ಕನ್ನಡ ಸಾಹಿತ್ಯಲೋಕದ ಅರಳು ಪ್ರತಿಭೆ ಪುಷ್ಪಲತಾ
ಗಂಡಿಗೆಂದು ನೋಟ ಕೊಟ್ಟನು.....
ಹೌದು, ಸಾಮಾನ್ಯವಾಗಿ ಅಂದಚೆಂದವನ್ನು ಬಣ್ಣಿಸಲು ಗಂಡಿನ ನೋಟವೇ ಚೆನ್ನ ಎನ್ನಬಹುದು. ಅಲ್ಲದೇ ಅದನ್ನು ಅಕ್ಷರ ರೂಪದಲ್ಲಿ ಬರೆದು ಸಂತಸ ಪಡುವ ಜೀವವೆಂದರೆ ಗಂಡು ಜೀವವೆನ್ನಬಹುದು.ಅದಕ್ಕೆಂದೇ ಇಂದಿಗೂ ಎಷ್ಟೋ ಕವನಗಳನ್ನು ಗಂಡಸರೇ ಹೆಚ್ಚಾಗಿ ಬರೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಆದರೆ ಈ ಮಾತಿಗೆ ಅಪವಾದವೆಂಬಂತೆ ಬೆಂಗಳೂರಿನ ಪುಷ್ಪಲತಾ ತಮ್ಮನ್ನು ಕವಿತೆ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲಿ ಕವಿತೆ ಬರೆಯಲು ಆರಂಭಿಸಿದ್ದ ಪುಷ್ಪಲತಾ, ಸುಮ್ಮನೇ ಮನದಲ್ಲಿ ಹೊಳೆದಿದ್ದನ್ನು ಬರೆದಿಡುತ್ತಿದ್ದರಂತೆ. ಆ ರೀತಿ ಬರೆದ ಕವಿತೆಗಳ ಪುಸ್ತಕ ತುಂಬಿದ ಮೇಲೆ ಅವರಿಗನಿಸಿದ್ದು ನಾನೂ ಕವಿಯಾಗುತ್ತಿದ್ದೇನೋ ಎಂದು. ಇದನ್ನರಿತ ಅವರ ತಾಯಿ ಕಮಲಮ್ಮನವರು ಪ್ರೋತ್ಸಾಹಿಸಿ ಬೆಂಬಲಿಸಿದರು. ಈ ರೀತಿ ಪುಷ್ಪಲತಾ ಕವಿಯಿತ್ರಿಯಾಗಿ ರೂಪುಗೊಂಡ ಬಗೆಯನ್ನು ಬಣ್ಣಿಸುತ್ತಾರೆ.
ಇವರ ಮನದಾಳದಲ್ಲಿ ಮೂಡಿದ ಕವಿತೆಗಳಲ್ಲಿ ಹೆಚ್ಚಾಗಿ ಪ್ರಾಪಂಚಿಕ ಸುಖ ಮತ್ತು ಪ್ರೀತಿ, ಪ್ರೇಮದ ವಿಷಯಗಳೇ ತುಂಬಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈ ಕವಿ ಮನೋಭಾವ ಪುಷ್ಪಲತಾರಲ್ಲಿ ಮೂಡಿದ್ದು ಕಲಾದೇವಿ ಜನ್ಮದಿಂದಲೇ ಒಲಿದಿರುತ್ತಾಳೇ ಎಂಬುದಕ್ಕೆ ಸಾಕ್ಷಿ ಎನ್ನಬಹುದು.
ವ್ಯವಹಾರಸ್ಥರಾದ ಪುಷ್ಪಲತಾರ ತಂದೆ ಸೋಮಶೇಖರಪ್ಪ, ಮಗಳು ಕನ್ನಡದಲ್ಲಿ ಇಷ್ಟೊಂದು ಚೆನ್ನಾಗಿ ಕವಿತೆ ರಚಿಸುತ್ತಿದ್ದಾಳೆ ಎಂದರೆ ನನಗೆ ಹೆಮ್ಮೆ ಎನಿಸುತ್ತದೆ. ಏಕೆಂದರೆ ಎಲ್ಲರೂ ಇಂಗ್ಲಿಷ್ ಗುನುಗುನಿಸುವ ಈ ದಿನಗಳಲ್ಲಿ ನನ್ನ ಮಗಳು ಕನ್ನಡಕ್ಕಾಗಿ-ಕನ್ನಡದಿಂದಲೇ ಒಬ್ಬ ಕವಿಯಿತ್ರಿಯಾಗಿ ಬೆಳೆಯಲಿ ಎಂದು ನನ್ನ ಬಯಕೆ ಎನ್ನುತ್ತಾರೆ.
