ಎಡವಟ್ಟಾಯ್ತು ತಲೆಕೆಟ್ಟೋಯ್ತು, ಎಡವಟ್ ತಲೆಕಟ್!
ವಸಂತ ಮಾಸ ಆಗತಾನೆ ಪ್ರಾರಂಭವಾಗಿತ್ತು. ಅಟ್ಲಾಂಟಾದಿಂದ ಬೆಂಗಳೂರಿಗೆ ಹೊರಟಿದ್ದ ನನ್ನ ಫ್ಲೈಟ್ ಲೇಟ್ ಆಗಿತ್ತು. ಎರಡು ಘಂಟೆಯ ವಿಳಂಬದ ನಂತರ ಬೆಂಗಳೂರಿನಲ್ಲಿ ಬೆಳಗಿನ ಜಾವ ಫ್ಲೈಟ್ ಲ್ಯಾಂಡ್ ಆಯಿತು. ಅಲ್ಲಿಯವರೆಗೂ ಮೌನವಾಗಿ ಕುಳಿತು ಶಿಸ್ತಿನಿಂದ ವರ್ತಿಸುತ್ತಿದ್ದ ನಮ್ಮ ಭಾರತೀಯ ಪ್ರಜೆಗಳು, ಭರತ ಭೂಮಿಯನ್ನು ನೋಡಿದ ಸಂತೋಷಕ್ಕೋ ಏನೋ, ವಿಮಾನ ಸಂಪೂರ್ಣವಾಗಿ ನಿಲ್ಲುವ ಮೊದಲೇ ಎದ್ದು ನಿಂತು, ನಡುದಾರಿಯನ್ನು ಬ್ಯಾಗ್ ಗಳಿಂದ ಬ್ಲಾಕ್ ಮಾಡಿ, ಒಬ್ಬರ ಮೇಲೊಬ್ಬರು ಸಿಡುಕಲು ಶುರು ಮಾಡಿದರು. ಒಂದಿಬ್ಬರು ಜಗಳಕ್ಕೇ ಇಳಿದರು. ಹಾಗೂ ಹೀಗೂ ಸಾಹಸ ಮಾಡಿಕೊಂಡು ಕ್ಯೂನಲ್ಲಿ ನಿಂತು, ಸೆಕ್ಯೂರಿಟಿ ವಿಧಾನಗಳನ್ನೆಲ್ಲಾ ಮುಗಿಸಿ, ಏರ್ಪೋರ್ಟ್ ಇಂದ ಹೊರಬಂದು, ಮೈಸೂರಿಗೆ ಟ್ಯಾಕ್ಸಿ ಹಿಡಿಯುವ ಹೊತ್ತಿಗೆ, ಸೂರ್ಯದೇವ ಸ್ಥಿರವಾಗಿ ಬಾನಿನಲ್ಲಿ ಸ್ಥಾಪಿತನಾಗಿದ್ದ.
ದೇವನಹಳ್ಳಿಯಿಂದ ಮೈಸೂರು ಹೈವೇಗೆ ಬರುವುದಕ್ಕೆ ಒಂದು ಘಂಟೆಯಾಯಿತು. ಹೈವೇ ತಲುಪಿದ ತಕ್ಷಣ ಟ್ಯಾಕ್ಸಿ ಡ್ರೈವರ್ ಆಕ್ಸಿಲರೇಟರ್ ಮೇಲೆ ಧಾರಾಳವಾಗಿ ಕಾಲೂರಿದ. ಮೈಮೇಲೆ ಆವೇಶ ಬಂದವರ ಹಾಗೆ ಎರ್ರಾ ಬಿರ್ರೀ ಓವರ್ಟೇಕ್ ಮಾಡಲು ಶುರು ಮಾಡಿದ. ಅವನ ಭಂಡ ಸಹಾಸವನ್ನು ನೋಡಲಾಗದೆ, ಅರ್ಧ ಜೀವಭಯದಿಂದ ಅರ್ಧ ಆಯಾಸದಿಂದ ಕಣ್ಣು ಮುಚ್ಚಿದೆ. ತಕ್ಷಣ ನನ್ನ ಸ್ನೇಹಿತ ನಾಡಿ ನೆನಪಿಗೆ ಬಂದ.
