ಪರಿಸರಸ್ನೇಹಿ ಕಾಗದ ಗಣಪ : ಕಲಾವಿದ ಹುಸೇನಿ ಕೈಚಳಕ
ಸೋಮವಾರ, ಭಾದ್ರಪದ ಶುಕ್ಲ ಚತುರ್ಥಿಯಂದು ಗಣೇಶ ಚತುರ್ಥಿ. ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಗಣಪನ ಹಬ್ಬಕ್ಕೆ ಸಂಭ್ರಮದ ತಯಾರಿ ನಡೆದಿದೆ. ವಿಧವಿಧದ ಗಣೇಶನ ಮೂರ್ತಿಗಳು ಮಾರುಕಟ್ಟೆಯಲ್ಲಿ ಮನೆಮನೆಸೇರಲು ಕಾದು ಕುಳಿತಿವೆ. ಅವುಗಳಲ್ಲಿ ಕೆಲವು ಜೇಡಿ ಮಣ್ಣಿನಿಂದ ತಯಾರಿಸಿದ ಪರಿಸರಪ್ರೇಮ ಗಣೇಶನಾದರೆ, ಹಲವಾರು ಪರಿಸರಸ್ನೇಹಿಯಲ್ಲದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ್ದವು.
ಮಣ್ಣಿನಿಂದ ತಯಾರಿಸಿದ, ನೈಜವಾದ ಬಣ್ಣ ಬಳಸಿದ ಗಣಪನನ್ನೇ ಕೊಂಡು ಪೂಜಿಸಿ ಎಂಬ ಕೂಗು ಎಲ್ಲೆಡೆ ಎದ್ದಿದೆ. ಮಣ್ಣು ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ನಲ್ಲಿ ಗಣಪ ಮೂಡಿರುವುದು ಒಂದೆಡೆಯಾದರೆ, ಸಾಂಝಿ ಕಲಾವಿದ ಮೈಸೂರು ಹುಸೇನಿ ಅವರು ಕಾಗದವನ್ನು ಬಳಸಿ ರಂಗುರಂಗಿನ, ಸೃಜನಶೀಲತೆಯಿಂದ ಕೂಡಿದ ಹಲವಾರು ಗಣಪನ ಚಿತ್ರಗಳನ್ನು ಅರಳಿಸಿದ್ದಾರೆ.
ಕಾಗದವು ನಮ್ಮ ಆಧುನಿಕ ಜೀವನದ ಒಂದು ಭಾಗ. ಇಂದು ಪ್ಲಾಸ್ಟಿಕ್ ಯುಗದಲ್ಲಿಯೂ ಕಾಗದ ತನ್ನದೆ ಸ್ಥಾನ ಹೊಂದಿದೆ. ನಾವು ಕಾಗದವಿಲ್ಲದ ಬದುಕನ್ನು ಊಹಿಸಲು ಸಾಧ್ಯವಾಗದು. ಪ್ರತಿದಿನ ದಿನಪತ್ರಿಕೆಯಿಂದ ಆರಂಭವಾಗಿ ಅದರ ಇರುವಿಕೆಯನ್ನು ವಿಸ್ತರಿಸುತ್ತಾ ಸಾಗಿ ಶಾಲೆಯ ಮಕ್ಕಳಿಂದ ಹಿಡಿದು ಚಲಾವಣೆಯಲ್ಲಿರುವ ನೋಟುಗಳವರೆಗೂ ಕಾಗದ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಂತಹ ಕಾಗದವನ್ನು ಪರಿಸರಸ್ನೇಹಿ ಎಂದು ಕರೆಯಬಹುದು.
