ಲ ವಿಚಾರಗಳಲ್ಲೂ ಮೂಗು ತೂರಿಸುತ್ತಿದ್ದರಂತೆ. ಇದರಿಂದ ಬೇಸತ್ತ ಆನಂದ್ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ಅವರು ಇನ್ನೊಂದು ದಿನದಲ್ಲಿ ಪತ್ರಿಕಾಗೋಷ್ಠಿ ಕರೆದು ಎಲ್ಲ ವಿವರಗಳನ್ನು ನೀಡುವುದಾಗಿಯೂ ತಿಳಿಸಿದ್ದಾರೆ.
ಇನ್ನೊಂದು ಮೂಲದ ಪ್ರಕಾರ ಇತ್ತೀಚೆಗೆ ಪೂಜಾಗಾಂಧಿ ಅವರು ಜೆಡಿಎಸ್ ತೊರೆದು ಕೆಜೆಪಿಗೆ ಸೇರಿದ್ದೂ ಮದುವೆ ಸಂಬಂಧ ಮುರಿದುಬೀಳಲು ಮತ್ತೊಂದು ಕಾರಣ ಎನ್ನಲಾಗಿದೆ. ಆನಂದಗೌಡ ಅವರು ಜೆಡಿಎಸ್ ಪಕ್ಷಕ್ಕೆ ಸೇರಿವರಾಗಿದ್ದು ಪೂಜಾಗಾಂಧಿ ಪಕ್ಷಾಂತರವನ್ನು ಅವರು ಒಪ್ಪುತ್ತಿಲ್ಲ ಎನ್ನುತ್ತವೆ ಮೂಲಗಳು.
ಇಷ್ಟಕ್ಕೂ ಆನಂದಗೌಡ ಜೊತೆಗಿನ ಪೂಜಾಗಾಂಧಿ ಮದುವೆ ಮುರಿದುಬೀಳಲು ಸೂಕ್ತ ಕಾರಣ ಏನಿರಬಹುದು ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬೀಳಬೇಕು. 2013ರ ಏಪ್ರಿಲ್ ನಲ್ಲಿ ಆನಂದಗೌಡ ಜೊತೆ ಪೂಜಾಗಾಂಧಿ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿತ್ತು. ಪೂಜಾಗಾಂಧಿ ಮೊಬೈಲ್ ಕೂಡ ಸ್ವಿಚ್ಡ್ ಆಫ್. (ಏಜೆನ್ಸೀಸ್)





