ನಾವಿಬ್ಬರು ಕಾಲೇಜ್ ನಲ್ಲಿ ಆಪ್ತ ಸ್ನೇಹಿತರು. ಒಟ್ಟಿಗೆ ಹರಟುತ್ತಿದ್ದೆವು, ಸುತ್ತಾಡುತ್ತಿದ್ದೆವು, ಹುಡುಗೀರನ್ನ (ಅಮಾಯಕವಾಗಿ) ರೇಗಿಸುತ್ತಿದ್ದೆವು, ಕಾಲೇಜ್ "ಫೆಸ್ಟ್"ಗಳಲ್ಲಿ ಸೀಟಿ ಹೊಡೆಯುತ್ತಿದ್ದೆವು, ಕ್ಲಾಸ್ ಬಂಕ್ ಮಾಡಿ ಪುನೀತ್ ರಾಜ್ಕುಮಾರ್ ರವರ ಪಿಕ್ಚರ್ಗಳಿಗೆ ಸೈ ಅನ್ನುತ್ತಿದ್ದೆವು. ಒಟ್ಟಿನಲ್ಲಿ, ಓದು ಒಂದನ್ನು ಬಿಟ್ಟು ಕಾಲೇಜ್ ನಲ್ಲಿ ನಾನು ಮತ್ತು ನಾಡಿ ಇನ್ನಿತರ ಎಲ್ಲಾ ಚಟುವಟಿಕೆಗಳಲ್ಲಿ ಹೃತ್ಪೂರ್ವಕವಾಗಿ ಭಾಗಿಯಾಗುತ್ತಿದ್ದೆವು.
ನಾನೀಗ ಮೈಸೂರಿಗೆ ಪಯಣ ಮಾಡುತ್ತಿದ್ದುದ್ದು ನಾಡಿಯ ಮದುವೆಗಾಗಿ. ಮೂರು ಘಂಟೆಯ ಸುದೀರ್ಘ ಫ್ಲಾಶ್ಬ್ಯಾಕ್ನಿಂದ ವರ್ತಮಾನಕ್ಕೆ ನನ್ನನ್ನು ಸೆಳೆಯುವುದಕ್ಕೆಂಬಂತೆ ಡ್ರೈವರ್ ಸಡನ್ ಆಗಿ ಬ್ರೇಕ್ ಹಾಕಿದ. ಹೊರಗೆ ನೋಡಿದೆ. ಮೈಸೂರಿನ ನಮ್ಮ ಮನೆ ಕಳೆಕಳೆಯಾಗಿ ರಾರಾಜಿಸುತ್ತಿತ್ತು. ಲಗೇಜ್ ಇಳಿಸಿಕೊಂಡು ಮನೆಯೊಳಗೆ ಹೋದೆ.
ಮಾರನೆ ದಿನ ಹತ್ತು ಘಂಟೆಗೆ ಛತ್ರಕ್ಕೆ ಹೊರಟೆ. ಮೈಸೂರಿನ ಕೃಷ್ಣಧಾಮ ಕಲ್ಯಾಣಮಂಟಪದಲ್ಲಿ ಆವತ್ತು ಸಾಯಂಕಾಲ ನಾಡಿಯ ವರಪೂಜೆ. ಬೆಳಿಗ್ಗೆ ಏರ್ಪಡಿಸಲಾಗಿದ್ದ ಸತ್ಯನಾರಾಯಣ ಪೂಜೆಗೆ ಹತ್ತಿರದ ಸಂಬಂಧಿಗಳನ್ನ ಮಾತ್ರ ಕರೆಯಲಾಗಿತ್ತು. ಆಪ್ತ ಸ್ನೇಹಿತ ನಾಡಿ ಇದಕ್ಕೆ ನನ್ನನ್ನೂ ಆಹ್ವಾನಿಸಿದ್ದ.