ಆಡುಮಾತಿಗಿಂತಲೂ ಬರೆದು ನೀಡಿದ ಪತ್ರಕ್ಕೆ ಹೆಚ್ಚು ಮಾನ್ಯತೆ. ಕಾಗದವನ್ನು ಬಳಸುವ ವ್ಯಕ್ತಿಯಿಂದ ವ್ಯಕ್ತಿಗೆ ಅವರ ಅಭಿವ್ಯಕ್ತಿ ಬದಲಾಗುತ್ತದೆ. ಕಾಗದವನ್ನು ಬಳಸುವುದು ಶತಶತಮಾನಗಳಿಂದ ನಿರಂತರವಾಗಿ ಸಾಗಿ ಬರುತ್ತಿದೆ. ನಮ್ಮ ದೇಶದ ಜನಪದ ಕಲೆಗಳಲ್ಲಿ ಕಾಗದ ಕತ್ತರಿ ಕಲೆ (ಸಾಂಝಿ) ಒಂದು. ಕಲಾವಿದ ತನ್ನ ಸ್ಮೃತಿಪಟಲದಲ್ಲಿರುವ ಚಿತ್ರವನ್ನು ಕಾಗದದ ಮೇಲೆ ಮೂಡಿಸಿ ನಂತರ ಕತ್ತರಿಯಿಂದ ಅಥವ ಹರಿತವಾದ ಚಾಕುವಿನಿಂದ ಕತ್ತರಿಸಿ ಕಲಾಕೃತಿಯನ್ನು ರಚಿಸುತ್ತಾನೆ. ಈ ಕಲೆಯು ತಲತಲಾಂತರದಿಂದ ನಡೆದು ಬಂದಿದೆ. ಇಂತಹ ಕಲೆಯನ್ನು ನಿರಂತರವಾಗಿ ಕರ್ನಾಟಕದಾದ್ಯಂತ ಶಿಬಿರ, ಕಾರ್ಯಾಗಾರ, ಪ್ರದರ್ಶನಗಳನ್ನು ಮೈಸೂರಿನ ಕಲಾವಿದ ಎಸ್. ಎಫ್. ಹುಸೇನಿಯವರು ನಡೆಸಿಕೊಂಡು ಬರುತ್ತಿದ್ದಾರೆ.
ಕಲಾವಿದ ಎಸ್. ಎಫ್. ಹುಸೇನಿಯವರು ರಚಿಸಿರುವ ಪರಿಸರಸ್ನೇಹಿ ಕಾಗದ ಗಣಪ. ಕಾಗದವನ್ನು ಕತ್ತರಿಸಿ ಕಲೆ ಅರಳಿಸುವ ಕಲಾವಿದ. ತಮ್ಮ ವಿಶಿಷ್ಟ ರೀತಿಯ ಕಲಾಕೃತಿಗಳಿಂದಲೇ ಗುರುತಿಸಿಕೊಂಡಿರುವ ಹುಸೇನಿಯವರು ರಚಿಸಿರುವ ಗಣೇಶನ ಕಲಾಕೃತಿಗಳು. ಇಲ್ಲಿನ ಗಣೇಶನ ವೈವಿಧ್ಯಮಯ ಹೊಂದಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಕಾಗದವನ್ನು ಕತ್ತರಿಯಿಂದ ಕತ್ತರಿಸಿದ್ದಾರೆ. ಈ ಚಿತ್ರಗಳು ನೋಡುಗರಿಗೆ ಆಶ್ಚರ್ಯ ಉಂಟುಮಾಡುತ್ತದೆ. ಪ್ರತಿಯೊಂದು ಕಲಾಕೃತಿಯು ಬಹು ಸರಳವೆನ್ನಿಸಿದರೂ ಅದರ ಕಲಾತ್ಮಕತೆಯಿಂದ ನಮ್ಮನ್ನೂ ಸಹ ಕಾಗದ ಕತ್ತರಿ ಕಲೆಯನ್ನು ಕಲಿಯಲು ಪ್ರೇರೇಪಿಸುತ್ತದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಕಲೆಯು ಒತ್ತಡ ನಿವಾರಿಸಿ ಸೃಜನಶೀಲರಾಗಲು ಸಹಕಾರಿಯಾಗಿದೆ.
ಶಿವನಸಮುದ್ರದಲ್ಲಿ ಹುಸೇನಿ ಜನನ
ಕಲಾವಿದ ಎಸ್.ಎಫ್. ಹುಸೇನಿ ಅವರು ಕಲಾವಲಯದಲ್ಲಿ "ಮೈಸೂರು ಹುಸೇನಿ" ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು.
ಮೈಸೂರು, ಧಾರವಾಡದಲ್ಲಿ ಅಧ್ಯಯನ
ಇವರು ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆರ್ಟ್ ಡಿಪ್ಲೊಮಾ ಮತ್ತು ಆರ್ಟ್ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಪಡೆದಿದ್ದಾರೆ.
ಸದಾ ಪ್ರಯೋಗಶೀಲ ಹುಸೇನಿ
ಹುಸೇನಿಯವರು ಸದಾ ಪ್ರಯೋಗಶೀಲ ಪ್ರಯತ್ನಗಳಿಗೆ, ನಿರಂತರ ಹೊಸತನಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರು ರಚಿಸಿರುವ ಕಲಾಕೃತಿಗಳನ್ನು ಗಮನಿಸುತ್ತಾ ಬಂದಲ್ಲಿ ತಿಳಿಯುತ್ತದೆ. ಒಂದೇ ಬಗೆಯ ಕಲಾಕೃತಿಗಳಿಗೆ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ ಕೆಲಸಗಳಲ್ಲಿ ತೊಡಗಿದ್ದಾರೆ.
ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರ
ಅವರ ವಿಶಿಷ್ಟ ಬಗೆಯ ಕಾಗದ ಭಿತ್ತಿಶಿಲ್ಪಗಳು, ಏಕರೇಖಾಚಿತ್ರಗಳು ಪ್ರಯೋಗಾತ್ಮಕ ಅಮೂರ್ತ ಛಾಯಾಚಿತ್ರಗಳು ಮತ್ತು ಸಾಂಝಿ ಜನಪದ ಕಾಗದ ಕತ್ತರಿಕಲೆ ಕಲಾಕೃತಿಗಳು ಇವರ ಕಲಾಪ್ರತಿಭೆಗೆ ಸಾಕ್ಷಿಯಾಗಿವೆ.
ಸೃಜನಶೀಲತೆ ಮತ್ತು ಕಲಾತ್ಮಕತೆ
ಸಿಡಿಯನ್ನು ಬಳಸಿ ತೆಗೆದಿರುವ ಅಮೂರ್ತ ಛಾಯಾಚಿತ್ರಗಳು ಸುಮಾರು ಐದು ಸಾವಿರಕ್ಕೂ ಹೆಚ್ಚು. ಇದು ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರಯೋಗಗಳಿಗೆ ಒಂದು ಉದಾಹರಣೆ.
ದೇಶದೆಲ್ಲೆಡೆ ಚಿತ್ರಕಲಾ ಪ್ರದರ್ಶನ
ಹುಸೇನಿ ಚಿತ್ರಕಲೆಯನ್ನು ಮೈಸೂರು, ಬೆಂಗಳೂರು, ಧಾರವಾಡ, ಗುಲ್ಬರ್ಗ, ಉಡುಪಿ ಹೀಗೆ ಅನೇಕ ಕಡೆಗಳಲ್ಲಿ 9 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು, ಸುಮಾರು 70ಕ್ಕೂ ಹೆಚ್ಚು ಸಮೂಹ ಕಲಾಪ್ರದರ್ಶನ ಕಾರ್ಯಗಾರಗಳಲ್ಲಿ ಭಾಗವಹಿಸಿ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಾದ ಮುಂಬೈ, ದೆಹಲಿ, ಚೆನ್ನೈ ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ.
ಗ್ರಾಮೀಣ ಜನತೆಗೆ ತಲುಪಿಸುವ ಗುರಿ
ಹುಸೇನಿಯವರ ವಿಶೇಷತೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಕಲೆ ತಲುಪುವ ಉದ್ದೇಶದಿಂದ ತಮ್ಮದೇ "ಸಾಂಝಿ ಕಲಾಲೋಕ" ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತುವರ್ಷಗಳಿಂದ ಚಿತ್ರಕಲಾ ಪ್ರದರ್ಶನ, ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರ ಅನೇಕ ಕಲಾಕೃತಿಗಳು ದೇಶ ಮತ್ತು ವಿದೇಶಗಳ (ಆಸ್ಟ್ರೇಲಿಯ, ಫಿನ್ಲ್ಯಾಂಡ್, ಜರ್ಮನ್, ಸೌತ್ ಆಫ್ರಿಕ, ದೋಹ) ಖಾಸಗಿ ಸಂಗ್ರಹಕಾರರಲ್ಲಿ ಸಂಗ್ರಹಗೊಂಡಿವೆ.
ಸಾಂಝಿ ಕಲಾವಿದ ಹುಸೇನಿಗೆ ಸನ್ಮಾನ
ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ ಸಮೀಪದ ಪೌರಾಣಿಕ ಹಿನ್ನೆಲೆಯ ಕಾಕೋಳು ಶ್ರೀ ಶ್ರೀಪಾದರಾಜ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚರ್ತುಭುಜ ವೇಣುಗೋಪಾಲನ ಬ್ರಹ್ಮರಥೋತ್ಸವ ಅಷ್ಟ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ರೀ ಕೃಷ್ಣಕಲಾದರ್ಶನ ಸಮೂಹ ಚಿತ್ರ ಪ್ರದರ್ಶನದಲ್ಲಿ ಸಾಂಝಿ ಕಲಾವಿದ ಎಸ್.ಎಫ್.ಹುಸೇನಿ ರವರಿಗೆ ಮುಖ್ಯ ಅತಿಥಿ ವಿದ್ವಾನ್ ಆರ್.ಕೆ.ಪದ್ಮನಾಭರವರಿಂದ ಗೌರವಾರ್ಪಣೆ.