ಬೆಂಗಳೂರಿನ ಆಚಾರ್ಯ ಇನ್ಸ್ಟ್ಯೂಟ್ನಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಓದುತ್ತಿರುವ ಪುಷ್ಪಲತಾ, ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸದಾದ ನಕ್ಷತ್ರವಾಗಿ ಉದಯಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಪುಷ್ಪಲತಾರ ಇನ್ನೊಂದು ವಿಶೇಷವೆಂದರೆ ಅಂದವಾದ ಚಿತ್ರ ರಚಿಸುವುದು. ಈಗಾಗಲೇ ಸುಮಾರು 35ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿರುವ ಇವರು, ಈಗಾಗಲೇ ಇವರ ಒಂದೆರಡು ಚಿತ್ರಗಳನ್ನು ಚಿತ್ರಪ್ರದರ್ಶನದಲ್ಲಿ ಕೆಲವರು ಮೆಚ್ಚಿ ಹಣ ಕೊಟ್ಟು ಖರೀದಿಸಿದ್ದಾರೆ. ಇದರಿಂದ ಪುಷ್ಪಲತಾರಿಗೆ ತನ್ನಲ್ಲಿರುವ ಕಲೆಗೆ ಬೆಲೆ ಬರುತ್ತದೆ ಎಂಬುದರ ಅರಿವು ಮೂಡಿತಂತೆ. ಇವರ ಮುಗ್ಧತೆಗೆ ಈ ಮಾತೇ ಸಾಕ್ಷಿ.
ತಮಿಳುನಾಡಿನ ಖ್ಯಾತ ಚಿತ್ರಕಲಾವಿದ ಕೆ.ಎನ್.ರಾಮಚಂದ್ರರವರ ಚಿತ್ರಗಳೆಂದರೆ ನನಗೆ ಪಂಚಪ್ರಾಣ ಎನ್ನುವ ಪುಷ್ಪಲತಾ, ಅವರಂತೆ ನಾನು ರಚಿಸಿದ ಚಿತ್ರಗಳು ಖ್ಯಾತಿಯಾಗಬೇಕೆಂದು ಬಯಸುತ್ತೇನೆ ಎನ್ನುತ್ತಾರೆ.
ಇವರ ಇನ್ನೊಂದು ಕೊರಗೆಂದರೆ ಇವರ ಸಹಪಾಠಿಗಳೆಲ್ಲರೂ ಇಂಗ್ಲಿಷ್ ವ್ಯಾಮೋಹಿಗಳಾಗಿದ್ದಾರೆ. ನನ್ನ ಸ್ನೇಹಿತರಿಗ್ಯಾರಿಗೂ ನನ್ನ ಕವನಗಳನ್ನು ಓದುವ ಮತ್ತು ಅರ್ಥ ಮಾಡಿಕೊಳ್ಳುವ ಕನ್ನಡ ಜ್ಞಾನ ಇಲ್ಲ. ಆದರೆ ಸಮಸ್ತ ಕನ್ನಡಿಗ ಓದುಗರೇ ಇರುವಾಗ ನಾನು ಕವಿತೆ ರಚನೆಯನ್ನು ನಿಲ್ಲಿಸುವುದಿಲ್ಲ ಎನ್ನುತ್ತಾರೆ. ಈಗಾಗಲೇ ಇವರ ರಚನೆಯ ಹಲವಾರು ಕವಿತೆಗಳು ನಾಡಿನ ದಿನಪತ್ರಿಕೆ ಮತ್ತು ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಅಂದ ಹಾಗೆ ಕನ್ನಡ ಸಾಹಿತ್ಯ ಲೋಕಕ್ಕೆ ದಾಪುಗಾಲಿಡುತ್ತಿರುವ ಪುಷ್ಪಲತಾ ಅವರಿಗೆ ನಾವೆಲ್ಲರೂ ಶುಭಾಶಯ ಹೇಳಿ ಇವರನ್ನು ಹಾರೈಸೋಣ. ಪುಷ್ಪಲತಾ ಅವರ ಇಮೇಲ್ : [email protected]