ನಾನು ಛತ್ರ ಪ್ರವೇಶಿಸಿದ ತಕ್ಷಣ ಎಲ್ಲೆಲ್ಲೂ ನಗುಮುಖಗಳು ಕಂಡವು. ಅಲ್ಲಿ ಒಂದು ಕಡೆ ಆಂಟಿಯರ ಪೂಜೆ ನಿರ್ವಹಣೆಯ ದಕ್ಷತೆ. ಇನ್ನೊಂದು ಕಡೆ ಅಂಕಲ್ ರ ಹಳೇ ಜೋಕು ಹೊಸದಾಗಿ ಹೇಳುವ ಚಾಣಾಕ್ಷತೆ. ಛತ್ರದ ಮುಂಭಾಗದಲ್ಲಿ ಮಕ್ಕಳ ಕಳ್ಳ-ಪೊಲೀಸ್ ಆಟದ ನಗೆ. ಹಿಂಭಾಗದಲ್ಲಿ ಕೂತಿದ್ದ ಯುವತಿಯರ ಮೆಹೆಂದಿ ಬಿಡಿಸುವ ಕಲೆ. ಎಲ್ಲವನ್ನೂ ನಿಧಾನವಾಗಿ ಗಮನಿಸಿದೆ.
ಗುರುತಿನವರಿಗಾಗಿ ಅಲ್ಲಿ ಇಲ್ಲಿ ಕಣ್ಣು ಹಾಯಿಸುತ್ತಾ, ಕೊನೆ ಸಾಲಿನ ಚೇರಿನಲ್ಲಿ ಕೂತೆ. ಸುತ್ತ ಮುತ್ತ ಯಾರ ಗುರುತೂ ಸಿಗಲಿಲ್ಲ. ಕೆಲವು ಸಾಲುಗಳ ಮುಂದೆ, ನನ್ನ ತರಾನೇ ಅಲ್ಲಿ ಇಲ್ಲಿ ನೋಡುತ್ತಿದ್ದ ಮತ್ತೊಂದು ಪ್ರಾಣಿ ಕಣ್ಣಿಗೆ ಬಿದ್ದ. ಆ ಯುವಕ, ಹಿಂದೆಯಾದರೂ ಯಾರಾದರೂ ಗುರುತು ಸಿಗುತ್ತಾರೇನೋ ಎಂಬಂತೆ, ಹಿಂದೆ ತಿರುಗಿ ನಾನು ಕೂತ ದಿಕ್ಕಿನಲ್ಲಿ ನೋಡಿದ. ನನ್ನನ್ನು ಕಂಡ ತಕ್ಷಣ ಅವನು ಕಣ್ಣು ಅರಳಿಸಿ ಎದ್ದು ನಿಂತ.
ಪೈಲವಾನ್ ತರ ಭಾರಿ ದೇಹ. ನನ್ನನ್ನೇ ದಿಟ್ಟಿಸಿ ನೋಡಿ, ನನ್ನ ಕಡೆಗೆ ಬರಲು ಹೆಜ್ಜೆ ಹಾಕಿದ. ನನ್ನ ಕಾಲೇಜು ದಿನಗಳ ಚೇಷ್ಟೆಗಳು ನನ್ನನ್ನು ಈವತ್ತು ಸಿಕ್ಕಿ ಹಾಕಿಸಿದವ, ಎಂದು ಒಂದು ಬಾರಿ ಯೋಚಿಸಿದೆ. ಹೊರದಾರಿಗಳನ್ನ ಒಮ್ಮೆ ನೋಡಿಕೊಂಡೆ. ಅಷ್ಟುಹೊತ್ತಿಗಾಗಲೇ ಗಜಗಾತ್ರದ ಯುವಕ ನನ್ನಿಂದ ಕೆಲವೇ ಹೆಜ್ಜೆ ದೂರದಲ್ಲಿ ನಿಂತು ನನ್ನನ್ನು ನೋಡುತ್ತಿದ್ದ. ದಿಟ್ಟಿಸಿ ಅವನನ್ನೇ ಗಮನಿಸಿದೆ. ಎಲ್ಲೋ ನೋಡಿದೀನಲ್ಲ ಈ facecutನ ಅನಿಸಿತು. ಅವನು ನಿಂತ ಜಾಗದಿಂದಲೇ ಮೆದುವಾಗಿ, "ಹಾಯ್ ಮಾಧವ್", ಅಂದಕೂಡಲೇ ನನಗೆ ಗೊತ್ತಾಯಿತು, ಇವನು ನಾಡಿ ಮತ್ತೆ ನನ್ನ ಕಾಲೇಜು ಸ್ನೇಹಿತ ಬುರ್ಲಿ ಅಂತ.