ಮೈಸೂರು ದಸರಾ ಕಲಾಪ್ರದರ್ಶನ ಪ್ರಶಸ್ತಿ
ಎಸ್.ಎಫ್.ಹುಸೇನಿಯವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ. ಅವುಗಳಲ್ಲಿ ಮುಖ್ಯವಾಗಿ 1999ರಲ್ಲಿ ಮೈಸೂರು ದಸರಾ ಕಲಾಪ್ರದರ್ಶನ ಪ್ರಶಸ್ತಿ, 2001ರಲ್ಲಿ ಮೈಸೂರಿನ ಕನ್ನಡ ಸಂಸ್ಕೃತಿ ಇಲಾಖೆಯಿಂದ "ಯುವಸಂಭ್ರಮ" ಪ್ರಶಸ್ತಿ.
ಜಪಾನ್ ಹಬ್ಬದಲ್ಲಿ ನಾಲ್ಕು ಪ್ರಶಸ್ತಿ
ಧಮಸ್ಥಳದ ಶಾಂತಿವನ ಟ್ರಸ್ಟ್ ವತಿಯಿಂದ ನಡೆಯುವ ರಾಜ್ಯ ಮಟ್ಟದ ಅಂಚೆಕುಂಚ ಸ್ಪರ್ಧೆಯಲ್ಲಿ 2001ರಿಂದ ಸತತ ನಾಲ್ಕು ಹಾಗು 2007ರಲ್ಲಿ ಒಟ್ಟು ಐದು ಬಾರಿ ಪ್ರಶಸ್ತಿ. ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಜಪಾನ್ ಹಬ್ಬದಲ್ಲಿ 2009ರಿಂದ ನಾಲ್ಕು ಬಾರಿ ಪ್ರಶಸ್ತಿ.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಸ್ಕಾಲರ್ಶಿಪ್
ಕಿರಿಗಾಮಿ ಪೇಪರ್ ಕಟ್ಟಿಂಗ್ಸ್ ಕಾಗದ ಕಲೆಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ. 1999ರಲ್ಲಿ ಮೈಸೂರಿನ ರಾಮನ್ಸ್ ಕಂಪ್ಯೂಟರ್ಸ್ರವರ "ರಾಕೊಫೇಸ್ಟ್" ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ 1999 ಮತ್ತು 2000ರಲ್ಲಿ ಎರಡು ಬಾರಿ ಸ್ಕಾಲರ್ಶಿಪ್.
ಪೋಸ್ಟರ್ ರಚನೆಗೆ ಪ್ರಶಸ್ತಿ
ವೈಜಯಂತಿ ಚಿತ್ರಕಲಾ ಶಾಲೆಯಿಂದ ಬೆಸ್ಟ್ ಮ್ಯೂರಲ್ ಪ್ರಶಸ್ತಿ, 2001-ರಲ್ಲಿ ಮೈಸೂರಿನ ಮಾನಸಗಂಗ್ರೋತಿಯ ಮಹಿಳಾ ಅಧ್ಯಯನ ಕೇಂದ್ರದಿಂದ ಪೋಸ್ಟರ್ ರಚನೆಗೆ ಪ್ರಶಸ್ತಿ.
ಕಲಾಯಾತ್ರೆ ಹೀಗೆ ನಿರಂತರವಾಗಿ ಸಾಗಲಿ
ಇವುಗಳ ಜೊತೆಗೆ ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಗಳು, ಸಾಂಝಿ ಕಲಾಸಾಮ್ರಾಟ್, ಚಿತ್ರರತ್ನ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ಕಲಾಯಾತ್ರೆ ಹೀಗೆ ನಿರಂತರವಾಗಿ ಸಾಗಲಿ ಎಂದು ಹಾರೈಸೋಣ.
ಕಲೆಯೇ ಒತ್ತಡ ಕಳೆಯುವ ಸಾಧನ
"ಒತ್ತಡವೇ ತುಂಬಿರುವ ಈ ಜಗತ್ತಿನಲ್ಲಿ ಕಲೆಯೇ ಒತ್ತಡವನ್ನು ಕಳೆಯುವ ಸಾಧನ" ಎಂದೇ ನಂಬಿರುವ ಹುಸೇನಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯ ಬೇಕಾಗಿದ್ದಲ್ಲಿ 9845153277ಕ್ಕೆ ಕರೆ ಮಾಡಬಹುದು ಇಲ್ಲವೆ ಇವರ ಬ್ಲಾಗ್ ನಲ್ಲಿ ಸಾಂಝಿ ಕಾಗದ ಕಲೆಯ ಚಿತ್ರಗಳನ್ನು ನೋಡಬಹುದಾಗಿದೆ.